Tuesday, 27 December 2016

ವಿವೇಚನೆ


ವಿವೇಚನೆ


ಈ ಪ್ರಪಂಚದಲ್ಲಿ ಸಲಹೆ ಕೊಡುವವರ ಗುಂಪುಗಳು ದಂಡಿಯಾಗಿವೆ. ಅದೇ ರೀತಿ ಸಲಹೆ ಪಡೆಯುವವರ ಗುಂಪುಗಳು ಕೂಡ ದಂಡಿಯಾಗಿವೆ. ಕೆಲವೊಂದು ಸಂದರ್ಭಗಳಲ್ಲಿ ಪರಿಸ್ಥಿತಿಯ ಒತ್ತಡಕ್ಕೋ ಅಥವಾ ವಿಷಯದಲ್ಲಿರುವ ಸಂಕೀರ್ಣತೆಗೋ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಕೆಲವರು ತಡವರಿಸುತ್ತಾರೆ.  ಅಂಥ ಸಂದರ್ಭಗಳಲ್ಲಿ ಆಪ್ತರಾದವರ ಅಥವಾ ಸೂಕ್ತ ಸಲಹೆ ಕೊಡುವವರ ಹುಡುಕಾಟ ಶುರುವಾಗುತ್ತದೆ. ಸಲಹೆಗಳನ್ನು ಕೊಡುವುದರಲ್ಲಿ ಮತ್ತು ಸ್ವೀಕರಿಸುವುದರಲ್ಲಿ ಸಾಕಷ್ಟು ಕ್ಲಿಷ್ಟತೆ ಅಡಗಿದೆ. ಸುಕ್ಕಾಸುಮ್ಮನೆ, ಬೇಕಾಬಿಟ್ಟಿ ಸಲಹೆಗಳನ್ನು ಕೊಡುವುದು ಅಪಾಯ. ಅಳೆದು ತೂಗಿ ಸಲಹೆ ನೀಡಿದರಷ್ಟೆ ಅದಕ್ಕೊಂದು ಬೆಲೆ. ಇಲ್ಲವಾದಲ್ಲಿ ಅನಾಹುತಕ್ಕೆಡೆಮಾಡೀತು! ಇದೇ ಮಾನದಂಡ ಸಲಹೆ ಸ್ವೀಕರಿಸುವವರಿಗೂ ಅನ್ವಯಿಸುತ್ತದೆ. 

ನಮ್ಮ ಸುತ್ತ ಹಲವಾರು ಗುಣ ವಿಶೇಷಗಳುಳ್ಳ ಜನಗಳನ್ನು ನಾವು ದಿನನಿತ್ಯ ನೋಡುತ್ತಲೆ ಇರುತ್ತೇವೆ. ನನಗೆಲ್ಲವೂ ತಿಳಿದಿದೆ. ನಾನು ಯಾರ ಮಾತನ್ನು ಕೇಳುವ ಅವಶ್ಯಕತೆಯಿಲ್ಲ. ನಾನು ನಡೆದದ್ದೆ ದಾರಿ ಎನ್ನುವ ಗುಂಪು ಒಂದು ಕಡೆ.  ಇಂತವರಿಗೆ ಯಾರ ಸಲಹೆಗಳೂ ಬೇಕಾಗಿಲ್ಲ. 

ಎಲ್ಲವನ್ನೂ ತಿಳಿದಿದ್ದರೂ ಬೇರೆಯವರ ಅಭಿಪ್ರಾಯಗಳನ್ನು ಕೇಳಿಸಿಕೊಳ್ಳುವ ವ್ಯವಧಾನ, ಅನಿಸಿಕೆಗಳನ್ನು ಅರ್ಥಮಾಡಿಕೊಳ್ಳುವ ರೀತಿ, ಉತ್ತಮ ಅಂಶಗಳಿದ್ದ ಪಕ್ಷದಲ್ಲಿ  ಅಂಥವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು, ಸಲಹೆ ಕೊಟ್ಟವರನ್ನು ಸ್ಮರಿಸುವುದು ಇನ್ನೊಂದು ಗುಂಪು. ಇಂತವರನ್ನು ತಕ್ಕ ಮಟ್ಟಿಗೆ ವಿವೇಚನಾಶೀಲರೆನ್ನಬಹುದು.

ಇನ್ನೂ ಕೆಲವರು ಎಲ್ಲ ತಿಳಿದಿದೆ ಎಂಬ ಭ್ರಮೆಯಲ್ಲಿರುತ್ತಾರೆ. ಆ ರೀತಿಯ ಅಭಿಪ್ರಾಯ ಜಗಜ್ಜಾಹರಾಗಲು ಏನೆಲ್ಲಾ ಬೇಕೋ ಅದನ್ನೆಲ್ಲಾ ವ್ಯವಸ್ಥಿತವಾಗಿ ಮಾಡುತ್ತಾರೆ. ನಿಜಾಂಶದಲ್ಲಿ ಅವರಿಗೆ ಬೇರೆಯವರ ಸಲಹೆಯ ಅವಶ್ಯಕತೆಯಿರುತ್ತದೆ. ಆದರೆ ಸಲಹೆ ತೆಗೆದುಕೊಳ್ಳಲು ಒಂದು ತರಹದ ಬಿಗುಮಾನ, ಅಹಂ ಅಡ್ಡಿ ಬರುತ್ತದೆ. ಆದರೂ ಸುತ್ತಿಬಳಸಿ ಮಾತನಾಡಿ ಬೇರೆಯವರಿಂದ ಅಭಿಪ್ರಾಯ ಸಲಹೆಗಳನ್ನು ಜಾಣ್ಮೆಯಿಂದ ಸಂಗ್ರಹಿಸುವ ಕಲೆ ಇವರಿಗೆ ಕರಗತ. ತಾವು ತೆಗೆದುಕೊಂಡ ಸಲಹೆಗಳಿಂದ ಸಫಲತೆಯನ್ನು ಕಂಡಿದ್ದರೆ, ಸಲಹೆಪಡೆದವರನ್ನು ಸ್ಮರಿಸುವ ಗೋಜಿಗೆ ಇವರು ಹೋಗುವುದಿಲ್ಲ.   ಹಾಗೊಂದು ವೇಳೆ ಸಲಹೆ ಕೊಟ್ಟವರನ್ನು ಹೊಗಳಿ ಬಿಟ್ಟರೆ ಮುಂದಿನ ದಿನಗಳಲ್ಲಿ ಅವರು ತನ್ನ ಮೇಲೆ ಸವಾರಿಮಾಡಬಹುದೆಂದು ಗುಮಾನಿ ಇವರದ್ದು. ಕೊಟ್ಟ ಸಲಹೆಯಿಂದ ಏನಾದರೂ ಎಡವಟ್ಟಾದರೆ ಸಲಹೆ ಕೊಟ್ಟವನಿಗೆ ರಾಹು ಮತ್ತು ಶನಿ ಏಕಕಾಲಕ್ಕೆ ಒಕ್ಕರಿಸಿಕೊಳ್ಳುತ್ತಾರೆ. ಕೊಟ್ಟ ಸಲಹೆಯಿಂದ ಆದ ನಷ್ಟದ ಬಗ್ಗೆ ಇನ್ನಿಲ್ಲದ ಅಲವತ್ತುಗೊಳ್ಳುತ್ತಾರೆ. ಆದ ನಷ್ಟದ ಕಿರೀಟ ನಿಮ್ಮ ತಲೆಯ ಮೇಲಿರುತ್ತದೆ. ಇಂಥವರಿಗೆ ಸಲಹೆ ಕೊಡುವಾಗ ಬಹಳ ಎಚ್ಚರಿಕೆಯಿಂದಿರಬೇಕು. ಎಚ್ಚರ ತಪ್ಪಿದ್ದರೆ ಅಪಾಯ ಖಂಡಿತ. 

ನಾವು ಕೊಡುವ ನೂರಾರು  ಸಲಹೆಗಳು ಕೆಟ್ಟದಾಗಿರಬಹುದು. ಮೂರ್ಖತನದಿಂದ ಕೂಡಿರಬಹುದು ಅಥವಾ ಸಂದರ್ಭಾನುಸಾರ ಯೋಗ್ಯವಾಗಿಲ್ಲದಿರಬಹುದು. ಆದರೆ ಒಂದು ಸಲಹೆ ಉತ್ತಮವಾಗಿರಬಹುದು, ಜಾಣತನದಿಂದ ಕೂಡಿರಬಹುದು ಅಥವಾ ಸಮಯೋಚಿತವಾಗಿರಬಹುದು. ಆದರೆ ನಾವು ಕೊಡುವ ಸಲಹೆಯನ್ನು ಸ್ವೀಕರಿಸುವ ವ್ಯಕ್ತಿ ನೂರಾರಲ್ಲಿ ಆಯ್ಕೆ ಮಾಡಿಕೊಳ್ಳುತ್ತಾನೋ! ಯೋಗ್ಯವಾದ ಒಂದನ್ನು ಆಯ್ಕೆ ಮಾಡಿಕೊಳ್ಳುತ್ತಾನೋ!   ಆತನ ವಿವೇಚನೆಗೆ ಬಿಟ್ಟಿದ್ದು. 

ಅದೇ ರೀತಿ ಆ ವ್ಯಕ್ತಿ ಇತರರಿಂದ ಕೂಡ ಸಲಹೆ ಪಡೆಯುತ್ತಿರಬಹುದು. ಇತರರು ಕೊಡುವ ನೂರಾರು ಸಲಹೆಗಳು ಉತ್ತಮವಾಗಿರಬಹುದು. ಆದರೆ ಒಂದು ಸಲಹೆ ಕೆಟ್ಟದ್ದೂ ಆಗಿರಬಹುದು, ಮೂರ್ಖತನದಿಂದ ಕೂಡಿರಬಹುದು ಅಥವಾ ಸಂದರ್ಭಾನುಸಾರ ಯೋಗ್ಯವಾಗಿಲ್ಲದಿರಬಹುದು. 
ಇಲ್ಲಿ ಕೂಡ ಅಷ್ಟೆ, ಸಲಹೆ ಸ್ವೀಕರಿಸುವ ವ್ಯಕ್ತಿ ನೂರಾರಲ್ಲಿ ಆಯ್ಕೆ ಮಾಡಿಕೊಳ್ಳುತ್ತಾನೋ ಅಥವಾ ಯೋಗ್ಯವಲ್ಲದ ಒಂದನ್ನು ಆಯ್ಕೆ ಮಾಡಿಕೊಳ್ಳುತ್ತಾನೋ!   ಆತನ ವಿವೇಚನೆಗೆ ಬಿಟ್ಟಿದ್ದು. 

ನಮ್ಮ ಪುರಾಣ ಮತ್ತು ಇತಿಹಾಸದ ಪುಟಗಳನ್ನು ತಿರುವಿದಾಗ ಕೆಟ್ಟಸಲಹೆಗಳನ್ನು ಪಡೆದ ಎಷ್ಟೋ ಸಾಮ್ರಾಜ್ಯಗಳು ಅಳಿದುಹೋದ ಉದಾಹರಣಗಳಿವೆ.  ಅದೇ ರೀತಿ ಉತ್ತಮ ಸಲಹೆಗಳನ್ನು ಪಡೆದ ರಾಜ ಮಹಾರಾಜರು ಜನಮನದಲ್ಲಿ ಚಿರಸ್ಥಾಯಿಯಾಗಿ ನೆಲೆಸಿದ್ದಾರೆ.
ಶಕುನಿಯ ನೆರಳಲ್ಲಿ ಬೆಳೆದ ದುರ್ಯೋಧನ ಬೆಳಕನ್ನು ನೋಡುವ ಗೋಜಿಗೆ ಹೊಗಲಿಲ್ಲ.  ಇದರ ಪರಿಣಾಮ ನಿಮಗೆಲ್ಲ ತಿಳಿದೇ‌ಇದೆ.  ಶ್ರೀಕೃಷ್ಣನ ಸಲಹೆ ಪಡೆದ ಪಾಂಡವರು ತಮಗೆ ನ್ಯಾಯವಾಗಿ ಸಿಗಬೇಕಾದ ಸಾಮ್ರಾಜ್ಯವನ್ನು ಮರಳಿ ಪಡೆಯುತ್ತಾರೆ.  

ಚಾಣಕ್ಯನ ಸಲಹೆ ಪಡೆದ  ಚಂದ್ರಗುಪ್ತ ಮಹಾರಾಜನು ಕಳೆದುಕೊಂಡ ರಾಜ್ಯವನ್ನು ಪುನಃ ಗೆಲ್ಲುವಲ್ಲಿ ಸಫ಼ಲನಾಗುವದಲ್ಲದೆ ಸುವರ್ಣಯುಗದ ಪರ್ವಕ್ಕೆ ನಾಂದಿ ಹಾಡಿದ್ದನ್ನು ನಾವಿಲ್ಲಿ ಸ್ಮರಿಸಬಹುದು.  ಇದು ಸಂದರ್ಭಕ್ಕೆ ತೋಚಿದ ಒಂದೆರಡು ಉದಾಹರಣೆಗಳಷ್ಟೇ!! ನಮ್ಮ ಪುರಾಣ ಇತಿಹಾಸಗಳ ಪುಟಗಳನ್ನು ತಿರುವಿದಾಗ ಇಂತಹ ನೂರಾರು ಉದಾಹರಣೆಗಳು ಕಾಣಸಿಗುತ್ತವೆ.   

ಇಲ್ಲಿ ಸಲಹೆ ಕೊಡುವ ವ್ಯಕ್ತಿಗಳು ಮುಖ್ಯವಾಗುವುದೇ ಇಲ್ಲ. ಸಲಹೆ ಕೊಡುವವರ ಯಶಸ್ಸಿನ ಮಾನದಂಡ ಕೂಡ ಗೌಣವಾಗುತ್ತದೆ. ಸರಿ ತಪ್ಪುಗಳನ್ನು ತೂಗಿ ವಿವೇಚನೆಯಿಂದ ಆಯ್ದುಕೊಂಡ ಸಲಹೆ ಆತನ ಯಶಸ್ಸಿನ ಕಾರಣವಾಗುತ್ತದೆ. ಏಕೆಂದರೆ ಆಯ್ಕೆಯ ಪರಿಣಾಮಗಳು ಆ ವ್ಯಕ್ತಿಯನ್ನು ನೇರವಾಗಿ ಬಾಧಿಸುತ್ತದೆಯೋ ಹೊರತು ಸಲಹೆ ಕೊಟ್ಟವರನ್ನಲ್ಲ!

ವಿವೇಚನಾಯುಕ್ತ ಆಲೋಚನೆಗಳೊಂದಿಗೆ ಮುನ್ನಡೆಯುತ್ತ ಹೊಸ ವರ್ಷವನ್ನು ಸ್ವಾಗತಿಸೋಣ.  
ಏನಂತೀರಿ! 


-ಮಹೇಶ ಶ್ರೀ ದೇಶಪಾಂಡೆ
      ತುಷಾರಪ್ರಿಯ 


Friday, 23 December 2016

ಭಾರತಾಂಬೆಯ ಹೆಮ್ಮೆಯ ಪುತ್ರ


ಭಾರತಾಂಬೆಯ ಹೆಮ್ಮೆಯ ಪುತ್ರ


ಅಚಲಮನದ ಅಟಲ ಬಿಹಾರಿ ವಾಜಪೇಯಿ
ದಿವ್ಯದೃಷ್ಟಿಯ ಧೀರ ಧೀಮಂತನು
ಭವ್ಯಭಾರತದ ದಿಟ್ಟ ನೇತಾರನು
ಕಮಲ ಕನಸಿನ ಸಾಕಾರಮೂರ್ತಿ
ನೇರ ನುಡಿಯ ಸದ್ಗುಣ ಸಂಪನ್ನ
ಅಕಳಂಕ ಬಿರುದಾಂಕಿತ ಸಂಸದೀಯಪಟು
ಪ್ರಧಾನಿ ಪಟ್ಟಕೆ ಶೋಭೆ ತಂದವ
ಕೋಟಿ ಕೋಟಿ ಹೃದಯಗಳ ಪ್ರತಿಧ್ವನಿ
ದೀನ ದಲಿತ ಶೋಷಿತರ ಆಶಾಕಿರಣ
ಚತುಷ್ಪದ ಮಾರ್ಗದ ದೂರಗಾಮಿ ಯೋಜಿತ
ಗಂಗಾ ಕಾವೇರಿಯ ಕನಸುಗಾರ
ಪಕ್ಷಾತೀತ ಪ್ರಭಾವದ ಅಜಾತಶತ್ರು
ಸರ್ವಧರ್ಮ ಸಮನ್ವಯಿ ಹಿಂದೂವಾದ ಹರಿಕಾರ
ಮುಂದಾಲೋಚನೆಯ ಮಂತ್ರಗಾರ
ಜನಸಂಘಟನೆಯ ತಂತ್ರಗಾರ
ಭಾರತ ಬಲವ ಜಗಕೆಸಾರಿದ ಜಗದೇಕವೀರ
ದೊಡ್ಡಣ್ಣನ ಆರ್ಥಿಕ ದಿಗ್ಬಂಧನಕೆ ಸಡ್ಡುಹೊಡೆದ ಸರದಾರ
ಕಾವ್ಯಕಾರಂಜಿಯ ಚಿಲುಮೆಯ ಬುಗ್ಗೆ
ಭಾರತಾಂಬೆಯ ಹೆಮ್ಮೆಯ ಪುತ್ರ
ಅಚಲಮನದ ಅಟಲ ಬಿಹಾರಿ ವಾಜಪೇಯಿ
ಭಾರತ ರತ್ನ ಭಾಜನ 
ಜನುಮದಿನದ ಶುಭಾಶಯಗಳು!
 *-*-*-*


-- ಮಹೇಶ ಶ್ರೀ. ದೇಶಪಾಂಡೆ
           -ತುಷಾರಪ್ರಿಯ

Sunday, 18 December 2016

ಸಾಗರ - ಸಖ


ಸಾಗರ - ಸಖ 


ಜನರೆಲ್ಲ ಜರೆಯುವರು
'ನಾನೊಬ್ಬ ಕುಡುಕ'
ಅವರೇನು ಬಲ್ಲರು
ನನ್ನೆದೆಯ ಮಿಡುಕ
ಹೌದು....... ನಾನು ವ್ಯಸನಿ........
ಇಲ್ಲ‌ಎಂದವರಾರು?
ಹೀರುತ್ತೇನೆ ಪ್ರೇಮ ಗುಟುಕನ್ನು
ಹನಿಹನಿಯಾಗಿ ...... ಹನಿಹನಿಯಾಗಿ......
ಅದರಲ್ಲಿ ಅವಳೆದೆಯ ಬಡಿತವಿದೆ
ಅವಳಪ್ಪುಗೆಯ ಸೆಳೆತವಿದೆ
ಪಿಸುದನಿಯ ಮಿಳಿತವಿದೆ
ಅವಳ ಹಿತನುಡಿಯ ಸೊಬಗಿದೆ
ಕಂಗೆಟ್ಟ ನದಿಯಂತೆ ದಿಕ್ಕುತಪ್ಪಿ ಹರಿದಮನ 
ಕೊನೆಗೊಮ್ಮೆ ಸಾಗರದ ಮಡಿಲಲ್ಲಿ ಎದೆಗೊರಗಿ ಮಲಗಿದೆ
ಪುಟ್ಟ ಮಗುವಾಗಿ ....... 
ಈಗ ಅದಕ್ಕಿಲ್ಲ..... ನೀವು ಜರೆಯುವಿರೆಂಬ ಚಿಂತೆ
ಅದಕ್ಕೆ ಅವೆಲ್ಲ 'ಅಂತೆ ಕಂತೆ'
ಯಾರೇನೇ ಅನ್ನಲಿ ನಾನಿರುವುದು ಅವಳಿದ್ದಲ್ಲೇ ......
ಮಗುವಾಗಿ, ಮಿಗಿಲಾಗಿ, ಅವಳೊಲವ ಸಖನಾಗಿ
ಜನರಿಗೇನು ...... ಅನ್ನಲಿ ಬಿಡಿ
ಏನಾದರೊಂದು ಅನ್ನುವುದೇ ಅವರ ಕೆಲಸ
ನಾನೇಕೆ ಕಳೆದುಕೊಳ್ಳಲಿ ನನ್ನ ಬಾಳಿನ ಸೊಗಸ.......

**__**__**


-- ಮಹೇಶ ಶ್ರೀ. ದೇಶಪಾಂಡೆ
ತುಷಾರಪ್ರಿಯ

Thursday, 15 December 2016

ಸುಖ ನಿದ್ರೆ


ಸುಖ ನಿದ್ರೆ




ಚಿತ್ರ ಗುಪ್ತನಿಗಿಂದು ವಿರಾಮ
ಯುಗಯುಗದ ಜಗದ ಜನರ
ರಾಶಿ ರಾಶಿ ಪಾಪ ಪುಣ್ಯಗಳ 
ಅಳೆದುಸುರಿದು ನರಕಯಾತನೆ!
ಸಾಕು ಸಾಕಾಗಿ ಏಕಾಂಗಿಯಾದ
ಹೇಳದೇ ಕೇಳದೇ ನಾಪತ್ತೆಯಾದ!
ನರಕಾಧಿಪತಿಗಿಂದು ಯಮಭಾರ ಕೆಲಸ
ರಾಶಿ ರಾಶಿ ದಿನಚರಿ ಪುಟಗಳು
ಬಗೆದಷ್ಟೂ ಮೊಗೆದಷ್ಟೂ ಮುಗಿಯದ
ನಿರಂತರ ಪಾಪಗಳ ಜಲಪಾತ
ಅಲ್ಲಲ್ಲಿ ಪುಣ್ಯಗಳ ಇಣುಕು
ಎಲ್ಲೆಲ್ಲೂ ಆತ್ಮಗಳ ರುದ್ರನರ್ತನ
ಅದ್ಯಾವ ಗಳಿಗೆಯಲಿ ಆ ಭಗೀರಥನಿಂದ
ಈ ಭೂಮಿಗಿಳಿದಳೋ ಆ ಗಂಗೆ
ಪಾಪಗಳ ಕೂಪದಲಿ ಮಿಂದೆದ್ದು
ಅವಳೂ ಪತೀತಳಾದಳು!
ಆಗೊಮ್ಮೆ ಈಗೊಮ್ಮೆ ಜೋಗದ ಜಲಪಾತ
ಜಲಬತ್ತಿ ಒಣಗಿ ಬರಿಮೈಲಿ ನಿಂತೀತು!
ಬತ್ತದೀ ಪಾಪಗಳ ಜಲಪಾತ!
ಭೋರ್ಗರೆತ ಹೆಚ್ಚುತಿದೆ...........ಹೆಚ್ಚುತ್ತಲೇ ಇದೇ!
ಕೊಚ್ಚಿಹೋಗದ್ಯಾಕೆ ಈ ಜಗ? ಹುಚ್ಚುಹಿಡಿಯುವುದು ಬಾಕಿ!
ಕೊನೆಮೊದಲಿಲ್ಲದ ಮೊದಲಿಗೆ ಕೊನೆಯೆಂತು?
ಚಿರನಿದ್ರೆಯ ಆತ್ಮಗಳಿಗೆ ಛಡಿಯೇಟಿನ ಸ್ವಾಗತ
ಅಳೆದು ಸುರಿವ ಯಮಯಾತನೆಗೆ ಯಮನೇ ಬಲಿ!
ಚಿತ್ರಗುಪ್ತನಿಗಿಂದು ಸಕ್ಕರೆಯ ಸುಖನಿದ್ರೆ!

**__**__**

--ಮಹೇಶ್ ಶ್ರೀ ದೇಶಪಾಂಡೆ
(ತುಷಾರಪ್ರಿಯ)

Thursday, 8 December 2016

ಪುರಸೊತ್ತು

ಪುರಸೊತ್ತು


             ಬಹಳ ದಿನಗಳ ಮೇಲೆ ಪುರಸೊತ್ತು ಮಾಡಿಕೊಂಡು ಏನಾದರೂ ಬರೆಯಬೇಕೆಂದು ಛಲದಿಂದ ಕೈಗೆ ಪೆನ್ನೆತ್ತಿಕೊಂಡೆ.  ಊಹೂಂ! ಏನೂ ಬರೆಯಲು ತೋಚುತ್ತಿಲ್ಲ. ತಲೆಯೆಲ್ಲಾ ಖಾಲಿ ಖಾಲಿ! ಆದರೂ ಏನಾದರೂ ಬೆರೆಯಲೇಬೇಕೆಂಬ ಹಠದಿಂದ ಪಟ್ಟಾಗಿ ಕುಳಿತೆ. ಹತ್ತು ನಿಮಿಷ ಆಯ್ತು. ಇಪ್ಪತ್ತು ನಿಮಿಷ ಮುಗಿಯಿತು. ಅರ್ಧಗಂಟೆಯೂ ಕಳೆದು ಹೋಯಿತು. ಎದುರಿಗಿದ್ದ ಪೇಪರ ಮೇಲೆ ಒಂದು ಚುಕ್ಕೆಯನ್ನೂ ಇಡಲು ಸಾಧ್ಯವಾಗಲಿಲ್ಲ. ಅರೆ! ನಾನಿವತ್ತು ಪೆನ್ನು ಹಿಡಿದದ್ದು ಪುರಸೊತ್ತು ಮಾಡಿಕೊಂಡು. ಈ 'ಪುರಸೊತ್ತು' ಎಂಬ ವಿಷಯದ ಬಗ್ಗೆ ಯಾಕೆ ಒಂದಷ್ಟು ಹೆಕ್ಕಿ ತೆಗೆಯಬಾರದು. ಪುರಸೊತ್ತು ಮಾಡಿಕೊಂಡು ಒಂಚೂರು ಹರಟೆ ನಿಮ್ಮೊಟ್ಟಿಗೆ ಯಾಕೆ ಹೊಡೆಯಬಾರದು. ಹಾಂ! ನೀವೂ ಪುರಸೊತ್ತು ಮಾಡಿಕೊಂಡು ಬನ್ನಿ. ಒಂದು ಕಪ್ಪು ಕಾಫಿ ಕುಡಿಯುತ್ತಾ ಮಾತಾಡೋಣ. ಏನಂತೀರಿ?

          ಇಂದಿನ ನಗರ ಜೀವನ ನಮ್ಮೆಲ್ಲರ ಬದುಕುವ ಪರಿಯನ್ನು ಬದಲಾಯಿಸಿಬಿಟ್ಟಿದೆ. ಎಲ್ಲವೂ ಯಾಂತ್ರಿಕ. ನಿಗದಿತ ವೇಳಾಪಟ್ಟಿಯನ್ನು ಎಲ್ಲರೂ ರೂಢಿಸಿಕೊಂಡುಬಿಟ್ಟಿದ್ದೇವೆ. ಒಂಚೂರು ಆಚೀಚೆ ಆದರೆ ದಿನಪೂರ್ತಿ ಎಡವಟ್ಟು. ದಿನ ಬೆಳಗಾದರೆ ಓಡು......... ಓಡು......... ಓಡು. ಎಲ್ಲಿ ಓಡುತ್ತಿದ್ದೇವೆ? ಯಾಕೆ ಓಡುತ್ತಿದ್ದೇವೆ? ಎಂಬುದೆ ಎಷ್ಟೊಸಲ ಮರೆತು ಹೋಗುತ್ತದೆ. ಓಡುವ ಕ್ರಿಯೆ ಅರ್ಥಕಳೆದು ಕೊಳ್ಳುವಷ್ಟರ ಮಟ್ಟಿಗೆ ನಾವಿಂದು ಕುರುಡಾಗಿ ಹೋಗಿದ್ದೇವೆ. ಎಲ್ಲದರಲ್ಲೂ ಆತುರ ಗಡಿಬಿಡಿ. ನಾಳೆ ಆಗೋ ಕೆಲಸ ಇಂದೇ ಆಗಿಬಿಡಬೇಕು ಎಂಬ ಧಾವಂತದಲ್ಲಿ ನಾಳೆಯ ಕೆಲಸ ನಿನ್ನೆಯ ಮುಗಿಸಿ ಇವತ್ತು ಏನು ಮಾಡಬೇಕು ಎಂಬ ಚಿಂತೆಯಲ್ಲಿ ಮಾನಸಿಕವಾಗಿ ಸತ್ತುಹೋಗುತ್ತೇವೆ. 

            ಇಂದಿನ ಪೀಳಿಗೆಯ ಯುವಜನಾಂಗ ಆದ್ಯಾಕಷ್ಟು ತರಾತುರಿಯಲ್ಲಿರುತ್ತಾರೋ ಗೊತ್ತಿಲ್ಲ! ದಿನಬೆಳಗಾದರೆ ಖ್ಯಾತ ಗಾಯಕರಾಗುವ ಕನಸು ಕಾಣುತ್ತಾರೆ. ಸ ರಿ ಗ ಮ ಪ ದ ನಿ ಸ ಸ್ವರಗಳನ್ನು ಶಾಸ್ತ್ರೀಯವಾಗಿ ಅಭ್ಯಸಿಸುವ ಅವಶ್ಯಕತೆಯನ್ನೇ ಮರೆಯುತ್ತಾರೆ.    ಇನ್ನು ಕೆಲವರಿಗೆ ದಿಢೀರ್ ಶ್ರೀಮಂತರಾಗುವ ಬಯಕೆ. ಆದರೆ ಯಾವ ಕೆಲಸ ಮಾಡಬೇಕು. ಯಾವ ವ್ಯಾಪಾರ ಮಾಡಬೇಕು. ತಮ್ಮ ಸಾಮರ್ಥ್ಯ ಯಾವುದರಲ್ಲಿದೆ. ಏನು ಮಾಡಿದರೆ ಸೂಕ್ತ ಎಂಬ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳುವುದಿಲ್ಲ. ಆತುರದ ನಿರ್ಧಾರ ತೆಗೆದುಕೊಳ್ಳುವ ಇಂಥವರು ಕೆಲವೊಮ್ಮೆ ಎದ್ದು ನಿಲ್ಲಲೂ ಬಾರದ ರೀತಿಯಲ್ಲಿ ಎಡವಿ ಬೀಳುತ್ತಾರೆ. ಸಮಾಧಾನ ಚಿತ್ತದಿಂದ ಕುಳಿತು ಯೋಚಿಸುವಷ್ಟು ಪುರಸೊತ್ತು ಇವರಿಗಿಲ್ಲ. 

               ಇನ್ನು ನಮ್ಮ ಬಂಧು ಬಳಗ ಗೆಳೆಯರ ಸಮೂಹ ಹಾಗೂ ಸಾಮಾಜಿಕ ಚಟುವಟಿಕೆಗಳತ್ತ ಒಂದಷ್ಟು ಗಮನ ಹರಿಸೋಣ. ನಗರೀಕರಣದ ಹೊಡೆತದಿಂದ ಒಟ್ಟು ಕುಟುಂಬಗಳು ಬಹುತೇಕ ಮಾಯವಾಗಿಬಿಟ್ಟಿವೆ. ನಾನು ನನ್ನ ಗಂಡ ಅಥವಾ ಹೆಂಡತಿ ನನ್ನ ಮಕ್ಕಳು ಇಷ್ಟೆ ಪ್ರಪಂಚ. ಬೇರೆ ಇನ್ಯಾರೂ ಈ ಪ್ರಪಂಚದಲ್ಲಿ ಕಾಲಿಡುವ ಹಾಗೇಯೇ ಇಲ್ಲ. ಒಂದು ಸಮಯ ಕಾಲಿಟ್ಟರೋ ಆ ಮನೆಯ ನೆಮ್ಮದಿ ಹಾಳು. ಈ ರೀತಿಯ ಮನಸ್ಥಿತಿಗೆ ನಾವಿಂದು ತಲುಪಿಬಿಟ್ಟಿದ್ದೇವೆ. ಎದುರು ಸಿಕ್ಕಿದವರಿಗೆ ಮುಗುಳ್ನಕ್ಕು ನಾಲ್ಕು ಮಾತಾಡಲೂ ನಮ್ಮಲ್ಲಿ ಪುರಸೊತ್ತಿಲ್ಲ.  ಒಂದೆರಡು ನಿಮಿಷದ ಕುಶಲೋಪರಿ ಶಾಸ್ತ್ರಮಾಡಿ ಇನ್ನೊಂದು ದಿನ ಸಿಗೋಣ ಮನೆಗೆ ಬನ್ನಿ ಪುರಸೊತ್ತು ಮಾಡಿಕೊಂಡು ಎಂಬ ಡೈಲಾಗು ಹೊಡೆಯುತ್ತೇವೆ. ಆ ಡೈಲಾಗು ನಾಟಕೀಯ ಅಂತ ಹೇಳಿದವರಿಗೂ ಗೊತ್ತು. ಕೇಳಿಸಿಕೊಳ್ಳುವವರಿಗೂ ಗೊತ್ತು. ದೇಶಾವರಿ ನಗೆಯಲ್ಲಿ ಭೇಟಿ ಮುಕ್ತಾಯ ಕಾಣುತ್ತದೆ. ಎದುರಿಗೆ ಸಿಕ್ಕಾಗಲೇ ಮನೆಗೆ ಕರೆಯದವರು ಇನ್ನೊಮ್ಮೆ ಕರೆಯುವ ದಿನ ಯಾವತ್ತು ಬರುವುದೋ ಗೊತ್ತಿಲ್ಲ! ಮನೆಗೆ ಬಾ ಅಂತ ಹೇಳುವವರು ಅವರ ಮನೆ ಅಡ್ರೆಸ್ಸು......... ಹಾಳಾಗಿ ಹೋಗಲಿ! ಕನಿಷ್ಠ ಫೋನ್‌ನಂಬರೂ ವಿನಿಮಯ ಮಾಡಿಕೊಳ್ಳುವುದಿಲ್ಲ. ಇನ್ನು ನಿಮ್ಮನ್ನು ಮನೆಗೆ ಕರೆದು ಉಪಚರಿಸುವುದೆಲ್ಲಿಂದ ಬಂತು! ಇದರಿಂದಲೇ ಗೊತ್ತಾಗುತ್ತೆ ಅವರು ಕರೆಯುತ್ತಿರುವುದು ಕಾಟಾಚಾರಕ್ಕೆ. ಅದನ್ನು ತಿಳಿದು ತಿಳಿದು ಕೆಲವರು ಒತ್ತಾಯ ಪೂರ್ವಕವಾಗಿ ಫೋನ್‌ನಂಬರು ಕೇಳಿ ಪಡೆಯುತ್ತಾರೆ. ಕೊಡಲೋ ಬೇಡವೋ ಎಂಬ ದ್ವಂದ್ವದಲ್ಲಿ ಅರೆಮನಸ್ಸಿನಿಂದ ಫೋನ್‌ನಂಬರು ಕೊಟ್ಟಮೇಲೂ ಕೆಲವರು ಬಂಡತನ ಮೆರೆಯುತ್ತಾರೆ. ಇಂಥ ಸಮಯದಲ್ಲೆ ಫೋನ್ ಮಾಡಬೇಕೆಂದು ತಾಕೀತು ಮಾಡುತಾರೆ. ಇದರರ್ಥ ಇಷ್ಟೆ, ನೀವು ಅವರ ಮನೆಗೆ ಹೋಗುವುದು ಅವರಿಗೆ ಇಷ್ಟವಿಲ್ಲ. ಇಂಥ ಮುಖವಾಡದ ಬದುಕು ಯಾಕೆ? ಯಾವ ಪುರುಷಾರ್ಥಕ್ಕಾಗಿ? 

             ಇದ್ದುದರಲ್ಲಿ ತೃಪ್ತಿ ಪಟ್ಟುಕೊಳ್ಳುವ ಗುಣವನ್ನು ನಾವು ಎಂದೋ ಗಾಳಿಗೆ ತೂರಿ ಬಿಟ್ಟಿದ್ದೇವೆ. ಅದುಬೇಕು! ಇದುಬೇಕು! ಕಂಡದ್ದೆಲ್ಲಬೇಕು. ಈ ಬೇಕುಗಳ ನಿರಂತರ ಪಟ್ಟಿ ನಮ್ಮ ಪುರಸೊತ್ತನ್ನು ಕಸಿದುಕೊಂಡು ಬಿಟ್ಟಿದೆ. ಸಣ್ಣಸಣ್ಣ ವಿಷಯಗಳಲ್ಲಿ ಆನಂದ ಪಡುವ ಎಷ್ಟೊ ಸಮಾಚಾರಗಳಿವೆ. ಆದರೆ ನಮಗೆಲ್ಲಿದೆ ಪುರಸೊತ್ತು. ಚಿಕ್ಕಮಗುವಿಗೆ ಒಂದು ಚಾಕಲೇಟ್ ಕೊಟ್ಟು ಆ ಮಗುವಿನ ಮುಖದಲ್ಲಿ ಮೂಡುವ ಖುಷಿ, ಮಿಂಚುವ ಕಣ್ಣುಗಳನ್ನು ಎಷ್ಟುಜನ ನೋಡಿ ಅನುಭವಿಸಿದ್ದಾರೆ. ಹೆಜ್ಜೆ ಹೆಜ್ಜೆಗೂ ಲೆಕ್ಕಾಚಾರ ಹಾಕುತ್ತ ಸುತ್ತಲೂ ನಡೆಯುವ ಪ್ರಸಂಗಗಳಿಂದ ಕೆಲವರು ಸಂತೋಷದಿಂದ ವಂಚಿತರಾಗುತ್ತಾರೆ. ಪುರಸೊತ್ತು ಮಾಡಿಕೊಳ್ಳುವುದೆಂದರೆ ಕೆಲವರಿಗೆ ವ್ಯರ್ಥ ಕಾಲಹರಣ ಮಾಡಿದಂತೆ. ಪುರಸೊತ್ತಿಗೂ ಕಾಲಹರಣಕ್ಕೂ ವ್ಯತ್ಯಾಸವನ್ನೆ ತಿಳಿಯದವರಿದರು. ಕೆಲಸದ ಒತ್ತಡದಿಂದ ಕೆಲಕಾಲ ವಿಮುಖರಾಗಿ ತಮಗಿಷ್ಟವಾದ ಸಿನಿಮಾ ನೋಡುವುದೋ, ರಸ್ತೆಬದಿಯಲ್ಲಿ ನಿಂತು ಪಾನಿಪುರಿ ತಿನ್ನುವುದೋ ಅಥಾವ ಪ್ರವಾಸ ಕೈಗೊಳ್ಳುವುದೋ ಮುಂತಾದ ಚಟುವಟಿಕೆಗಳು ವ್ಯರ್ಥ ಕಾಲಹಾರಣದ ಪಟ್ಟಿಯಲ್ಲಿ ಸೇರುವುದಿಲ್ಲ. ಕೆಲಸವನ್ನೆ ಮಾಡದವರಿಗೆ ಇದು ಅನ್ವಯಿಸುವುದಿಲ್ಲ. ಮಾತು ಮಾತಿಗೂ ನನಗೆ ಪುರಸೊತ್ತಿಲ್ಲ, ಸಿಕ್ಕಪಟ್ಟೆ ಕೆಲಸ ಎಂದು ಅಲವತುಕೊಳ್ಳುವವರಿಗೆ ಒಂದೋ ದುಡ್ಡಿನ ಬೇತಾಳ ಬೆನ್ನು ಬಿದ್ದಿರಬೇಕು. ಇಲ್ಲ ಪ್ರಸಿದ್ಧಿ ಅಧಿಕಾರದ ಗೀಳಿಗೆ ಅಂಟಿಕೊಂಡಿರಬಹುದು.
      ಇಷ್ಟೊತ್ತು ನನ್ನೊಂದಿಗೆ ಹರಟೆಯಲ್ಲಿ ಪುರಸೊತ್ತು ಮಾಡಿಕೊಂಡ ನಿಮಗೆಲ್ಲ ನಾನು ಆಭಾರಿಯಾಗಿದ್ದೇನೆ. ಕೊನೆಯದಾಗಿ ಒಂದು ಮಾತು. ನಾಳೆಯ ಬದುಕಿಗೆ ನಿನ್ನೆಯೆ ಸತ್ತು ಇಂದು ಜೀವಂತವಾಗಿರುವ ಪ್ರಯತ್ನ ನಾವೆಲ್ಲ ಮಾಡುತ್ತಿದ್ದೇವೆ. ಇನ್ನಾದರೂ ಪುರಸೊತ್ತು ಮಾಡಿಕೊಂಡು ನಿನ್ನೆಯೂ ಬದುಕಿ, ಇಂದೂ ಬದುಕಿ ನಾಳೆಯೂ ಬದುಕಿ ಜೀವನಕ್ಕೊಂದು ಅರ್ಥ ಸಾರ್ಥಕತೆ ಕಂಡುಕ್ಕೊಳ್ಳೋಣ. 

ಏನಂತೀರಿ! ನಮಸ್ಕಾರ.   


ಕುಸಿಯುತ್ತಿರುವ ಮಾನವೀಯ ಮೌಲ್ಯಗಳು


ಕುಸಿಯುತ್ತಿರುವ ಮಾನವೀಯ ಮೌಲ್ಯಗಳು



ದಿನಗಳು ಉರುಳುತ್ತಿವೆ. ವರ್ಷಗಳು ಕಳೆಯುತ್ತಿವೆ. ಹೊಸ ವರ್ಷದ ಆಗಮನವನ್ನು ಸಂಭ್ರಮದಿಂದ ಸ್ವಾಗತಿಸಿದ್ದೇವೆ. ಆದರೆ ನಿಜವಾಗಿಯೂ ನಾವು ಸಂಭ್ರಮದಲ್ಲಿದ್ದೇವೆಯೇ? ನಮ್ಮ ಸುತ್ತ ನಡೆದಿರುವ ನೂರಾರು ಕಹಿ ಘಟನೆಗಳು ನಮ್ಮ ಮನಗಳನ್ನು ಕೊರೆಯುತ್ತಿರುವಾಗ ಮುಖವಾಡದ ಸಂಭ್ರಮಾಚರಣೆ  ಎಷ್ಟು ಸಮಂಜಸ? ಇತಿಹಾಸ ಮರುಕಳಿಸುತ್ತಲೇ ಇದೆ. ಆದರೆ ನಾವು ಮಾತ್ರ ಪಾಠ ಕಲಿಯಲೇ ಇಲ್ಲ. ಪಾಠ ಕಲಿಯುವ ತಾಳ್ಮೆ ಕಳೆದು ಹೋಗಿದೆಯೋ? ತಾತ್ಸಾರವೋ? ಉದಾಸೀನವೋ? ಅಂತೂ ನಾವು ಪಾಠ ಕಲಿಯಲಿಲ್ಲ.  

ಕಳೆದ ವರ್ಷ ನಡೆದ ಕೆಲವು ಘಟನೆಗಳನ್ನು ಮೆಲಕು ಹಾಕಿದಾಗ ಮನಸ್ಸು ಹಿಡಿಯಾಗುತ್ತದೆ.  ಒಂದರ ಹಿಂದೆ ಒಂದರಂತೆ ನಡೆದ ಅವಘಡಗಳನ್ನು ಅವಲೋಕಿಸಿದಾಗ ನಾವೆಲ್ಲೋ ಮಾನವೀಯತೆಯನ್ನು ಕಳೆದುಕೊಳ್ಳುತ್ತಿದ್ದೇವೆ ಹಾಗು ದೂರವಾಗುತ್ತಿದ್ದೇವೆ ಅಂತ ಅನ್ನಿಸಲು ಶುರುವಾಗುತ್ತದೆ.  ಮಾನವೀಯ ಮೌಲ್ಯಗಳು ಕುಸಿಯುತ್ತಿವೆ ಎಂಬ ಭಾವ ಮಡುಗಟ್ಟುತ್ತದೆ. 


ದೆಹಲಿಯ ಮೃಗಾಲಯವಂದರಲ್ಲಿ ಅಕಸ್ಮಾತ್ತಾಗಿ ಹುಲಿಯಬೋನಿನಲ್ಲಿ ಜಾರಿಬಿದ್ದ ಯುವಕನು ಹುಲಿಯನ್ನು ಜೀವ ಉಳಿಸುವಂತೆ ಬೇಡಿಕೊಳ್ಳುವ ಪರಿ ಎಂತಹ ಕಟುಕನನ್ನು ಕೂಡ ಮಲ್ಮಲ ಮರಗುವಂತೆ ಮಾಡುತ್ತದೆ. ಆದರೆ, ಅಲ್ಲಿದ್ದ ಜನಸ್ತೋಮ ಅವನ ರಕ್ಷಣೆ ಮಾಡುವ ಗೋಜಿಗೆ ಹೋಗದೆ ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಆ ದುರ್ಘಟನೆಯನ್ನು ಸೆರೆಹಿಡಿದು ಯೂ-ಟ್ಯೂಬ್‌ಗೆ ಅಪ್‌ಲೋಡ್ ಮಾಡಿ ಸಾಹಸ ಮೆರೆಯುತ್ತಾರೆ.  ಇನ್ನು ಆ ಮೃಗಾಲಯದ ಸಿಬ್ಬಂದಿಗಳಿಗೆ ಜವಾಬ್ದಾರಿ ಎಂದರೆ ಏನು? ಎಂಬುದೆ ಗೊತ್ತಿಲ್ಲದಂತೆ ವರ್ತಿಸಿದ್ದಾರೆ.  ಸ್ವಲ್ಪ ಮುಂಜಾಗ್ರತೆ ವಹಿಸಿದ್ದರೆ ಆ ಯುವಕನ ಜೀವ ಉಳಿಸಬಹುದಾಗಿತ್ತು.  ಹಾಗಾಗಲಿಲ್ಲ!  ಆತ ಉಳಿಯಲಿಲ್ಲ.  ಹುಲಿಯು ಕರುಣೆ ತೋರಿ ಅವನನ್ನು ಜೀವಂತ ಬಿಟ್ಟಿದ್ದರೆ ಪುಣ್ಯಕೋಟಿಯ ಕಥೆ ಮರುಕಳಿಸಿದ ನೆನಪಾದರೂ ಉಳಿಯುತ್ತಿತ್ತು.  

ಬೆಂಗಳೂರು ರೈಲುನಿಲ್ದಾಣದಲ್ಲಿ ಆಕಸ್ಮಿಕವಾಗಿ ಚಲಿಸುತ್ತಿದ್ದ ರೈಲಿಂದ ಕಾಲುಜಾರಿಬಿದ್ದು ತನ್ನ ಎರಡುಕಾಲುಗಳನ್ನು ಕಳೆದುಕೊಂಡ ಅನ್ಯರಾಜ್ಯದ ಉದ್ಯಮಿಯಪಾಡು ಇದಕ್ಕಿಂತ ಭಿನ್ನವಾಗೇನೂ ಇಲ್ಲ.  ದೂರದಲ್ಲಿ ಬಿದ್ದಿದ್ದ ತನ್ನ ಮೋಬೈಲ್ ಫ಼ೋನನ್ನು ತಗೆದುಕೊಳ್ಳಲು ತೆವಳುತ್ತಿದ್ದ ದೃಶ್ಯ ನೆನೆಸಿಕೊಳ್ಳುವದು ಕಷ್ಟಕರವೆ.  ಅಂತಹದರಲ್ಲಿ ಅಲ್ಲಿ ನೆರೆದಿದ್ದ ಜನರು, ಪ್ರಯಾಣಿಕರು ತಮ್ಮ ಮೋಬೈಲ್ ಫ಼ೋನಲ್ಲಿ ಆ ದೃಶ್ಯವನ್ನು ಚಿತ್ರೀಕರಿಸುತ್ತಿದ್ದರು.  ಆ ಜನರ ಗುಂಪಿನಲ್ಲಿ ದೃಶ್ಯವನ್ನು ಮಾಧ್ಯಮದ ಪ್ರತಿನಿಧಿಗಳು ಕೂಡ ಇದ್ದರೆಂದು ಪತ್ರಿಕೆಯಲ್ಲಿ ಓದಿದ ನೆನಪು.  ಇರಲಿ.  ಆತ ಮೊಬೈಲ್ ಫ಼ೋನನ್ನು ಕೈಯಲ್ಲಿ ತಗೆದುಕೊಂಡು ದೂರದ ಊರಲ್ಲಿದ್ದ ತನ್ನ ಹೆಂಡತಿಗೆ ಫ಼ೋನ್ ಮಾಡಿ ನಡೆದ ಘಟನೆಯನ್ನು ವಿವರಿಸಿ, ಅವಳು ಬೆಂಗಳೂರಿನ ಅಸ್ಪತ್ರೆಯೊಂದಕ್ಕೆ ಫ಼ೋನ್ ಮಾಡಿ ತುರ್ತುಚಿಕಿತ್ಸೆಯ ವ್ಯವಸ್ಥೆ ಮಾಡಿದಳು.  ಇದನ್ನೆಲ್ಲಾ ನೋಡುತ್ತಾ ನಿಂತ ಜನರಿಗೆ ಏನಾಗಿತ್ತು?  ಸಹಾಯಮಾಡುವ ಯೋಚನೆ ಕೂಡ ಇವರಿಗೆ ಬರಲಿಲ್ಲವೆ?  ಇದನ್ನು ಮನಸ್ಥಿತಿಯ ವಿಕೃತಿಯನ್ನದೆ ಇನ್ನೇನು ಹೇಳಲು ಸಾಧ್ಯ .  ಸಹಾಯಮಾಡುವುದು ಹಾಳಾಗಿಹೋಗಲಿ!  ಈ ದುರಂತವನ್ನು ಚಿತ್ರೀಕರಿಸಿದ ಇವರ ಮನಸ್ಥಿತಿ ಎಂತಹದು?  ಈ ನಿಟ್ಟಿನಲ್ಲಿ ನಾವೆಲ್ಲ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. 

ಇನ್ನು ಚಿಕ್ಕಮಕ್ಕಳು, ಶಾಲಾವಿದ್ಯಾರ್ಥಿಗಳು ಹಾಗು ಮಹಿಳೆಯರ ಮೇಲೆ ನಡೆದ ಅದೆಷ್ಟೋ ಲೈಂಗಿಕ ದೌರ್ಜನ್ಯದ ಸಂಗತಿಗಳು ವರದಿಯಾದವು.  ಮಾನವೀಯ ಸಂಬಂಧಗಳ ಕೊಂಡಿ ಕಳಚಿಕೊಳ್ಳುತ್ತಿವೆಯೇ!  ಅಪ್ಪ-ಅಮ್ಮ, ಅಪ್ಪ-ಮಗ, ಅಪ್ಪ-ಮಗಳು, ತಾಯಿ-ಮಗ, ಅಣ್ಣ-ತಂಗಿ, ಅಕ್ಕ-ತಮ್ಮ, ಗೆಳೆಯ-ಗೆಳತಿ, ಗುರು-ಶಿಷ್ಯ ಸಂಬಂಧಗಳಿಗೆ ಗ್ರಹಣ ಹಿಡಿದಂತೆ ಭಾಸವಾಗುತ್ತಿದೆ. ನಡೆದ ದುರಂತಗಳನ್ನು ಟಿ.ಆರ್.ಪಿ. ನೆಪದಲ್ಲಿ ದೃಶ್ಯಮಾಧ್ಯಮಗಳು ವೈಭವೀಕರಿಸಿ ಆಘಾತಕ್ಕೊಳಗಾದ ಮನಸುಗಳಿಗೆ ಉಪ್ಪು ಖಾರ ಸವರುವ ಕೆಲಸ ಮಾಡುತ್ತಿದೆ.ಜನರಿಗೆ ತಲುಪಿಸುವ ರೀತಿ ಇದೇನಾ? ಆಧುನಿಕ ತಾಂತ್ರಿಕತೆಯ ಸದ್ಬಳಕೆಯಾಗುವ ಬದಲು ದುರ್ಬಳಕೆ ಮಿತಿ ಮಿರುತ್ತಿದೆ. ಕ್ರೌರ್ಯಕ್ಕೆ ಒಂದು ಮಿತಿಯೇ ಇಲ್ಲದಂತಾಗಿದೆ.  ಈ ರೀತಿಯ ವರ್ತನೆಗಳಿಗೆ ಕಠಿಣ ಕಾನೂನುಕ್ರಮಗಳ ಅಗತ್ಯತೆಯ ಜೊತೆಗೆ ಅಂತಹ ವ್ಯಕ್ತಿಗಳನ್ನು ಶಾಶ್ವತವಾಗಿ  ಸಮಾಜ ಬಹಿಷ್ಕಾರದ ಶಿಕ್ಷೆಗೆ ಗುರಿಪಡಿಸುವದು ಸೂಕ್ತವೆನಿಸುತ್ತದೆ. 

ಇನ್ನು ಉಗ್ರವಾದದ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ.  ಶಾಂತಿಯುತವಾದ ರೀತಿಯಲ್ಲಿ ಸಾಧಿಸಲು ಸಾಧ್ಯವಿರುವದನ್ನು ಉಗ್ರರೀತಿಯಲ್ಲಿ ಸಾಧಿಸಹೊರಟು ಯಾವ ಸಂದೇಶವನ್ನು, ಯಾರಿಗೆ, ಯಾವ ರೀತಿಯಲ್ಲಿ ತಲುಪಿಸುವ ಉದ್ದೇಶವೋ ತಿಳಿಯದು!  ಅಮಾಯಕ ಜನರು ಜಗತ್ತಿನಾದ್ಯಂತ ಇಂದು ಈ ಉಗ್ರ ದಾಳಿಯಿಂದಾಗಿ ತತ್ತರಿಸಿ ಹೋಗಿದ್ದಾರೆ.  ಮೊನ್ನೆ ಮೊನ್ನೆ ಪಾಕಿಸ್ತಾನದ ಪೇಷಾವರದಲ್ಲಿ ೧೪೦ಕ್ಕೂ ಹೆಚ್ಚು ಶಾಲಾಮಕ್ಕಳು ಉಗ್ರರ ಗುಂಡಿಗೆ ಆಹುತಿಯಾದರು.  ಪಾಪ!  ಏನೂ‌ಅರಿಯದ ಮಕ್ಕಳು ಇವರಿಗೇನು ಕೇಡು ಮಾಡಿದ್ದರು?  ಹೋಗಲಿ, ಅಮಾನುಷವಾಗಿ ಮಕ್ಕಳ ಜೀವ ತಗೆದವರು ಜಗತ್ತಿಗೆ ಕೊಡುತ್ತಿರುವ ಸಂದೇಶವಾದರೂ ಏನು?  ಅವರು ಕೊಡುತ್ತಿರುವ ಸಂದೇಶವನ್ನು ಜನರು ನಂಬಲೇಬೇಕೆಂಬ ಮಂಕುವರ್ಗಕ್ಕೆ ಸೇರಿಲ್ಲವೆಂದು ಇವರಿಗೆ ತಿಳಿದಿಲ್ಲವೆ?  ಇವರನ್ನು ನಾವು ಮನುಷ್ಯರೆನ್ನಬೇಕೆ? ಮೃಗಗಳೆನ್ನಬೇಕೆ?  ಮೃಗಗಳು ಕೂಡ ಕೆಲವೊಂದು ಸಮಯಮಾತ್ರ ಮೃಗೀಯವರ್ತೆನೆ ತೋರುತ್ತವೆ.  ಆದರೆ, ಇವರು ಮೃಗಕ್ಕಿಂತಲೂ ಕಡೆ.  

ಇಂತಹ ಇನ್ನೂ ನೂರಾರು ನಡೆಯಬಾರದ, ನೋಡಬಾರದ ಘಟನೆಗಳು ನಮ್ಮ ಮುಂದೆ ನಡೆಯುತ್ತಲೇ ಇವೆ. ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ಲಕ್ಷಣಗಳಲ್ಲವೇ?  ಈ ರೀತಿಯ ಮನೋವಿಕಾರಗಳನ್ನು ತಿದ್ದುವ ದಾರ್ಶನಿಕ ಹುಟ್ಟಿಬರದಿದ್ದರೆ ಇಡೀ ಮಾನವ ಜನಾಂಗ ಒಂದಿಲ್ಲೊಂದು ದಿನ ನಶಿಸಿ ಹೋಗುವ ಅಪಾಯ  ಸಾಧ್ಯವಿಲ್ಲದೇ‌ಇಲ್ಲ.  ಇನ್ನಾದರೂ ಎಚ್ಚೆತ್ತುಕೊಳ್ಳಿ.  ಮೌಲ್ಯಗಳ ಬದುಕು ಶಾಂತಿಯನ್ನು ತಂದು ಕೊಟ್ಟೀತು.  ಮಾನವಜನಾಂUದ ಉಳಿವಿಗೆ ದಾರಿಯಾದೀತು ಇಲ್ಲದಿದ್ದರೆ ಪಳಿಯುಳಿಕೆ ಯಾದೀರಿ ಜೋಕೆ!!


-- ಮಹೇಶ. ಶ್ರೀ. ದೇಶಪಾಂಡೆ
    (ತುಷಾರಪ್ರಿಯ)



ಕಾಡುತಿದೆ ನೆನಪು


ಕಾಡುತಿದೆ ನೆನಪು


ಮತ್ತದೇ ನೆನಪು
ಮನಕಲಕಿ ಕಾಡುತಿದೆ.........
ಮತ್ತದೇ ನೋವು
ಎದೆ ಹಿಂಡಿ ಸುಡುತಿದೆ ..........
ನಿನಗದರ ಅರಿವಾದರೂ ಹೇಗಿದ್ದೀತು ?
ಹೇಳು ....... ನನ್ನ ನೆನಪಾದರೂ ಇದೆಯಾ ?
ಹೇಳು ಹೇಳು ಎಂದು ನಾ ಕೇಳುವುದಷ್ಟೇ......!
ಹೇಳಲು ನೀನೆಲ್ಲಿ ಇರುವೆ ?
ಹತ್ತಿರವಿದ್ದರೂ ಎಟುಕಲಾರದ ದೂರ
ಹೊಟ್ಟೆಯಲಿ ಬಚ್ಚಿಟ್ಟ ಹಚ್ಚಹಸುರಿನ ಪಚ್ಚೆ
ಕಿಚ್ಚುಹೊತ್ತಿಸಿ ಹುಚ್ಚು ಹಿಡಿಸಿದೆ
ಪಿಸುದನಿಯ ಬಿಸಿಯುಸಿರು ಕೆನ್ನೆ ಸವರುತಿದೆ 
ಕಿಲಕಿಲನೆ ನಕ್ಕ ಆ ನಗುವಿನಲಿ
ಅಲೆ‌ಅಲೆಯಾಗಿ ಉಕ್ಕಿ ಕೊಚ್ಚಿಹೋಗಿರುವೆ
ರಚ್ಚೆ ಹಿಡಿಯುವ ಮೊದಲೇ ನೀನೊಮ್ಮೆ ಹೇಳಬಾರದೆ ?
ನಾನಿಲ್ಲೆ ಇರುವೆ
ನಿನ್ನಲ್ಲೇ ಇರುವೆ
ಮತ್ತದೇ ನೆನಪು ಕಾಡದಿರಲು
ಮತ್ತದೇ ನೋವು ಸುಡದಿರಲು
ಹೇಳದೇ ಹೋದರೇ.......!
ಮತ್ತದೇ ನೆನಪು ಕಾಡುವುದು ಕೊನೆತನಕ
ಮತ್ತದೇ ನೋವು ಸುಡುವುದು ಅನವರತ

-o-o-

-ತುಷಾರಪ್ರಿಯ
(ಮಹೇಶ ಶ್ರೀ. ದೇಶಪಾಂಡೆ)

ಬೇರು - ಮರ

ಬೇರು - ಮರ


ಬೀಜ ಮೊಳೆತು ಅಂಕುರವಾಗಿ
ಸಸಿಯಾಗಿ ಚಿಗುರಿ
ಮರವಾಗಿ ಬೆಳೆದು
ಹೆಮ್ಮರವಾಗಿ ಮೆರೆದು
ಬೀಗುತಿರಲು ...........
ಕಾಣದ ಕೈಯೊಂದು..........
ಏನು ಹೇಳಲಿ ನಾನು ............
ಕಾಣದ ಕೈಯೊಂದು ಕಸಿಯಿತು
ಆ ಕನಸ ..........
ನೆಲಕಚ್ಚಿ ಮಲಗಿತು .......... ಇನ್ನೆಂದೂ ಮೇಲೇಳಲಾರದಂತೆ 
ಬಿರುಗಾಳಿ ಮಳೆಗೆ ನೆಲಕೊರಗಿತೆ!
ಇಲ್ಲ ......... ಮರೆವು ಮಲಗಿಸಿತು ಹಾಗೆ!
ಬೇರು ಮರೆತ ಮರ ಬೀಗಿತು ಹಾಗೆ!
ಬೇರು ಜೀವಾಳ ............ ಅದಕರ್ಥವಾಗಲಿಲ್ಲ 
ಇದು ಸೃಷ್ಠಿಯ ನಿಯಮ
ಇದೇ ಪ್ರಕೃತಿಯ ಪಗಡೆಯಾಟ
ಇದೇ ಜೀವನದ ಕಟುಸತ್ಯ ..... 
ಬೇರು ಮರೆತ ಆ ಹೆಮ್ಮರಕ್ಕೆ 
ಜೀವದ ಬೆಲೆ ತಿಳಿಯಲೇ ಇಲ್ಲ 
ನೆಲಕಚ್ಚಿ ಬಿದ್ದಾಗ ಎಚ್ಚೆತ್ತು ಏನುಪಯೋಗ! 
ಮರವಾಗಿ ಬೆಳೆಯಬೇಕು
ಹೆಮ್ಮರವಾಗಿ ಬೀಗಬೇಕು  
ಬೇಡವೆಂದವರಾರು!
ಬೇರು ಮರೆತರೆ ಗತಿಯೆನೆಂದು ಹೇಳಲಾರೆ!
ಅನುಭವಿಸಿಯೇ ತೀರಬೇಕು
ಅಷ್ಟಕ್ಕೂ ಬೇರು ಮರೆತ ಮರಕ್ಕೆ  
ನಿಸರ್ಗ ಪಾಠ ಕಲಿಸಿಯೇ ತೀರುತ್ತದೆ
ನಿತ್ಯ ......... ನಿರಂತರ ....... ಚಿರನೂತನ


--ಮಹೇಶ ಶ್ರೀ. ದೇಶಪಾಂಡೆ
       ತುಷಾರಪ್ರಿಯ

Saturday, 3 December 2016

ಪಾಲು



ಪಾಲು




ಇತ್ತೀಚಿನ ದಿನಗಳಲ್ಲಿನ ದೇಶದಲ್ಲಿ ನಡೆದ ಕೆಲವು ಘಟನೆಗಳನ್ನು ಮೆಲುಕು ಹಾಕುತ್ತಿದ್ದೆ. ತಾಂಡವಾಡುತ್ತಿರುವ ಭ್ರಷ್ಟಚಾರ, ಭ್ರಷ್ಟರನ್ನು ರಕ್ಷಿಸುತ್ತಿರುವ ಅಧಿಕಾರಶಾಹಿಗಳು, ಮಿತಿಮೀರಿದ ಸ್ವಾರ್ಥ, ಸ್ವಜನಪಕ್ಷಪಾತ, ದ್ವಿಮುಖನೀತಿ ಅನುಸರಿಸಿ ದುರ್ಲಾಭ ಪಡೆಯುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಸತ್ಯವಂತರಿಗಿದು ಕಾಲವಲ್ಲ ಅಂತ ಅನ್ನಿಸೋಕೆ ಶುರುವಾಗತೊಡಗಿತು. ಆಗ ಹುಟ್ಟಿಕೊಂಡ ಭಾವನೆಗಳು ಇಲ್ಲಿ ವ್ಯಕ್ತವಾಗಿವೆ. 
ಕದಿಯುವ ಚಟವಿರುವವರು ಒಂದಲ್ಲ ಎರಡಲ್ಲ ಹತ್ತಾರು ಬಾರಿ ಯೋಚಿಸಿ ಕದಿಯುವ ಕಾರ್ಯಕ್ಕೆ ಸಿದ್ದರಾಗಬೇಕು. ಒಬ್ಬಂಟಿಯಾಗಿ ನೀವೊಬ್ಬರೆ ಕದ್ದರೆ ಯಾವ ಸಮಸ್ಯೆಯೂ ಎದುರಾಗದು. ಆದರೆ ನಿಮ್ಮ ಮನಸಾಕ್ಷಿಯನ್ನು ಮೀರಿ ಅರಗಿಸಿಕೊಳ್ಳಲು ಕಷ್ಟವಾದೀತು ಅಷ್ಟೆ. ಇತರರಿಂದ ಯಾವುದೇ ಕಿರುಕುಳ ಇರಲಾರದು. ಆದರೆ ಕೆಲವು ಕಳ್ಳತನಗಳನ್ನು ಒಬ್ಬಂಟಿಯಾಗಿ ಮಾಡಲು ಸಾಧ್ಯವಾಗುವುದಿಲ್ಲ.  ಅಂತ ಸಂದರ್ಭಗಳಲ್ಲಿ ನಿಮಗೆ  ಇತರರ ಸಹಾಯಹಸ್ತ ಬೇಕೇಬೇಕು.

ಕದ್ದುಗಳಿಸಿದ ಬೆಣ್ಣೆಯಲ್ಲಿ ಇತರರ ಪಾಲು ಇದ್ದಲ್ಲಿ ಅವರನ್ನು ಕಡೆಗಣಿಸಬೇಡಿ. ಒಂದು ವೇಳೆ ಕಡೆಗಣಿಸಿದ್ದೇ ಆದರೆ ಮುಂದೊಂದು ದಿನ ನೀವು ಅದಕ್ಕೆ ತಕ್ಕ ಬೆಲೆ ತೆರಬೇಕಾದ ಪರಿಸ್ಥಿತಿ ಎದುರಾದೀತು! ಕದ್ದ ಬೆಣ್ಣೆ ನಿಮ್ಮ ಕೈಯಲ್ಲಿದೆ ಅಂದ ಮಾತ್ರಕ್ಕೆ ನೀವು ಅದರ ಸಂಪೂರ್ಣ ಅಧಿಕಾರ ಹೊಂದಲು ಹವಣಿಸುವುದು ದುರಾಸೆಯ ಪರಮಾವಧಿಯಾಗುತ್ತದೆ. ಕದ್ದ ಬೆಣ್ಣೆಯಲ್ಲಿ ನೀವು ಇತರಿರಗೆ ಪಾಲು ಕೊಡಲಾರರಿ ಎಂಬಂರ್ಥದ ವರ್ತನೆಗಳು ನಿಮಗೆ ಗೊತ್ತಿಲ್ಲದಂತೆಯೇ ನಿಮ್ಮ ವಿರುದ್ದ ಕೆಲಸ ಮಾಡಲು ಶುರುವಿಟ್ಟುಕೊಳ್ಳುತ್ತದೆ. ಕದ್ದ ಬೆಣ್ಣೆಯಲ್ಲಿ ಪಾಲು ಕೊಡದೆ ಹೋದರೆ ಅಷ್ಟೆ ಹೋಯಿತು! ನೀರು ಮಜ್ಜಿಗೆಯನ್ನಾದರೂ ಕುಡಿಸುತ್ತೇನೆಂಬ ಭಾವನೆ ಮೂಡಿಸಿ. ಆಗಾಗ ನೀರು ಮಜ್ಜಿಗೆಯ ಕೊಡಲು ಮರೆಯದಿರಿ. ಏಕೆಂದರೆ ನೀವು ಬೆಣ್ಣೆಯಲ್ಲಿ ಪಾಲು ಕೊಡಬಾರದೆಂದು ಆಗಲೇ ನಿರ್ಧರಿಸಿದ್ದಾಗಿದೆಯಲ್ಲಾ! ಆದರೆ ಒಂದಂತು ಸತ್ಯ ಕೊನೆವರೆಗೂ ನೀವು ಬೆಣ್ಣೆ ಆಸೆಯನ್ನು ತೋರಿಸುತ್ತಾ ನೀರು ಮಜ್ಜಿಗೆಯನ್ನು ಕೊಡುವುದು, ನೀವು ಆಡುತ್ತಿರುವ ನಾಟಕವೆಂದು ತಿಳಿಯಲು ಬಹಳ ಸಮಯ ಬೇಕಾಗುವುದಿಲ್ಲ. ಒಂದಲ್ಲ ಒಂದುದಿನ ನೀವು ಬೆಣ್ಣೆಯ ಪಾಲನ್ನು ಕೊಡಲೇಬೇಕಾಗುತ್ತದೆ. ಹಾಗೋಂದು ವೇಳೆ ನೀವು ಆ ಬೆಣ್ಣೆಯನ್ನು  ಸಂಪೂರ್ಣವಾಗಿ ನೀವೇ ಅನುಭವಿಸಬೇಕು,  ಅಂತ ನಿರ್ಧರಿಸಿ ಕೊಡದಿರುವ ತೀರ್ಮಾನಕ್ಕೆ ಬರುವ ಹೊತ್ತಿಗೆ ಬೆಣ್ಣೆ ಕರಗಿ ನಿಮ್ಮ ಕೈ ಜಾರಿ ಮಣ್ಣು ಪಾಲಾಗುವ ಸ್ಥಿತಿ ತಲುಪಿರುತ್ತದೆ. ಇತ್ತ ಬೆಣ್ಣೆತಿಂದು ಸುಖಿಸಿದ ನೆಮ್ಮದಿಯೂ ಇಲ್ಲ! ಅತ್ತ ಪಾಲು ಇದ್ದವರಿಗೆ ಕೊಟ್ಟೇ ಎಂಬ ತೃಪ್ತಿಯೂ ಇಲ್ಲ! ಯಾವ ಪುರುಷಾರ್ಥಕ್ಕಾಗಿ ಇಂತಹ ಪರಿಸ್ಥಿತಿ ತಂದುಕೊಳ್ಳಬೇಕು!  ಬೆಣ್ಣೆಯಲ್ಲಿ ಪಾಲು ಸಿಗದವರಿಗೆ  ನೀವು ಎಷ್ಟುದಿನ ಅಂತ ನೀರು ಮಜ್ಜಿಗೆ ಕುಡಿಸುತ್ತಾ ಸತ್ಯ ಮರೆ ಮಾಚಲು ಸಾಧ್ಯ. ಇಂದು ಸಿಕ್ಕೀತು, ನಾಳೆ ಸಿಕ್ಕೀತು, ನಾಡಿದ್ದು ಸಿಕ್ಕೀತು ಅಂತ ಕಾಯ್ದುಕಾಯ್ದು ಸಿಗುವದಿಲ್ಲ ಅಂತ ಗೊತ್ತಾಗುವಹೊತ್ತಿಗೆ ತಾಳ್ಮೆ ಕಳೆದುಕೊಂಡು ಬಿಟ್ಟಿರುತ್ತಾರೆ. 

ನನ್ನ ಒಂದು ಕಣ್ಣು ಹೊದರೂ ಸರಿಯೇ ನನಗೆ ಮೋಸ ಮಾಡಿದವನ ಎರಡೂ ಕಣ್ಣುಗಳು ಹೋಗಲಿ ಎಂಬ ಕಥೆಯ ತರಹ ಅವರು ರೊಚ್ಚಿಗೇಳುತ್ತಾರೆ.  ಮಣ್ಣು ಪಾಲಾದ ಬೆಣ್ಣೆ ನೋಡಿ ವಿಕೃತ ಆನಂದ ಪಡೆಯುತ್ತಾರೆ. ಸೂಕ್ತವಾಗಿ ಹಾಗೂ ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಗಾಜಿನ ಮನೆಯಲ್ಲಿ ಕುಳಿತವರು ಇತರರಿಗೆ ಕಲ್ಲು ಹೊಡೆಯುವ ಸಾಹಸಕ್ಕೆ ಇಳಿಯಬಾರದು.   ಹಾಗೇ ಮಾಡಿದ್ದೆ ಆದರೆ ನಿಮ್ಮ ಗಾಜಿನ ಮನೆ ಪುಡಿ ಪುಡಿಯಾಗಿ ನೀವು ಬಟಾ ಬಯಲಲ್ಲಿ ನಿಂತಿರುತ್ತೀರಿ.  ಮುಖವಾಡ ಕಳಚಿ ನಿಜರೂಪ ಜಗತ್ತಿಗೆ ಪ್ರಕಟವಾಗಿ ಅಸ್ತಿತ್ವಹೀನ ಪರಿಸ್ಥಿತಿ ತಲುಪುತ್ತೀರಿ.
ಕದ್ದುಗಳಿಸಿದ್ದಕ್ಕೇನೋ ಈ ನೀತಿ ಸರಿ! ಆದರೆ ನ್ಯಾಯಯುತ  ಗಳಿಕೆಯಲ್ಲಿ ಇತರರ ಪಾಲಿದ್ದರೆ ಅದಕ್ಕೂ ಇದೇ ನೀತಿ ಅನ್ವಯ ವಾಗುತ್ತದೆ ಅಲ್ಲವೇ! 
ಕದ್ದು ಗಳಿಸಿದ್ದೋ!  ಅಥವಾ ನ್ಯಾಯಯುತವಾಗಿ ಗಳಿಸಿದ್ದೋ!  ಯಾರಿಗೆ ಗೊತ್ತು!   ಪಾಲುದಾರರ ಭಾಗ ತಲುಪಿಸಬೇಕಾದದ್ದು ನಿಮ್ಮ ಕರ್ತವ್ಯ. 
ಏನಂತೀರಿ!





-- ಮಹೇಶ. ಶ್ರೀ. ದೇಶಪಾಂಡೆ
    ತುಷಾರಪ್ರಿಯ

Monday, 28 November 2016

ಕನ್ನಡ ಗುಡಿ

ಕನ್ನಡ ಗುಡಿ



ತೊದಲ ನುಡಿಯ ಮೊದಲ ಉಸಿರು
ಈ ............. ಕನ್ನಡ.............. ||ಪ||

ಕನ್ನಡದ ಮಣ್ಣಿದು ಚಂದನದ ಕಂಪಿದೆ.
ಕನ್ನಡದ ನುಡಿಯಿದು ಕೋಗಿಲೆಯ ಇಂಪಿದೆ
ಕನ್ನಡದ ನೋಟವಿದು ನವಿಲಿನಾ ಸೊಬಗಿದೆ.
ಕನ್ನಡದ ನಡೆಯಿದು ಗಜರಾಜನ ಗತ್ತಿದೆ.
ಕನ್ನಡವೇ ಎಲ್ಲೆಲ್ಲೂ.............. ||೧||

ತೊದಲ ನುಡಿಯ ಮೊದಲ ಉಸಿರು
ಈ ............. ಕನ್ನಡ.............. ||ಪ||

ಕನ್ನಡದ ತೇರಿದು ತೋರಣವ ಕಟ್ಟೋಣ
ಅನವರತ ಎಳೆಯೋಣ ಒಂದಾಗಿ ನಾವೆಲ್ಲ
ಕೊನೆಯುಸಿರು ಇರುವರೆಗು
ಕನ್ನಡವೇ ಎಲ್ಲೆಲ್ಲೂ.............. ||೨||

ತೊದಲ ನುಡಿಯ ಮೊದಲ ಉಸಿರು
ಈ ............. ಕನ್ನಡ.............. ||ಪ||

ಕನ್ನಡದ ಕಹಳೆಯಿದು
ಜಯಘೋಷ ಹಾಡಿದೆ
ಕನ್ನಡದ ಮಹತ್ತನ್ನು
ಮುಗಿಲಾಚೆ ಮೊಳಗಿದೆ
ಕನ್ನಡವೇ ಎಲ್ಲೆಲ್ಲೂ.............. ||೩||

ತೊದಲ ನುಡಿಯ ಮೊದಲ ಉಸಿರು
ಈ ............. ಕನ್ನಡ.............. ||ಪ||

ಕನ್ನಡದ ದೀಪವಿದು
ಜ್ಞಾನದಾರಿಯ ತೋರಿದೆ
ಕನ್ನಡದ ಹಿರಿಮೆಯ
ಜಗಕೆಲ್ಲ ಬೆಳಗಿದೆ
ಕನ್ನಡವೇ ಎಲ್ಲೆಲ್ಲೂ.............. ||೪||


ತೊದಲ ನುಡಿಯ ಮೊದಲ ಉಸಿರು
ಈ ............. ಕನ್ನಡ.............. ||ಪ||

ಎನ್ನಡ ಎಕ್ಕಡ ಒತ್ತಟ್ಟಿಗಿರಲಿ
ಕನ್ನಡ ಕಸ್ತೂರಿ ನಿನ್ನೊಟ್ಟಿಗಿರಲಿ
ಕನ್ನಡದ ಕೀರ್ತಿ ಜಗವೆಲ್ಲ ಬೆಳಗಲಿ
ಕನ್ನಡವೇ ಎಲ್ಲೆಲ್ಲೂ.............. ||೫||
ತೊದಲ ನುಡಿಯ ಮೊದಲ ಉಸಿರು
ಈ ............. ಕನ್ನಡ.............. ||ಪ||

ಕನ್ನಡ ಕುಲದೇವಿಯ
ನಾವೆಲ್ಲ ಸ್ತುತಿಸೋಣ
ಕೈಮುಗಿದು ಒಳಗೆ ಬಾ
ಕನ್ನಡದ ಗುಡಿಯಿದು.
ಕನ್ನಡವೇ ಎಲ್ಲೆಲ್ಲೂ.............. ||೬||

-- ಮಹೇಶ್ ಶ್ರೀ ದೇಶಪಾಂಡೆ 
      ತುಷಾರ ಪ್ರಿಯ

Thursday, 24 November 2016

ತುತ್ತಿನ ಚೀಲ


ತುತ್ತಿನ ಚೀಲ


ತಂಗಾಳಿ ಜೋಗುಳ ಜೀಕುತ
ಕುಳಿತರೆ ಸಾಲದು
ಹೊತ್ತೊತ್ತಿಗೆ ಖಾಲಿಯಾಗುವ ತುತ್ತಿನ ಚೀಲ 
ಹಪಹಪಿಸಿ ಹಿಂಡುತಿದೆ
ಹೊತ್ತೊತ್ತಿಗೆ ಹಾತೊರೆಯುತಿದೆ
ತುತ್ತಿನ ಚೀಲ ತುಂಬಲು ......... 
ಕಲ್ಲು ಮುಳ್ಳುಗಳೇ ರತ್ನಗಂಬಳಿ 
ನಡೆದಷ್ಟೂ ಸವೆಯದು
ನಿಂತರೆ ನಡೆಯದು
ನಡೆಯದೇ ವಿಧಿಯಿಲ್ಲ
ಕಾದುಕುಳಿತಿದೆ ತುತ್ತಿನ ಚೀಲ
ಮಳೆಗಾಳಿಚಳಿಯ ಪರಿವೆ ಇದಕ್ಕಿಲ್ಲ
ಜೀವಗಳ ಜಂಜಾಟ
ಬೆಂಬಿಡದ ಹಸಿವಿನ ಭೂತ
ಖಚಿತವಾದರೂ ಕೈಯ ಕೆಸರು.......
ಬಾಯಿಗಿಲ್ಲ ಮೊಸರು
ಹೊತ್ತೊತ್ತಿನ ತುತ್ತು ತುಂಬಿದರಾಯ್ತು
ದಣಿದಾಗ ಮಲಗಲು ನಿನಗೊಂದು ಸೂರಿಲ್ಲ
ಚಿಂತೆಗಳ ಕಂತೆಯೇ ದಿಂಬಾಗಿರಲು
ನಿದ್ದೆಯೆಲ್ಲಿಂದ ಬಂದೀತು 
ಕಲ್ಲು ಮುಳ್ಳುಗಳೇ ರತ್ನಗಂಬಳಿ 
ಎದ್ದೇಳಲೇಬೇಕು ತುತ್ತಿನ ಚೀಲ ತುಂಬಲು
ಈ ಬದುಕ ಬಂಡಿ ನೂಕಲು 
ಬೆನ್ನಿಗೆ ಬಿದ್ದವರ ಸಾಕಲು


**__**__** 

-ಮಹೇಶ್ ಶ್ರೀ ದೇಶಪಾಂಡೆ
(ತುಷಾರಪ್ರಿಯ)

Monday, 21 November 2016

ಮಂಕಾದ ನಕ್ಷತ್ರಗಳ ಮಧ್ಯೆ


ಮಂಕಾದ ನಕ್ಷತ್ರಗಳ ಮಧ್ಯೆ



                 ಇತ್ತೀಚೆಗೆ ವೃದ್ಧಾಶ್ರಮವೊಂದರಲ್ಲಿ ಕಾರ್ಯಕ್ರಮದ ನಿಮಿತ್ತ ಅಲ್ಲಿರುವ ಹಿರಿಯ ನಾಗರಿಕರ ಜೊತೆಗೆ ಕೆಲ ಗಂಟೆಗಳ ಸಮಯ ಕಳೆಯುವ ಸಂದರ್ಭ ಒದಗಿ ಬಂದಿತ್ತು. ಆಟ ಮತ್ತು ಮನರಂಜನೆಯ ನಿಮಿತ್ತ ಅವರೊಂದಿಗೆ ಕೆಲಕಾಲ ಸಂತೋಷದಿಂದ ಕಳೆಯುವದಾಗಿತ್ತು. ನಾನಿಲ್ಲಿ ಹೇಳಹೊರಟಿರುವುದು ಆಟದಲ್ಲಿ ಗೆದ್ದವರ ಬಗ್ಗೆಯಾಗಲಿ ಅಥಾವ ಸೋತವರ ಬಗ್ಗೆಯಾಗಲಿ ಅಲ್ಲ. ಜೀವನದಲ್ಲಿ ಎಲ್ಲ ತರಹದ ಆಟಗಳನ್ನು ಆಡಿ, ನೋಡಿ, ಸೋತು ಹಿಡಿಯಾಗಿ, ಅಲ್ಲಿ ಬಂದವರಲ್ಲಿ ಒಂದು ಹಿಡಿಯಷ್ಟು ನಗೆಯನ್ನು ಕೊಡುವ ಒಂದು ಚಿಕ್ಕ ಪ್ರಯತ್ನವಾಗಿತ್ತು. ಜೀವನದ ಇಳಿಸಂಜೆಯನ್ನು ಕಳೆಯುತ್ತಿರುವ ಇವರ ಜೊತೆ ಬೆರೆತಾಗ ಅವರಿಗಾದ ಸಂತೊಷದಿಂದ ನನ್ನ ಹೃದಯ ತುಂಬಿಬಂದಿತ್ತು. ಕೆಲ ಹಿರಿಯರು ನನ್ನನ್ನು ನೋಡಿದಾಗಲೆಲ್ಲ ನನ್ನತ್ತ ನೋಟಬೀರಿ ಎರಡೂ ಕೈಜೊಡಿಸಿ ಕೈ ಮುಗಿಯುತ್ತಿದ್ದರು. ಹಿರಿಯ ಜೀವಿಗಳ ಈ ನಡೆ ನನ್ನನ್ನು ನಿಜವಾಗಿಯೂ ಕುಬ್ಜನನ್ನಾಗಿ ಮಾಡಿತ್ತು. ವೃದ್ಧಾಶ್ರಮವೊಂದನ್ನು ಒಳಹೊಕ್ಕು ಅದರ ಆಗು ಹೋಗುಗಳನ್ನು ಹತ್ತಿರದಿಂದ ನೊಡಿದ ಮೊದಲ ಅನುಭವ ನನ್ನದು.  ಅಲ್ಲಿರುವ ಒಬ್ಬೊಬ್ಬರದ್ದೂ ಒಂದೊಂದು ಕತೆ......... ವ್ಯಥೆ! ಒಬ್ಬ ಹಿರಿಯರು ಅವರಿಗೆಷ್ಟು ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಎಂದು ಪದೇ ಪದೇ ಹೇಳುತ್ತಲೆ ಇದ್ದರು. ಹಾಗೆ ಹೇಳುತ್ತಲೆ ನಾನಿಲ್ಲಿ ಚನ್ನಾಗಿದ್ದೇನೆ. ಅವರೂ ಚೆನ್ನಾಗಿದ್ದಾರೆ ಎಂಬ ಮಾತನ್ನು ಒತ್ತಿ ಒತ್ತಿ ಹೇಳುತ್ತಿದ್ದರು. ಆದರೆ ಅವರೊಳಗೆ ಕುದಿಯುತ್ತಿರುವ ಜ್ವಾಲಾಮುಖಿಯನ್ನು ಹತ್ತಿಕ್ಕಿ ಮಾತನಾಡುತ್ತಿರುವುದು ಸ್ಪಷ್ಟವಾಗಿ ಅನುಭವವಾಗಿತ್ತು. 
                      ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ ಅಂತೆಲ್ಲ ಹೇಳುತ್ತಾರೆ. ಆದರೆ ಈ ಹುಟ್ಟುಸಾವಿನ ಮಧ್ಯೆ ಜೀವನ ಎಂಬುದೊಂದು ಇದೆಯೆಲ್ಲ! ಈ ಜೀವನದ ಒಂದು ಅಂಗವಾಗಿ ವೃದ್ಧಾಪ್ಯ ಒಂದು ಶಾಪವೇ ಸರಿ! ಬದಲಾವಣೆಯೇ ಜೀವನ, ನಿರಂತರ ಚಲನೆಯೇ ಜೀವನ, ಹಳೇ ಬೇರು  ಹೊಸಚಿಗುರು ಎಂಬಿತ್ಯಾದಿ ಹೇಳಿಕೆಗಳೇನೋ ಸರಿ, ಆದರೆ ಅಲ್ಲಿರುವ ಹಿರಿಯ ಜೀವಗಳನ್ನು ನೋಡಿದಾಗ ಅವರು ಹೆಚ್ಚಾಗಿ ನೊಂದಿರುವುದು ವೃದ್ಧಾಪ್ಯದಿಂದಲ್ಲ ಎಂಬುದು ನಿಶ್ಚಳವಾಗಿ ಗೋಚರಿಸುತ್ತದೆ. ಹೊಸ ಚಿಗುರು, ಹಳೇ ಬೇರಿಲ್ಲದೆ ಚಿಗುರಲಾರದು ಎಂಬುದನ್ನು ನಾವೆಲ್ಲ ಮರೆತೇ ಬಿಡುತ್ತೇವೆ.  ಮರೆತರೆ ಯಾವ ನ್ಯಾಯ? ಬಹುತೇಕ ಅಲ್ಲಿರುವ ಎಲ್ಲರ ಪರಿಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗೇನೂ ಇಲ್ಲ.  ಸದಾ ನಾಲ್ಕು ಗೋಡೆಗಳ ಮಧ್ಯೆ ಕಾಲಕಳೆಯುವ ಸ್ಥಿಯಲ್ಲಿರುವ ಇವರು, ಯಾರೋ ಹೊಸಬರು, ಹೊರಗಿನವರು ಅಲ್ಲಿಗೆ ಹೋದಾಕ್ಷಣ ಚೈತನ್ಯದ ಚಿಲುಮೆಯಾಗಿಬಿಡುತ್ತಾರೆ. ಸಾಂಗತ್ಯ ಅವರಿಗೆ ಮುದ ನೀಡಿದೆ ಎಂಬುದು ಅವರ ಕಣ್ಣುಗಳಿಂದಲೇ ತಿಳಿದುಕೊಳ್ಳಬಹುದು. ಅವರನ್ನು ಕಾಡುತ್ತಿರುವುದು ಬರಿ ವೃದ್ಧಾಪ್ಯವಲ್ಲ. ಅವರಿಗೆ ಪ್ರೀತಿ ತೋರಿಸುವ ಕಣ್ಣುಗಳು ಬೇಕು.ಹೃದಯಕ್ಕೆ ಹತ್ತಿರವಾಗಿ ಸಾಂತ್ವಾನ ನೀಡುವವರು ಬೇಕು. ಮನಸ್ಸಿನ ಗಾಯಕ್ಕೆ ಮುಲಾಮು ಹಚ್ಚುವವರು ಬೇಕು. ಪ್ರೀತಿಗಾಗಿ ಹಂಬಲಿಸುವ ಅಸಹಾಯಕ ಸ್ಥಿತಿಗೆ ಇಳಿದುಬಿಡುತ್ತಾರೆ. ಅದು ಸಿಗದೇ ಇದ್ದಾಗ ಕಳೆಗುಂದಿ ಬಿಡುತ್ತಾರೆ. ಅದು ಸಹಜ ಕೂಡ. ಇದು ನಿಜಕ್ಕೂ ಅಸಹನೀಯ.

                 ಅವಿಭಕ್ತ ಕುಟುಂಬಗಳ ವ್ಯವಸ್ಥೆ ಕ್ರಮೇಣವಾಗಿ ಮಾಯಾವಾಗುತ್ತಿದೆ. ಜಾಗತೀಕರಣ ಹಾಗೂ ನಗರೀಕರಣದ ನೆಪದಲ್ಲಿ ಯುವ ಜನಾಂಗ ಸ್ವಾರ್ಥಿಯಾಗುತ್ತಿದೆ. ಅನಪೇಕ್ಷಿತ ಕಾರಣಗಳಿಂದಾಗಿ ಹಿರಿಯರು ಮೂಲೆಗುಂಪಾಗುತ್ತಿದ್ದಾರೆ. ಇಂದಿನ ಬಹುತೇಕ ಯುವ ಜನಾಂಗದ ಯೋಚನಾಲಹರಿ ಒಂದೇ ತರಹ ಇದೆ. ತನಗೆಲ್ಲ ತಿಳಿದಿದೆ. ತನ್ನನ್ನು ಸಾಕಿ ಬೆಳೆಸಿದ ಹಿರಿಯರು ಹಳೆಯ ಕಾಲದವರು. ಅವರಿಗೆ ಏನೂ ತಿಳಿಯುವುದಿಲ್ಲ ಎಂಬ ಅಹಂಕಾರ ಇಂದಿನ ಯುವ ಪೀಳಿಗೆಯಲ್ಲಿದೆ ಎಂದರೆ ತಪ್ಪಾಗಲಾರದು.
      ಮಂಕಾದ ನಕ್ಷತ್ರಗಳ ಮಧ್ಯೆ ಸುಡುವ ಸೂರ್ಯ ನಾವಾಗಬಾರದು. ಜೀವನ ಸಂಧ್ಯಾಕಾಲದಲ್ಲಿರುವ ಅವರು ತಮ್ಮ ಪೂರ್ಣಾಯುಷ್ಯವನ್ನು ಆ ನಾಲ್ಕು ಗೋಡೆಗಳ ಮಧ್ಯೆ ಹೊರ ಜಗತ್ತಿನ ಸಂಪರ್ಕವಿಲ್ಲದೆ ಅದು ಹೇಗೆ ಕಳೆಯುತ್ತಾರೋ ನಾನರಿಯೆ! ಆದರೆ ನನ್ನ ಒಡನಾಟದಿಂದ ಅವರ ಒಂಟಿತನ ಕಿಂಚಿತ್ತಾದರೂ ನಿವಾರಣೆಯಾಗಿದ್ದಲ್ಲಿ ನನ್ನ ಭೇಟಿ ಸಾರ್ಥಕ ಎಂದು ನಾನು ಭಾವಿಸುತ್ತೇನೆ.  

**__**__**__**




- ಮಹೇಶ್ ಶ್ರೀ ದೇಶಪಾಂಡೆ
ತುಷಾರ ಪ್ರಿಯ

Friday, 18 November 2016

ಹೂ ಮನಸು

ಹೂ ಮನಸು


ಹೂವಂಥ ಮನಸವಳೆ
ಹೂವಂತೆ ಸಲಹುವೆ||
ಹಿಡಿದಿಡಬೇಡ ಹೂ ಕಂಪ
ಹರಡು ಎಲ್ಲೆಲ್ಲೂ.॒.......
ನಾ ತೇಲುವೆ ಆ ಕಂಪಲಿ
ಇನ್ನಿಲ್ಲದ ಖುಷಿಯಲಿ ||೧||
ಕನಸಲಿ ಬಂದು ಕಾಡುವವಳೆ
ನನಸಾಗಿ ಬಂದು ಬೇಡುವವಳೆ
ಹಾಲಾಹಲವ ಹಾಲಾಗಿಸಿದವಳೆ
ಆ ಸುಧೆಯ ನನ್ನೆದೆಗೆ ಸುರಿದವಳೆ ||೨||
ನಿನಗಿರಲಿ ಜಗದೆಲ್ಲ ಸುಖ
ನಾ ಮರೆವೆ ನನ್ನೆಲ್ಲ ನೋವ
ಜೀವಜೀವಗಳು ಬೆರೆತಾಗ
ನಾ ಬರೆವೆ ನನ್ನೊಲವ ಕಥೆಯ ||೩||
ಹೂವಂಥ ಮನಸವಳೆ
ಹೂವಂತೆ ಸಲಹುವೆ||

**__**__**

-ಮಹೇಶ ಶ್ರೀ. ದೇಶಪಾಂಡೆ
ತುಷಾರಪ್ರಿಯ

Monday, 14 November 2016

ದರಬೇಸಿ


ದರಬೇಸಿ


ಪರದೇಶಿಯ ಪಾಡು ನೋಡೋ
ಈ ದರಬೇಸಿಯ ಹಾಡು ಕೇಳೋ||
ಕಾಡು ಮೇಡುಗಳ ಬೀಡಿನಲಿ
ಕಳೆದು ಹೋದೆ ....... ಕುರುಡನಾದೆ
ಏನೂ ನೋಡದಾದೆ
ಭಯವಿಲ್ಲ ..... ಬದುಕಬಲ್ಲೆ.||೧||
ಮೋಡ ಗುಡುಗು ಸಿಡಿಲುಗಳ ಅಬ್ಬರದಲ್ಲಿ
ನಡುಗಿದೆ....... ಕಿವುಡನಾದೆ.
ಏನೂ ಕೇಳದಾದೆ
ಚಿಂತೆಯಿಲ್ಲ .......ಬದುಕಬಲ್ಲೆ.||೨||
ಬಿರುಗಾಳಿ ಮಳೆಯ ಸೆಳವಲಿ
ಸಿಲಿಕಿದೆ..........ಮೂಕನಾದೆ
ಏನೂ ಹೇಳದಾದೆ
ಆತಂಕವಿಲ್ಲ........ ಬದುಕಬಲ್ಲೆ.||೩||
ಆದರೆ ಹೃದಯಹೀನರ ಲೋಕದಲಿ
ಬಂದಿಳಿದೆ........ಎದೆ‘ಬಡಿತ’
ನಿಲ್ಲಿಸಿದೆ .........ಬದುಕಲಾರೆ
ಭಯವಿಲ್ಲ.......ಚಿಂತೆಯಿಲ್ಲ .......ಆತಂಕವಿಲ್ಲ 
ನಿಶ್ಚಿಂತನಾದೆ||೪||


**__**__**
- ಮಹೇಶ ಶ್ರೀ. ದೇಶಪಾಂಡೆ
   ತುಷಾರಪ್ರಿಯ

Wednesday, 9 November 2016

ಮರೆತುಬಿಡು



ಮರೆತುಬಿಡು


ನೀ ನನ್ನ ಮರೆತು ಬಿಡು ...........ಗೆಳತಿ
ನೀನೀಗ ಹೊರಟು ಹೋಗು ಈ ಮನವ ತೊರೆದು ||
ಸೂರ್ಯನ ಕೆಂಪು ತಂಪಾದಾಗ
ಚಂದ್ರನ ತಂಪು ಹಿತವಾದಾಗಲೇ
ನೀ ನನ್ನ ಮರೆತು ಬಿಡು ...........ಗೆಳತಿ
ನೀನೀಗ ಹೊರಟು ಹೋಗು ಈ ಮನವ ತೊರೆದು ||
ಹರಿವ ನದಿ ಬತ್ತುವ ಮುನ್ನ
ಸಾಗರದಲೆಗಳು ಉಕ್ಕುವ ಮುನ್ನ
ನೀ ನನ್ನ ಮರೆತು ಬಿಡು ...........ಗೆಳತಿ
ನೀನೀಗ ಹೊರಟು ಹೋಗು ಈ ಮನವ ತೊರೆದು ||
ತಾರೆಗಳ ತೋಟ ಬರಿದಾಗುವ ಮುನ್ನ 
ಒಲವಿನ ನೋಟ ಮರೆಯಾಗುವ ಮುನ್ನ
ನೀ ನನ್ನ ಮರೆತು ಬಿಡು ...........ಗೆಳತಿ
ನೀನೀಗ ಹೊರಟು ಹೋಗು ಈ ಮನವ ತೊರೆದು ||
ತಿರುಗುವ ಭೂಮಿ ನಿಲ್ಲುವ ಮುನ್ನ
ಬಿರಿದ ನೆಲ ನಲುಗುವ ಮುನ್ನ
ನೀ ನನ್ನ ಮರೆತು ಬಿಡು ...........ಗೆಳತಿ
ನೀನೀಗ ಹೊರಟು ಹೋಗು ಈ ಮನವ ತೊರೆದು ||



**__**__**
- ಮಹೇಶ ಶ್ರೀ. ದೇಶಪಾಂಡೆ
ತುಷಾರಪ್ರಿಯ

Friday, 4 November 2016

ಅರ್ಧ ಕೊಡ


ಅರ್ಧ ಕೊಡ



ನೆಲವೊಂದೆ ಜಲವೊಂದೆ
ನೆತ್ತಿ ಸುಡುವ ಸೂರ್ಯನೂ ಒಂದೇ
ಬೆಳ್ಳಿ ಬೆಳಕ ಚಂದ್ರನೂ ಒಂದೇ
ಬೀಸುವ ತಂಗಾಳಿಯೂ ಒಂದೇ
ಅದೊಂದು ಸೋಜಿಗ
ಪರಮ ಕೌತುಕಗಳ ಆಗರ
ಅಲ್ಲೊಂದು ಹಚ್ಚ ಹಸುರಿನ ಜೀವ
ತಲೆಯೆತ್ತಿ ಬೀಗುತಿದೆ - ಹಸಿರು ತುಂಬಿದ ಕೊಡದಂತೆ
ಮೆಚ್ಚಿ ಮೆರೆಯುವ ಹುಚ್ಚು || ನೆಲವೊಂದೆ ||
ಇಲ್ಲೊಂದು ಕಿಚ್ಚು ಹೆಚ್ಚಾದ ಭಾವ
ತಲೆಬಾಗಿ ಸೊರಗಿದೆ – ಉಸಿರು ಬತ್ತಿದ ಖಾಲಿ ಕೊಡದಂತೆ
ಕೊಚ್ಚಿ ಕೆಡುವುವ ಹುಚ್ಚು || ನೆಲವೊಂದೆ ||
ಮತ್ತೊಂದು ನಿರ್ಜೀವ ನಿರವ ಅರೆಜೀವ
ಹಚ್ಚ ಹಸುರಿನ ಹುಚ್ಚಿಲ್ಲ
ಕಿಚ್ಚು ಹೆಚ್ಚಾದ ಭಾವವಿಲ್ಲ
ಅರೆ ಚಿಗುರು ......... ಬರಿ ಬಯಲು ರೆಂಬೆ
ಚಿಗುರು ಹಸಿರಾಗಿ ಪುಟಿವಾಸೆ
ಬರಿಬಯಲು ಒಣಗಿದ ಭಾವ
ಇದ್ದಷ್ಟುದಿನ ಹಸಿರು ಉಸಿರು
ಜೀವ ಭಾವಗಳ ಕೊಸರಾಟ 
ಹಸಿರು ಉಸಿರು ತಾಕಲಾಟ
ಅರ್ಧಕೊಡದ ತುಳಕಾಟ
ಏರಲೂ ಇಲ್ಲ ........... ಇಳಿಯಲೂ ಇಲ್ಲ ............
ಬದುಕು ಬವಣೆಗೆ ಬಳಲಿ
ಅಳಿವ ಸೂಚನೆ ತಿಳಿದಿದೆ || ನೆಲವೊಂದೆ ||
      

ಮಹೇಶ ಶ್ರೀ. ದೇಶಪಾಂಡೆ
       ತುಷಾರಪ್ರಿಯ

Monday, 24 October 2016

ಮನಸ್ಸಿಗೊಂದು ಮನವಿ


ಮನಸ್ಸಿಗೊಂದು ಮನವಿ



ಎಳೆಮನಸೋ, ಹದಿಮನಸೋ, ಮುದಿಮನಸೋ
ಮನಸು ಮನಸೇ||
ಮನಸಿಗಿಲ್ಲ ವಯಸು| ಮನಸಿಗಿರುವದೇ ಖಾಯಿಸು|
ಹೊತ್ತಿಲ್ಲ ಗೊತ್ತಿಲ್ಲ | ಹಗಲಿಲ್ಲ ಇರುಳಿಲ್ಲ|
ಅಲೆಮಾರಿ ಮನಸಿದು||
ತಿರುಗಿದಷ್ಟೂ ದಣಿವಾಗದ ಮನಸಿದು|
ಮನಸೇ ...... ಆದರೂ ನಿನಗೊಂದು ಮನವಿ
ಬಡತನದ ಹಂಗಿರದ| ಸಿರಿತನ ಬರವಿರದ|
ಏರಿದರೂ ಹಿಗ್ಗದ| ಬಿದ್ದರೂ ಜಗ್ಗದ|
ಜಗಜಟ್ಟಿಯ ಮನಸು ನೀನಾಗು||
ಕಣ್ಣೀರು ಒರೆಸದಿರೆ ಚಿಂತೆಯಿಲ್ಲ
ಕಣ್ಣೀರು ಹಾಕಿಸಬೇಡ|
ಮಗು ಮನಸು ನಿನಗಿರಲಿ|
ನಗು ಮನಸು ನಿನಗಿರಲಿ|
ನಕ್ಕುನಗಿಸುವ ಮನಸು ನಿನದಾಗಲಿ||
ಎಡವಿ ಬಿದ್ದವರ ಮೈದಡವಿ ಆಸರೆಯಾಗದಿರೆ ಚಿಂತೆಯಿಲ್ಲ|
ಅದನೋಡಿ ನಗುವ ಮನಸು ನಿನಗೆ ಬೇಡ||
ಮೂರು ದಿನದ ಬದುಕಿಗೆ
ನೂರಾರು ಮುಖವಾಡದ ಮನಸ್ಯಾಕೋ!


--**__**__**--



- ಮಹೇಶ್ ದೇಶಪಾಂಡೆ
-ತುಷಾರಪ್ರಿಯ


Thursday, 20 October 2016

ಮುತ್ತು

ಮುತ್ತು



ಶರಧಿಯ ತಳದಲಿ ಚಿಪ್ಪಿನಾ ಗರ್ಭದಲಿ
ಸ್ವಾತಿಮಳೆ ಹನಿ ಒಡೆದು ಮುತ್ತೊಂದು ಮೂಡಿದೆ
ನೀನೇ ಅದರೊಡತಿ ........ ನೀನೇ ಅದರೊಡತಿ ........
ಎಂದು ಮನಕೂಗಿ ಹೇಳುತಿದೆ
ನಿನ್ನ ಕೊರಳಲದು ಹೊಳೆಯಲೆಂಬ
ಉತ್ಕಟ ವಾಂಛೆ ಆವರಿಸ ತೊಡಗಿದೆ
ಕಣ್ಣಾಲಿಗಳು ತೇವಗೊಂಡು ಎದೆ ಭಾರವಾಗಿದೆ
ಏನೋ ಹಳವಂಡ .........!
ಉದುರಿದವೆರಡು ಕಂಬನಿ ಹನಿಗಳು
ನೆಲಕಪ್ಪುವ ಮೊದಲೇ ಜೋರಾಗಿ ಮಳೆಸುರಿದು
ಧರೆಗೆ ಹರಿದಿದ್ದು ಮಳೆನೀರೋ! ಕಂಬನಿಯೋ!
ನಾನರಿಯದಾದೆ
ಬಾನಂಚಲಿ ಕೋಲ್ಮಿಂಚ ಕೋಲಾಟ
ಕಣ್ಣು ಕತ್ತಲೆಗೂಡಿ ಎಲ್ಲವೂ ಅಯೋಮಯ!
ಎಡಬಿಡದ ಮಳೆಹನಿಗಳ ಕೂಡ
ಕಂಬನಿಯ ಕೋಡಿ ಪಂಥಕ್ಕಿಳಿದಿದೆ
ನಿಲ್ಲದ ಮಳೆಯಬ್ಬರ
ಕಂಬನಿಯ ಕೋಡಿ ಸೋಲಿಗೆ ಶರಣು
ಹಾಗಾದರೆ ನಾನು ಕಳೆದುಕೊಂಡಿದ್ದಾದರೂ ಏನು?
ಸಂತಸದ ಹೊನಲೋ .........!? ಹತಾಶೆಯ ಕನಲೋ ........!?
ನಾ ಕುಸಿದು ಕುಳಿತೆ
ಕೊನೆಗೂ ಕಳೆದುಹೋದ ಮುತ್ತೊಂದು ನನಗೀಗ ಸಿಕ್ಕಿದೆ
ಸಿಕ್ಕ ಖುಷಿಯಲಿ
ನಾ.......... ನಗುತಲೇ ಇದ್ದೆ......... !
ನಾ.......... ನಗುತಲೇ ಇದ್ದೆ......... !
ಮತ್ತೆ ಹರಿದ ಕಂಬನಿಯ ಕೋಡಿ
ಕಡಲಲಿ ಕರಗುವವರೆಗೆ!
ಮತ್ತೊಂದು ಮುತ್ತು ಕೈವಶವಾಗುವವರೆಗೆ !

*-*-*-*



ಮಹೇಶ ಶ್ರೀ. ದೇಶಪಾಂಡೆ
-ತುಷಾರಪ್ರಿಯ

Saturday, 15 October 2016

ಮನಸು




ಮನಸು




ಈ ಮನಸು ನಿನಗಾಗಿ, ಜೀವಾನೂ ಕೊಡ್ತಿನಿ
ಏ...... ಈ ಮನಸು ನಿನಗಾಗಿ, ಜೀವಾನೂ ಕೊಡ್ತಿನಿ
ಗೆಳತಿ ......... ನಿನಗೆಂದೂ ನೋವು ನೀಡೊಲ್ಲ
ಈ ಮನಸು ನಿನಗಾಗಿ, ಜೀವಾನೂ ಕೊಡ್ತಿನಿ
ಈ ದೇವರಾಣೆ ......... ಗೆಳತಿ ......... ಈ ದೇವರಾಣೆ
ಈ ಮನಸು ನಿನಗಾಗಿ, ಜೀವಾನೂ ಕೊಡ್ತಿನಿ
ಗೆಳತಿ ......... ನಿನಗೆಂದೂ ನೋವು ನೀಡೊಲ್ಲ
ಹೇಗೋ ಬದಲಾದ ಬದುಕು
ತಿಳಿದಿಲ್ಲ ನಾ ಹೀಗೆಂದು
ತಿಳಿದಿಲ್ಲ ಎಲ್ಲಿ ಏನಾಯ್ತೋ
ನಾ ಮೋಸಗಾರನಾದೆ ನನಗರಿವಿಲ್ಲದೆ
ನೀ ನೀಡು ನ್ಯಾಯ ......... ಮನ್ನಿಸು ನನ್ನ..........
ಇಷ್ಟಾದರೂ ನೀ ದಯತೋರು
ಈ ಮನಸು ನಿನಗಾಗಿ, ಜೀವಾನೂ ಕೊಡ್ತಿನಿ
ಗೆಳತಿ ......... ನಿನಗೆಂದೂ ನೋವು ನೀಡೊಲ್ಲ
ಹುಡುಗುತನದ ಹುಚ್ಚು
ನಾನರಿಯಲಿಲ್ಲ ನಿನ್ನಾಸರಳತೆ
ನಾನಿನಗೆ ನೀಡಬೇಕು, ಅಂಥಾ ಪ್ರೀತಿಯ, ಇದೇನನ್ನ ಬಯಕೆ
ನಿನ್ನೆರಡು ಪಾದದಡಿ ನಾನಿಡುವೆ ಈ ಎರಡು ಜಗವ
ನನ್ನೆಲ್ಲ ನೆಮ್ಮದಿ ನಿನಗಾಗಿ, ನನ್ನೆಲ್ಲ ಖುಷಿ ನಿನಗಾಗಿ,
ನೀನೀಡು ನನಗೆ ನಿನ್ನೆಲ್ಲ ನೋವು 
 ಈ ಮನಸು ನಿನಗಾಗಿ, ಜೀವಾನೂ ಕೊಡ್ತಿನಿ
ಗೆಳತಿ ......... ನಿನಗೆಂದೂ ನೋವು ನೀಡೊಲ್ಲ
ಕಂಬನಿಗಳು ನನ್ನೀ ಕಥೆಯ ಹೇಳುತಿವೆ
ನೀ ತಿಳಿಯ ಬೇಡ, ಅದುಬರೀ ನೀರೆಂದು
ಕಂಬನಿಯ ಗುರುತು ಅಳಿಸಿವೆ....... ಬಿಕ್ಕಳಿಸಿ ಬಿಕ್ಕಳಿಸಿ,
ನಂಬುಗೆಯ ಬಣ್ಣ ಅದ್ದುವೆ ಅದರೊಳು ಇಂದು
ನೀನನ್ನ ಜೊತೆಯಲಿ ಇದ್ರೆ, ಚ್ಯುತಿಯೆಂದೂ ಆಗದು
ಇನ್ನೆಂದು ನಿನಗೆ ನಾ ದ್ರೋಹ ಮಾಡೆನು
ಈ ಮನಸು ನಿನಗಾಗಿ, ಜೀವಾನೂ ಕೊಡ್ತಿನಿ
ಗೆಳತಿ ......... ನಿನಗೆಂದೂ ನೋವು ನೀಡೊಲ್ಲ
ಈ ದೇವರಾಣೆ ......... ಗೆಳತಿ ......... ಈ ದೇವರಾಣೆ

*-*-*-*
  ಮಹೇಶ ಶ್ರೀ. ದೇಶಪಾಂಡೆ
-ತುಷಾರಪ್ರಿಯ
(ಇದು ಹಿಂದಿ ಚಿತ್ರ ಗೀತೆಯ ಭಾವಾನುವಾದ!  ಸಾಧ್ಯವಾದರೆ ಊಹಿಸಿ!)

Thursday, 6 October 2016

’ಪಲಾಯನಗೊಂಡ ಪ್ರತಿಭೆಗಳನ್ನು ತೆಗಳುವ ಬದಲು…!’

ಪ್ರತಿಭಾ ಪಲಾಯನದ ಬಗ್ಗೆ ಈಗಾಗಲೆ ನೂರಾರು ಲೇಖನಗಳು, ಅನಿಸಿಕೆಗಳು, ವಾದ ವಿವಾದಗಳು ಪ್ರಕಟಗೊಂಡಿರಬಹುದು ನನಗನ್ನಿಸಿದ ಕೆಲವು ವಿಚಾರಗಳನ್ನು ನನಗನ್ನಿಸಿದ ರೀತಿಯಲ್ಲಿ ಹಂಚಿಕೊಳ್ಳಲು ಇಚ್ಚಿಸುತ್ತೇನೆ.
ಮಧ್ಯಮ ವರ್ಗದ ಜನರ ಪ್ರತಿಭೆಗಳ ವಿಚಾರಕ್ಕೆ ಬರೋಣ. ಬರುವ ಆದಾಯದಲ್ಲಿ ಅಷ್ಟೊ ಇಷ್ಟು ಉಳಿಸಿ, ಕೂಡಿಟ್ಟು ಮಕ್ಕಳನ್ನು ಓದಿಸಿ ಕನಸು ಕಾಣುತ್ತ, ಮಕ್ಕಳ ಭವಿಷ್ಯದಲ್ಲಿ ಬೆಳಕು ನೋಡುವ ವರ್ಗದವರಿವರು. ಸರಕಾರದ ಯಾವ ಸವಲತ್ತು ಇವರಿಗೆ ದೊರಕಲಾರದು. ಶೇಕಡ 90 ಅಥವ ಅದಕ್ಕೂ ಹೆಚ್ಚು ಅಂಕಗಳಿಸಿ ವೃತ್ತಿಪರ ಶಿಕ್ಷಣಕ್ಕೆ ಸೀಟು ಗಿಟ್ಟಿಸುವಲ್ಲಿ ಅನೇಕರು ವಿಫಲರಾಗುತ್ತಾರೆ. ಇದಕ್ಕೆಲ್ಲ ಕಾರಣ ನಮ್ಮ ಮೀಸಲಾತಿ ನೀತಿಯಲ್ಲಿರುವ ಧ್ಯೇಯಗಳು ಅಸಮಾನತೆಯ ಕಂದಕವನ್ನು ಪ್ರತಿಭಾವಂತರಲ್ಲಿ ಮತ್ತು ಪ್ರತಿಭೆಯ ಪ್ರಮಾಣ ಕಡಿಮೆ ಇರುವವರಲ್ಲಿ ಸೃಷ್ಟಿಮಾಡುತ್ತದೆ. ಆರಕ್ಕೂ ಏರದ ಮೂರಕ್ಕೂ ಇಳಿಯದ ಜನರಿವರು. ಜೀವನಪೂತರ್ಿ ಕೆಲಸಮಾಡಿದರೂ ಒಂದು ಸ್ವಂತ ಮನೆಮಾಡಿಕೊಂಡ, ಸಾಲಸೋಲಗಳಿಲ್ಲದೆ ಮಕ್ಕಳ ಮದುವೆ ಮಾಡಿದ ಒಂದು ಉದಾಹರಣೆ ತೋರಿಸಿ ನೋಡೋಣ, ಊಹೂಂ! ಸಾಧ್ಯವಿಲ್ಲ, ಹಾಗೂ ಹೀಗೂ ಕಷ್ಟಪಟ್ಟು ಓದಿದ ಮೇಲೆ ತಮ್ಮ ತಮ್ಮ ಭವಿಷ್ಯವನ್ನು ತಮಗಿಷ್ಟದ ರೀತಿಯಲ್ಲಿ ರೂಪಿಸಿಕೊಳ್ಳುವ ಎಲ್ಲ ಸ್ವಾತಂತ್ರ ಅವರಿಗಿದೆ. ಅವರನ್ನು ತಡೆಹಿಡಿದು ದೇಶಪ್ರೇಮದ ನಾಲ್ಕು ಮಾತಾಡಿ ಎದೆ ಬಡಿದುಕೊಂಡರೆ ಹೊಟ್ಟೆ ಮೇಲೆ ತಣ್ಣೀರು ಬಟ್ಟೆಯೇ ಗತಿ! ಪ್ರತಿಭಾ ಪುರಸ್ಕಾರಕ್ಕೆ ನಮ್ಮಲ್ಲಿ ನಾವೆಷ್ಟು ಬೆಲೆ ಕೊಡುತ್ತೇವೆ.
ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿ ಗಳನ್ನು ವೇದಿಕೆಗೆ ಕರೆದು ಐನೂರೋ ಸಾವಿರ ರೂಪಾಯಿಗಳ ಕವರ್ ಸಮೇತ ಪ್ರಮಾಣ ಪತ್ರ ನೀಡಿ ಜನರಿಂದ ಚಪ್ಪಾಳೆ ಹೊಡೆಸಿದ ಸಂಭ್ರಮ, ಭ್ರಮನಿರಶನದಲ್ಲಿ ಕೊನೆಯಾಗಲು ಬಹಳ ದಿನ ಕಾಯಬೇಕಾಗಿಲ್ಲ. ವೃತ್ತಿಶಿಕ್ಷಣ ಕೋಸರ್್ಗಳಿಗೆ ಅಜರ್ಿಗುಜರಾಯಿಸಿ ಬಕಪಕ್ಷಿಯಂತೆ ಕಾಯಬೇಕಾದ ಪರಿಸ್ಥಿತಿ. ಅಯ್ಯೋ, ನಿಮ್ಮದು ಜನರಲ್ ಕೆಟೆಗರಿನಾ! ಸ್ವಲ್ಪ ಕಷ್ಟಾನೇ! ಎನ್ನುವ ಚುಚ್ಚುನುಡಿಗಳು ಪ್ರತಿಭಾವಂತ ವಿದ್ಯಾಥರ್ಿಯ ಮನಸ್ಸಿನಲ್ಲಿ ಯಾವ ತರಹದ ಕೆಚ್ಚನ್ನು ಉಂಟು ಮಾಡಬಲ್ಲದೆಂದು ನೀವೇ ಊಹಿಸಿ. ನಮ್ಮ ನೆಲದಲ್ಲಿ ನಾವೇ ಪರಕೀಯರೇ? ಎಂಬ ಸಂಶಯ ಮೂಡುತ್ತದೆ. ವ್ಯವಸ್ಥೆಯ ವಿರುದ್ಧ ಆಕ್ರೋಶಗೊಂಡರೂ ಏನೂ ಮಾಡಲಾಗದ ಸ್ಥಿತಿ. ಯಾವುದೋ ಆದರ್ಶಕ್ಕೆ ಕಟ್ಟುಬಿದ್ದು ಪ್ರತಿಭೆಗಳು ಮುರುಟಿ ಹೋಗಬಾರದು. ಆದರ್ಶಕ್ಕೆ ಕಟ್ಟುಬಿದ್ದರೆ ಸಿಗುವ ಪುರಸ್ಕಾರ ಅಷ್ಟರಲ್ಲೇ ಇದೆ!. ಅಷ್ಟಕ್ಕೂ ನಮ್ಮ ಸರಕಾರ ಪ್ರತಿಭಾ ಪಲಾಯನ ತಡೆಗಟ್ಟಲು ಏನು ಕ್ರಮ ತೆಗೆದುಕೊಂಡಿದೆ? ಏನೂ ಇಲ್ಲವೆಂದು ಹೇಳಬೇಕು. ಇಂದಿನ ಯುವಕರು ನಾಳಿನ ಭವಿಷ್ಯ ಬುನಾದಿ ಎಂದೆಲ್ಲ ಬೊಬ್ಬೆ ಇಡುವ ಆಷಾಡಭೂತಿ ರಾಜಕಾರಣಿಗಳು, ವಯಸ್ಸಾಗಿ ನಡೆದಾಡುವ ಸಾಮಥ್ರ್ಯಕಳೆದುಕೊಂಡು ಗಾಲಿಕುಚರ್ಿಯಲ್ಲಿ ಕುಳಿತುಕೊಂಡು ಸಾಯುವವರೆಗೂ ಅಧಿಕಾರಕ್ಕಾಗಿ ಜೊಲ್ಲು ಸುರಿಸುವ ಇಂಥ ನಾಯಕರು ಪ್ರತಿಭಾಪಲಾಯನಕ್ಕೆ ಏನು ಕ್ರಮ ತೆಗೆದುಕೊಂಡಿರುವರೆಂದು ಜನರಿಗೆ ತಿಳಿಯಬೇಕು. ಸ್ವಜನ ಪಕ್ಷಪಾತ, ಭ್ರಷ್ಟಾಚಾರದಲ್ಲಿ ಮುಳುಗಿರುವ ಇವರಿಂದ ಏನು ಅಪೇಕ್ಷಿಸಲು ಸಾಧ್ಯ? ಬೇರೆ ದೇಶಗಳಲ್ಲಿ ನಮ್ಮ ಪ್ರತಿಭೆಗಳಿಗೆ ಸಿಗುವ ಮನ್ನಣೆ ನಮ್ಮ ಜನ, ನಮ್ಮ ಸರಕಾರ ನಮ್ಮ ವ್ಯವಸ್ಥೆ ಸರಿಯಾಗಿ ಗುರುತಿಸಿದರೆ ಪ್ರತಿಭಾ ಪಲಾಯನ ನಿಲ್ಲಬಹುದು. ಈ ಸಂದರ್ಭದಲ್ಲಿ ಇಂಗ್ಲೆಂಡನ ಪ್ರತಿಷ್ಟಿತ ಕಂಪನಿಯೊಂದರ ಮುಖ್ಯವ್ಯವಸ್ಥಾಪಕರು ಸಂದರ್ಶನವೊಂದರಲ್ಲಿ ಹೇಳಿದ ಮಾತು ನೆನಪಾಗುತ್ತದೆ. ನೀವು ಏನನ್ನು ಆಮದು ಮಾಡಿ ಕೊಳ್ಳುತ್ತೀರಿ ಎಂದು ಕೇಳಿದಾಗ, ನಾವು ಪ್ರತಿಭೆಗಳನ್ನು ಆಮದು ಮಾಡಿಕೊಳ್ಳುತ್ತೇವೆ. ಎಂದು ಹೇಳಿದಾಗ ಅವರ ದೂರಗಾಮಿ ದೃಷ್ಟಿಗೆ ನಾವು ತಲೆಬಾಗಲೇಬೇಕು. ಈ ದೃಷ್ಟಿಕೋನದಲ್ಲಿ ನಾವ್ಯಾರೂ ಚಿಂತನೇ ಮಾಡೋದೇ ಇಲ್ಲ.
ಮುಂದುವರಿದ ಕೆಲ ರಾಷ್ರ್ಟಗಳು ಹೊರದೇಶಗಳೀಗೆ ಉನ್ನತ ವ್ಯಾಸಂಗಕ್ಕಾಗಿ ತೆರಳುವ ಪ್ರತಿ ವಿದ್ಯಾರ್ಥಿಗಳಿಗೆ ಮರಳಿದೇಶಕ್ಕೆ ಬರುವ ಷರತ್ತಿನೊಂದಿಗೆ ವ್ಯಾಸಂಗದ ಎಲ್ಲ ಖರ್ಚುಗಳನ್ನು ಭರಿಸುವುದಲ್ಲದೆ ಪ್ರತಿಭೆಗೆ ತಕ್ಕ ಉದ್ಯೋಗ ಭರವಸೆಯನ್ನೂ ನೀಡುತ್ತದೆ, ಎಂದು ಕೇಳಿದ್ದೇನೆ. ಭಾರತ ಬಲಿಷ್ಠ ರಾಷ್ಟ್ರ, ಅಭಿವೃದ್ಧಿ ಶೀಲ ಹಾಗೂ ಮುಂದುವರೆದ ದೇಶ ಎನ್ನಿಸಿ ಕೊಳ್ಳಬೇಕಾದರೆ ಈ ತರಹದ ಯೋಜನೆಗಳು ಜಾರಿಗೊಳ್ಳಬೇಕು. ಐದುಸಾವಿರ ವರುಷಗಳ ಇತಿಹಾಸ ನಮ್ಮಲ್ಲಿದೆ. ನಳಂದಾ, ತಕ್ಷಶಿಲಾ ಪ್ರಾಚೀನ ವಿಶ್ವ ವಿದ್ಯಾಲಯಗಳಲ್ಲಿ ಹೊರದೇಶದ ವಿದ್ಯಾಥರ್ಿಗಳು, ಯಾತ್ರಾಥರ್ಿಗಳು ನಮ್ಮ ದೇಶದ ಸಂಸ್ಕೃತಿಗೆ ಮಾರುಹೋಗಿ ವಲಸೆ ಬಂದು ಕಲಿಯುತ್ತಿದ್ದ ಕಾಲವೊಂದಿತ್ತು. ಸ್ವಾತಂತ್ರ್ಯ ಬಯಸಿ ಹೋರಾಡಿದ ನೂರಾರು ಧೀರರು, ಬುದ್ಧಿವಂತರು, ಜ್ಞಾನಿಗಳು ತತ್ವಜ್ಞಾನಿಗಳು ಹಾಗೂ ದೇಶ ಪ್ರೇಮಿಗಳು ಭಾರತದ ಇಂದಿನ ಪರಿಸ್ಥಿತಿಯನ್ನು ಅಂದೇ ಊಹಿಸಿದ್ದರೆ ಸ್ವಾತಂತ್ರ್ಯ ಹೋರಾಟದ ಪ್ರಯತ್ನವನ್ನೇ ಮಾಡುತ್ತಿರಲಿಲ್ಲವೇನೊ! ಅಧಿಕಾರದ ಗದ್ದುಗೆ ಹಿಡಿಯುವುದೇ ಭೃಷ್ಟಾಚಾರ ನಡೆಸಲು ಸಿಗುವ ಲೈಸನ್ಸ್ ಎಂದು ಭಾವಿಸಿರುವ ರಾಜಕಾರಣಿಗಳಿಂದ ಯಾವ ರೀತಿಯ ಅಭಿವೃದ್ಧಿಯನ್ನು ನಿರೀಕ್ಷಿಸಿಸಲು ಸಾಧ್ಯ. ಇಂಥವರಿಂದ ದೇಶದ ಭವಿಷ್ಯ ನಿರ್ಮಾಣಗೊಳ್ಳುವುದು ಕನಸಿನ ಮಾತೆ ಸರಿ!
ಸೂಕ್ತ ಮಾರ್ಗದರ್ಶನ, ಆರ್ಥಿಕ ಸಹಾಯ ಸಿಗದೇ ಎಷ್ಟೊ ಪ್ರತಿಭೆಗಳು ಬೆಳಕಿಗೆ ಬರದೆ ಬಾಡಿ ಹೋಗಿವೆ………….. ಹೋಗುತ್ತಿವೆ. ಈ ನಿಟ್ಟೀನಲ್ಲಿ ನಾವ್ಯಾರು ಯೋಚಿಸುತ್ತಿಲ್ಲ. ಪ್ರತಿಭಾಪಲಾಯನ ಬರಿ ದೇಶದಿಂದ ದೇಶಕ್ಕೆ ಸೀಮಿತ ಗೊಳಿಸಿದರೆ ಸಾಲದು. ಪ್ರಾಂತದಿಂದ ಪ್ರಾಂತಕ್ಕೆ, ರಾಜ್ಯದಿಂದ ರಾಜ್ಯಕ್ಕೆ ಪ್ರತಿಭೆಗಳು ವಲಸೆಹೋಗುತ್ತಲೇ ಇವೆ. ಪ್ರತಿಭೆ ಇರುವವರು ಪ್ರತಿಭೆ ಪ್ರಕಟಗೊಳಿಸಲು ಹಾತೊರೆಯುತ್ತಿರುತ್ತಾರೆ ಹೆಸರಿನ ಜೊತೆಗೆ ಹಣದ ಅವಶ್ಯಕತೆಯ ಇದರಲ್ಲಿದೆ ತಪ್ಪೆನಿಲ್ಲ ಎನ್ನುವುದು ನನ್ನ ಭಾವನೆ ಹಳ್ಳಿಯ ಮೂಲೆಯೊಂದರಲ್ಲಿ ಚನ್ನಾಗಿ ಹಾಡಬಲ್ಲ. ಚಿತ್ರ ಬರೆಯಬಲ್ಲ, ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಅಂಕಗಳಿಸಿದ ಎಷ್ಟು ಪ್ರತಿಭೆಗಳು ಬೆಳಕಿಗೆ ಬಂದಿವೆ? ಅರಳುವ ಪ್ರತಿಭೆಗಳನ್ನು ಬಾಡಲು ಬಿಡಬಾರದು
ಅನಿವಾರ್ಯವಾಗಿ ಪ್ರತಿಭಾ ಪಲಾಯನ ಮಾಡಬೇಕಾದ ಸ್ಥಿತಿ ಇಂದು ಎಲ್ಲ ಮಧ್ಯಮ ವರ್ಗದವರ ಮನೆಯಲ್ಲಿ ನಿರ್ಮಾಣವಾಗಿದೆ. ಸ್ವಂತ ಪರಿಸರದಿಂದ, ಮನೆಯಿಂದ, ಬಂಧುಬಳಗದಿಂದ, ಸ್ನೇಹಿತರಿಂದ ದೂರಾಗುವ ಇವರು ಮಾನಸಿಕವಾಗಿ ಎಷ್ಟು ಕುಗ್ಗಿಹೋಗುತ್ತಾರೆಂದು ಅನುಭವಿಸಿಯೇ ತಿಳಿಯಬೇಕು.
ಪಲಾಯನಗೊಂಡ ಪ್ರತಿಭೆಗಳನ್ನು ತೆಗಳುವ ಬದಲು, ತಮ್ಮ ದೇಶದ ಪ್ರತಿಷ್ಠೆಯನ್ನು ಬೇರೆಡೆಯಲ್ಲಿ ಎತ್ತಿಹಿಡಿಯುವ ಬಗ್ಗೆ ನಾವೆಲ್ಲ ಹೆಮ್ಮೆ ಪಡಬೇಕು.
ಪ್ರತಿಭೆಗೆ ತಕ್ಕ ಪುರಸ್ಕಾರ ಸಿಗುವ ವಾತಾವರಣವನ್ನು ನಮ್ಮಲ್ಲಿಯೇ ಸೃಷ್ಠಿಸಿ ನೋಡೋಣ. ಆಗ ಯಾರೂ ಬೇರೆಕಡೆಗೆ ಹೋಗುವ ಮನಸ್ಸು ಮಾಡಲಾರರು ಹೋಗುವ ಕನಸು ಕಾಣಲಾರರು. ನಮ್ಮಲ್ಲಿಯ ಪ್ರತಿಭೆ ನಮ್ಮ ಮನೆಯ ದೀಪ ಬೆಳಗಲಿ ಎಂಬ ಮಹದಾಸೆ ಇದ್ದರೆ ಇದೆಲ್ಲ ಸಾಧ್ಯವೋ ಏನೋ?