Tuesday, 31 January 2017

ಕಾಲಚಕ್ರ

ಕಾಲಚಕ್ರ


  ಇಳಿಸಂಜೆಯ ತಂಪುಗಾಳಿ ಕಿಟಿಕಿಯನ್ಮು ತೂರಿ ಪರದೆ ತೇಲಿಸುತ್ತ ಸುಳಿದಾಡಿದ ಆ ಹೊತ್ತಿನಲ್ಲೆ ಮಗ್ಗಲು ಬದಲಿಸಿ ತಿರುಗಿದೆ. ಎಫ಼್.ಎಂ ಚಾನೆಲ್‌ನಲ್ಲಿ ಸಣ್ಣಗೆ ಕೇಳಿಬರುತ್ತಿದ್ದ, ಮೂಡಲ ಮನೆಯ ಮುತ್ತಿನ ನೀರಿನ ಎರಕಾವಾಹೋಯ್ದ..... ....., ಕನಸಿನಲ್ಲಿ ಕೇಳಿಸಿದಂತಾಗಿ ಎಲ್ಲಿ ಬೆಳಗಾಗುವವರೆಗೂ ಮಲಗಿಬಿಟ್ಟೆನೋ ಅಂತ ಥಟ್ಟಿನೆ ಕಣ್ಣುಬಿಟ್ಟೆ.  ರಜಾದಿನದ ಆಲಸ್ಯ ಮೈಮನಸ್ಸಿಗೆ ಆವರಿಸಿ ಏಳಲಾರದೆ ಹಾಗೇ ಸ್ವಲ್ಪಹೊತ್ತು ಹೊರಳಾಡಿ 'ಇದು ಬೆಳಗಲ್ಲ' ಮನಸ್ಸಿನಲ್ಲೇ ಮಾತಾಡಿಕೊಂಡೆ.  ಸಂಜೆಯ ಮಬ್ಬು ನಿಧಾನವಾಗಿ ಕವಿಯಲಾರಂಭಿಸಿತ್ತು. ಅತ್ತ ಸೂರ್ಯ ಪಡುವಣದಂಚಿಗೆ ಮರೆಯಾಗುವ ತಯಾರಿ ನಡೆಸಿದ್ದ.  ಮಬ್ಬು ಕವಿಯುವ ಆ ಸುಂದರ ಬದಲಾವಣೆ ಪ್ರಕ್ರಿಯೆ ಬಗ್ಗೆ ಯೋಚಿಸುತ್ತ ಇನ್ನೊಂದು ಸಣ್ಣ ಜೋಂಪು.  ಬೆಳಿಗ್ಗೆ ಎದ್ದಾಗಲೇ ನಿರ್ಧರಿಸಿದ್ದೆ, ವಾರಪೂರ್ತಿ ಪಾಠಮಾಡಿ, ದೂರದರ್ಶನ ಸಂವಾದ ಕಾರ್ಯಕ್ರಮಗಳು, ಅಂತರ್ ವಿಶ್ವವಿದ್ಯಾಲಯದ ಚರ್ಚಾಕೂಟಗಳ ನಿರೂಪಣೆಯ ನಿರ್ವಹಣೆ .........ಹೀಗೆ ಹಲವು ಹತ್ತಾರು ಬಿಡುವಿಲ್ಲದ ವೇಳಾಪಟ್ಟಿಯಿಂದ ಸುಸ್ತಾಗಿದ್ದನಾನು ಈ ದಿನ ಪೂರ್ತಿ ಮನೆಯಲ್ಲೇ ಸಮಯ ಕಳೆಯಬೇಕೆಂದು ನಿರ್ಧರಿಸಿದ್ದೆ.

ನನ್ನ ಬದುಕಿನಲ್ಲಾದ ನಾನಾ ತಿರುವುಗಳ ಬಗ್ಗೆ ಯೋಚಿಸುತ್ತ ಮೈಮರಿದು ಎದ್ದುಕುಳಿತೆ.  ಎಲ್ಲೋ ಹುಬ್ಬಳಿಯ ಹತ್ತಿರದ ಕುಗ್ರಾಮದಿಂದ ಹೊರಟ ನನ್ನ ಬದುಕಿನ ಬಂಡಿ ಇಂದು ಕನ್ನಡ ವಿಷಯ ಬೋಧಿಸುವ ಪ್ರೊಫ಼ೇಸರ್‌ಗಿರಿಯ ಪದವಿಕೊಟ್ಟು ಜ್ಞಾನಗಂಗೋತ್ರಿ ವಿಶ್ವವಿದ್ಯಾಲಯದ ಬಾಗಿಲವರೆಗೂ ತಲುಪಿದ್ದು ನನ್ನ ಮಟ್ಟಿಗೆ ಸಾಧಾರಣ ವಿಷಯವಾಗಿರಲಿಲ್ಲ.

  ಮುದ ನೀಡುವ ನೂರಾರು ವಿಷಯಗಳನ್ನು ಕಾಲಗರ್ಭದಿಂದ ಹೆಕ್ಕಿತೆಗೆದಾಗ ಒಂದೊಂದು ಪುಟದ ಒಂದೊಂದು ಬಣ್ಣ ಮನಸ್ಸಿನಲ್ಲಿ ಮೂಡುವ ಸಪ್ತವರ್ಣದ ಸಂಪುಟವಾಗುತ್ತದೆ.  ಒಂಟಿತನ ನನಗೇನೂ ಹೊಸತಲ್ಲ.  ದೆಹಲಿಯ ಸಾಫ಼್ಟ್‌ವೇರ್ ಕಂಪನಿಯೊಂದರಲ್ಲಿ ಕೆಲಸದಲ್ಲಿರುವ ನನ್ನ ಮಗನ ಹತ್ತಿರ ಅಂದುಕೊಂಡಾಗಲೆಲ್ಲ ನನ್ನವಳು ಹೊರಟುನಿಂತುಬಿಡುತ್ತಿದ್ದಳು.  ಹೋದಾಗಲೆಲ್ಲ ಹತ್ತು ಹದಿನೈದು ದಿನಗಳವಾಸ್ತವ್ಯ.  ಮೊನ್ನೆ ಹೊರಟುನಿಂತಾಗಲೂ ಅಷ್ಟೆ, ನಾನೂ ಅವಳ ಜೊತೆ ಹೊರಡಬೇಕೆಂದು ಅವಳು ಹಂಬಲಿಸುತ್ತಿದ್ದರೂ, ಈ ಪ್ರಾಧ್ಯಾಪಕ ವೃತ್ತಿಯ ಜವಾಬ್ದಾರಿಗಳ ಜಂಜಾಟದಿಂದಾಗಿ ಸಾಧ್ಯವಾಗುತ್ತಿರಲಿಲ್ಲ.  ಕಾಲಕಾಲಕ್ಕೆ ಬದಲಾಗುವ ಆದ್ಯತೆಗಳ ಪರ್ವ ಎಂದರೆ ಇದೇ ಏನೋ!  ನನಗೆ ನನ್ನ ವೃತ್ತಿಯ ಒಲವು; ಇವಳಿಗೆ ಮಗನ ವ್ಯಾಮೋಹ.  ಕಣ್ಣು ಮುಚ್ಚಿ ತೆರೆಯುವದರಲ್ಲಿ ಎಂತೆಂತಹ ಬದಲಾವಣೆಗಳು ನಮಗರಿವಿಲ್ಲದೆ ಘಟಿಸಿಬಿಡುತ್ತವೆ.  ಬದಲಾವಣೆಗೆ ಬಗ್ಗಿಕೊಳ್ಳುವಗುಣ ಮೈಗೊಡಿಸಿಕೊಳ್ಳುದಿದ್ದರೆ ಒಂಟಿತನವೇ ಶಾಪವಾಗಿ ಪರಿಣಮಿಸಿಬಿಡುವ ಅಪಾಯವಿರುತ್ತದೆ.  ಹಾಗಾಗಲು ಬಿಡಬಾರದು.  ಎದುರಾಗುವ ಪ್ರತಿ ಸನ್ನಿವೇಶಗಳು ನನ್ನದೇ ಸೃಷ್ಟಿ ಎಂಬ ಭಾವನೆ ಬೆಳಸಿಕೊಂಡರೆ ಸಮಚಿತ್ತ ಪ್ರಬಲಗೊಳ್ಳುತ್ತದೆ.  ಬೆಳೆಗ್ಗೆ ಅರ್ಧಗಂಟೆ ಮನೆಗೆಲಸದ ಹುಡುಗಿ ಬಂದುಹೋದ ಮೇಲೆ ನನ್ನದೇ ಸಾಮ್ರಾಜ್ಯ!  ದೆಹಲಿಯಲ್ಲಿ ನಡೆದ ಕನ್ನಡ ವಿಶ್ವಸಾಹಿತ್ಯಸಮ್ಮೇಳನಕ್ಕೆ ಇವಳನ್ನೂ ಕರೆದುಕೊಂಡು ಕಳೆದವರ್ಷ ಹೋಗಿದ್ದೆನಾದರೂ, ನಾನು ಅವಳು ಒಟ್ಟಿಗೆ ತಿರುಗಾಡಿದ್ದು ತೀರಾ ಕಡಿಮೆ.  ನಾನು ಬೆಳಗಾಗಿದ್ದು ಸಮ್ಮೇಳನದ ಕಾರ್ಯಕ್ರಮಗಳಿಗೆ ಹೊರಟರೆ ಎಲ್ಲ ಮುಗಿದು ಮನೆಗೆ ಬರುತ್ತಿದ್ದುದೆ ರಾತ್ರಿ.  ನನ್ನೊಂದಿಗೆ ಸಮ್ಮೇಳನದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುಲು ಅವಳಲ್ಲಿ ಅಂತಹ ಸಾಹಿತ್ಯಾಸಕ್ತಿ ಏನೂ ಇಲ್ಲ.  ಒತ್ತಾಯದಿಂದ  ಕರೆದುಕೊಂಡು ಕಾರ್ಯಕ್ರಮಕ್ಕೆ ಹೋದರೆ ಮುಗ್ಗಲು ಮುಳ್ಳು ಚುಚ್ಚಿದ ಅನುಭವ ನೆನೆದು ಸುಮ್ಮನಾಗಿ ಬಿಡುತ್ತಿದ್ದೆ.  ಎಫ಼್‌ಎಂ ನಲ್ಲಿ ಕಾಕತಾಳೀಯವೋ ಎಂಬಂತೆ ಗಗನವೂ ಎಲ್ಲೋ......  ಭೂಮಿಯು ಎಲ್ಲೋ...... ಒಂದೂ ಅರಿಯೇ.... ನಾ......ತೇಲಿ ಬರುತ್ತಿದ್ದಂತೆ ತುಟಿಯಂಚಲಿ ಕಿರುನಗೆ ಮೂಡಿ ತಲೆ ಕೊಡವಿಕೊಂಡೆ.

ಬದುಕಿನ ಏಕತಾನತೆ ಒಮ್ಮೊಮ್ಮೆ ಜಿಡ್ಡುಗಟ್ಟಿದ ಅಂಟುಜಾಡ್ಯದಂತೆ ಹೇವರಿಕೆ ಹುಟ್ಟಿಸುತ್ತದೆ ಬದಲಾವಣೆ ಬಯಸಿದರೂ ಈಗ ಯಾವ ಬದಲಾವಣೆ ಸಾಧ್ಯವಿಲ್ಲವೆಂಬ ಕಟುವಾಸ್ತವ ನನಗೆ ತಿಳಿದಿತ್ತು.  ನಿವೃತ್ತಿಗೆ ಮುನ್ನ ಇನ್ನೂ ನಾಲ್ಕು ವರ್ಷಸೇವೆಸಲ್ಲಿಸಲು ಅವಕಾಶ ಅಷ್ಟೆ.  ಆಬ್ಬಬ್ಬಾ ಎಂದರೆ ನನ್ನ ಸೇವಾವಧಿ, ಹಿರಿತನ ಪರಿಗಣಿಸಿ ನನ್ನನ್ನು ಉಪಕುಲಪತಿ ಸ್ಥಾನಕ್ಕೆ ನೇಮಕ ಮಾಡಬಹುದು.  ನನಗೆ ಆ ಪಟ್ಟಬೇಕೆಂದು ಹಲ್ಲು ಗಿಂಜುತ್ತ ಬಯೋಡಾಟ ಹಿಡಿದುಕೊಂಡು ಯಾವರಾಜಕಾರಣಿಯ ಮುಂದೆಯೂ ಕೈಯೊಡ್ಡಿ ನಿಲ್ಲಲು ನನ್ನ ಅಹಂ ಅಡ್ಡಬರುತ್ತಿತ್ತು.  ಬಂದರೆ ತಾನಾಗಿಯೇ ಬರಲಿ ಇಲ್ಲದಿದ್ದರೆ ಆಕಾಶಕಳಚಿ ಬೀಳುವಂತದ್ದೇನೂ ಇಲ್ಲ ಎಂಬ ಧೃಡ ನಿರ್ಣಯಕ್ಕೆ ಜೋತುಬಿದ್ದು ನಿರುಮ್ಮಳನಾಗಿದ್ದೆ.  
ಯಾರು ಏನು ಮಾಡುವರೋ ನನಗೇನು  ಕೇಡುಮಾಡುವರೋ 
ಸತ್ಯದ ಹಾದಿಯಲಿರುನಾಗ  ಧರ್ಮವೆ ರಕ್ಷಿಸುತಿರುವಾಗ ಈ ನಾಡಿಗೆ ನಾಡೇಹಿಂದಿರುವಾಗ  
ಕನ್ನಡ ನನ್ನುಸಿರಾಗಿರುವಾಗ...... ಕಿವಿಗಪ್ಪಳಿಸುತ್ತಿದ್ದಂತೆ ನನ್ನಲ್ಲಿನ ಸಮಚಿತ್ತ ಪ್ರಬಲವಾಯಿತು. 

ನನ್ನೊಂದಿಗೆ ಆತ್ಮೀಯತೆಯಿಂದ ಇರುವ ನನ್ನ ಸಹೋದ್ಯೋಗಿ ಪ್ರೊಫ಼ೆಸರ್ ಈಶ್ವರ್‌ಗೆ ಫ಼ೋನಾಯಿಸಿ ಈಸಂಜೆ ಇಲ್ಲೇ ಕಳಿಯೋಣ ಬಂದುಬಿಡು ಅಂತ ಕರೆಯಲೆ ಎಂದು ಯೋಚಿಸಿ ಯಾಕೋ ಬೇಡವೆನಿಸಿ ಸುಮ್ಮನಾಗಿಬಿಟ್ಟೆ.  ಯಾಕೆ? ಹೇಗೆ ? ಗೊತ್ತಿಲ್ಲ.  ಕೆಲ ನಿರ್ಧಾರಗಳ ಸರಿತಪ್ಪುಗಳ ತಾಕಲಾಟ ಪ್ರಶ್ನಾತೀತ.  ಕೆಲವು ಪ್ರಶ್ನೆಗಳಿಗೆ ಉತ್ತರಗಳಿರುವದಿಲ್ಲ.  ಇದ್ದರೂ ಹುಡುಕುವ ಗೋಜಿಗೆ ಹೋಗಿ ತಲೆಕೆಡಸಿಕೊಳ್ಳಬಾರದು.

ನಾನು ಸಂಜೆ ಇಷ್ಟಪಡುವ ನನ್ನ ಮಾಸ್ಟರ್ ಬೆಡ್‌ರೂಂಗೆ ಹೊಂದಿಕೊಂಡಿರುವ ಬಾಲ್ಕನಿ.  ಸ್ಕಾಚ್‌ವಿಸ್ಕಿಗೆ ಹದವಾಗಿ ಅರ್ಧಸೋಡ ಅರ್ಧನೀರು ಬೆರೆಸಿ ಎರಡು ಐಸ್‌ಕ್ಯೂಬ್ ತೇಲಿಬಿಟ್ಟು ಮೊದಲ ಸಿಪ್ ಹೀರಿದೆ.  ಒಂಟಿತನ ಸುಖವಾಗಿ ಅನುಭವಿಸೋದು ಒಂದು ಕಲೆ.  ಬದುಕಿನಲ್ಲಾದ ನಾನಾ ತಿರುವುಗಳ ಯೋಚನೆ ಅಪ್ಪಳಿಸಿ ಅಪ್ಪಳಿಸಿ ನನ್ನ ಬಾಲ್ಯದ ದಿನಗಳತ್ತ ಕರೆದೊಯ್ದಿತ್ತು.  
ಹಕ್ಕಿಯು ಹಾರುತಿದೆ ದೂರಕೆ ಹಕ್ಕಿಯು ಹಾರುತಿದೆ 
ಹಗಲಿರುಳೆನ್ನದೆ ಕಾಲದ ಹಕ್ಕಿಯು ಹಾರುತಿದೆ......
ಅದೇ ಓಘ.....! ನಾನಂದುಕೊಳ್ಳುತ್ತಿರುವುದು ಎಫ಼್.ಎಂ. ನಲ್ಲಿ ಬರುತ್ತಿದೆಯೋ! ಅಥವಾ ಎಫ಼್. ಎಂ. ನ ತಾಳಕ್ಕೆ ನನ್ನ ಮನಸ್ಸು ಕುಣಿಯುತ್ತಿದೆಯೋ!   ಇದ್ದರೂ ಇರಬಹುದು.  ಯಾವುದೊ ಒಂದು ಅಂತೂ ಸುಖಾನುಭವಗಳ ನೆನಪಿನ ಸರಮಾಲೆ.  

ಬಾಲ್ಯದ ನೆನಪುಗಳೇ ಹಾಗೆ ......... ವಾಸ್ತವ ಮರೆಸಿ ಹುಡುಗಾಟದ ಆ ದಿನಗಳ ಮೆಲಕು ಮುದ ನೀಡಿ ಜೀಕುವ ಮನಸ್ಸು ಜೋಕಾಲಿಯಾಡುವ ಪರಿಯೇ ಹಾಗೆ......!  ಹಿಂದೊಮ್ಮೆ ಮುಂದೊಮ್ಮೆ ಹಸಿ ಹಸಿರು ಭಾವ ಜೀಕಿದಾಗ ಸುಂಯ್‌ಗುಡುವ ಗಾಳಿಯಲ್ಲಿ ಅದೆಂಥದೋ ಕಂಪು ತಂಪು ಉಸಿರು ಬಿಗಿದು ಸುಖಿಸುವ ತವಕ.  

ಹುರಿದ ಅವಲಕ್ಕಿ ಗೋಡಂಬಿಗಳ ಮೆಲಕುತ್ತ ಖಾಲಿಯಾದ ಗ್ಲಾಸಿಗೆ ಮತ್ತೊಂದು ಪೆಗ್‌ಸುರಿದು ಅದೇ ಹದವಾದ ಮಿಶ್ರಣದೊಂದಿಗೆ ಬಾಲ್ಕನಿಯ ಗೋಡೆಗೆ ಆತುನಿಂತು ಒಮ್ಮೆ ಆಕಾಶದತ್ತ ನೋಡಿದೆ.  ನಕ್ಷತ್ರಗಳಿಂದ ತುಂಬಿದ ಆಕಾಶದಲ್ಲಿ ಚಂದ್ರನಿರಲಿಲ್ಲ.  ನಾವಿಕನಿಲ್ಲದ ದೋಣಿಯಲ್ಲಿ ನಕ್ಷತ್ರಗಳು ತೇಲುತ್ತಿರುವಂತೆ ಭಾಸವಾಯಿತು.

ಕುಚುಕು ಕುಚುಕು ಕುಚುಕು ನೀನು ಚಡ್ಡಿದೋಸ್ತಿಕಣೋ ಕುಚುಕು...... ... ಅಲೆ‌ಅಲೆಯಾಗಿ ಕಚಗುಳಿಯಿಟ್ಟಿತು.

ಚಿನ್ನಿಕೋಲು ಆಟದಲ್ಲಿ ಎಡಗಣ್ಣು ಹುಬ್ಬಿನ ಮೇಲೆ ಬಿದ್ದ ಏಟಿನ ಕಲೆಯನ್ನೊಮ್ಮೆ ಸವರಿಕೊಂಡೆ.  ಸುರಿಯುತ್ತಿದ್ದ ರಕ್ತ ಒರೆಸಿಕೊಳ್ಳುತ್ತ, ಇದಕ್ಕೆಲ್ಲ ಕಾರಣನಾದ ರೊಡ್ಡಗೈಕಾಕ್ಯಾನನ್ನು ಬೆನ್ನಟ್ಟಿದ್ದು ... .... ಅವನು ನನ್ನ ಕೈಗೆ ಸಿಗದೆ ಪರಾರಿಯಾಗಿದ್ದು.  ನಾಲ್ಕುದಿನ ಇಬ್ಬರೂಚಾಳಿಠೂ..!  ಅಂತ ಮುನಿಸಿಕೊಂಡು ಮಾತು ಬಿಟ್ಟಿದ್ದು ಮರೆಯಲು ಸಾಧ್ಯವಿಲ್ಲ.  ಆಗಷ್ಟೆ ಎರಡನೆಕ್ಲಾಸ್ ಪಾಸಾಗಿ ಮೂರನೆ ಕ್ಲಾಸಿಗೆ ತೇರ್ಗಡೆಯಾದಾಗ ನನ್ನದೊಂದು ದೊಡ್ಡಗೆಳೆಯರ ದಂಡೆ ನಿರ್ಮಾಣವಾಗಿತ್ತು.  ರೊಡ್ಡಗೈಕಾಕ್ಯಾ, ವಾಜಿ, ಸೊಟ್ಟಗಾಲ ಸೀನ್ಯಾ, ಜೋಯ್ಯರಶ್ರೀಪ್ಯಾ, ಕಿರಾಣಿ‌ಅಂಗಡಿ ಬಸ್ಯಾ, ಪೂಜಾರ ರವ್ಯಾ, ಸುಣಗಾರ ಎಲ್ಲ್ಯಾ, ಹಿಂದಿನ ಓಣಿಶ್ರೀಕ್ಯಾ, ಕುಂಬಾರ ಓಣಿ‌ಅಪ್ಪ್ಯಾ, ಕಲಾಲರ ಶಿವ್ಯಾ, ಸಿಂಪಿಗೀರ ರಾಜು, ಗಿರಣಿ ವಿಜ್ಯಾ, ಗುಂಡಿಭಾವಿ ಸಿದ್ದ್ಯಾ, ಕೆಂಪ್ಯಾ, ಗೋಪ್ಯಾ, ಒಬ್ಬರೇ ... ...! ಇಬ್ಬರೇ ... ...! ವಾನರ ಸೈನ್ಯದ ತುಕಡಿಯಂತಿತ್ತು.  ಟೋಳಿ ಕಟ್ಟಿಕೊಂಡು ಸ್ಕೂಲ ಪಕ್ಕದ ಗೌಡರ ಮಾವಿನ ತೋಟಕ್ಕೆ ನುಗ್ಗಿ ಕಾಯಿ ಕದಿಯಲು ಹೆಣೆಯುವ ಪ್ಲಾನ್... ... ಓಡಲಾರದೇ ಕೈಗೆ ಸಿಕ್ಕುಬಿದ್ದು ಗೌಡರ ಆಳಿನ ಕೈಯಲ್ಲಿ ಒದೆ ಬೀಳುತ್ತಿದ್ದುದು ಯಾವಾಗಲೂ ಸೊಟ್ಟಗಾಲು ಸೀನ್ಯಾನಿಗೆ.  ಕೈಚಳಕದಲ್ಲಿ ಸೀನ್ಯಾ ಯಾವಾಗಲೂ ಒಂದುಕೈ ಮುಂದೆ.  ಜಾತ್ರೆಯಲ್ಲಿ ಮಾರಾಟಕ್ಕಿಟ್ಟ ಆಟಕೆ ಸಾಮಾನುಗಳನ್ನು ಎಗರಿಸಿ ನನ್ನಕೈಗೆ ರವಾಸಿಸುತ್ತಿದ್ದ ಆ ಸ್ಪೀಡ್... ...! ಅದೇ ಸ್ಪೀಡ್‌ನಲ್ಲಿ ನಾನು ಅಲ್ಲಿಂದ ಮಾಯವಾಗುತ್ತಿದ್ದ ರೀತಿ ನೆನೆಸಿಕೊಳ್ಳೊದೇ ಒಂಥರಾ ಥ್ರಿಲ್.  ಕೈಲಿದ್ದ ಒಂದೆರಡು ರೂಪಾಯಿಗಳನ್ನು ಗುಳಗುಳಿ ಜೂಜೂ ಆಡಿ ಸೋತು ಬಸ್‌ಚಾರ್ಜ್‌ಗೂ ದುಡ್ಡಿಲ್ಲದೆ ಹಸಿದ ಹೊಟ್ಟೆಯಲ್ಲಿ ನಡೆದು ತಡರಾತ್ರಿ ಊರು ಸೇರಿದ  ಆ ದಿನಗಳು.  

ಆಡೂ ಆಟ ಆಡೂ ಹೇ ರಾಜಾ... ... ಹೇ ರಾಣಿ ... ... ಹೇ ಜೋಕರ ... ... ಎಫ಼್.ಎಂ. ನಲ್ಲಿ ಮತ್ತದೇ ಗುಂಗು.

ಬ್ರಿಟಿಷರ ಕಾಲದ ಎಲಿಜಾಬೆತ್‌ರಾಣಿ ಮುಖವಿರುವ ಒಂದೆರಡು ನಾಣ್ಯಗಳನ್ನು ನನ್ನಜ್ಜನ ಕಪಾಟಿನಿಂದ ಎಗರಿಸಿದ್ದೆ.  ಅವು ಚಲಾವಣೆಯಲ್ಲಿಲ್ಲದ ನಾಣ್ಯಗಳೆಂದು ನನಗೆ ಗೊತ್ತಿತ್ತು.  ಶಾಲೆ ಬಿಟ್ಟನಂತರ ಹೊಸಪೇಟೆ ಬೀದಿಯ ಮೂಲಕವೇ ನಾವು ಮನೆ ಸೇರಿತ್ತಿದ್ದುದು.  ಅದೊಂದು ದಿನ ಹೀಗೆ ಶಾಲೆಬಿಟ್ಟನಂತರ ನಡೆದುಕೊಂಡು ಬರುತ್ತಿದ್ದಾಗ ಅರಳಿಕಟ್ಟೆಯ ಕೆಳಗೆ ಯಾವಾಗಲೂ ಒಬ್ಬ ಹಣ್ಣು ಹಣ್ಣು ಮುದುಕಿ ಬಜ್ಜಿ ಮಿರ್ಚಿ ಕರಿದು ಮಾರುತ್ತಿದ್ದ ಆ ಜಾಗದ ಹತ್ತಿರ ಬರುತ್ತಿದ್ದಂತೆ ಸೊಟ್ಟಸೀನ್ಯಾನ ಕೈಯಲ್ಲಿ ಆ ಹಳೆಯ ನಾಣ್ಯಗಳನ್ನು ಕೊಟ್ಟು ಬಜ್ಜಿ ಮಿರ್ಚಿ ಖರೀದಿಸಲು ಹೇಳಿದೆ.  ಪೊಟ್ಟಣ ರೆಡಿಯಾದ ಕೂಡಲೇ ನನ್ನ ಕೈಗೆ ಮತ್ತು ರೊಡ್ಡಗೈ ಕಾಕ್ಯಾನ ಕೈಗೆ ಕೊಡಬೇಕೆಂದು ತಾಕೀತು ಮಾಡಿದೆ.  ಪೊಟ್ಟಣ ಸಿಕ್ಕಿದ್ದೇತಡ ನಾನು ಮತ್ತು ರೊಡ್ಡಗೈ ಕಾಕ್ಯಾ ನಿಧಾನವಾಗಿ ಅಲ್ಲಿಂದ ಹೊರಡುತ್ತ ನಾಣ್ಯವನ್ನು ಕೊಡುವಂತೆ ಸಂಜ್ಞಮಾಡಿದೆ.  ನಾಣ್ಯಗಳನ್ನು ಮುದುಕಿಯ ಕೈಗೆ ಕೊಟ್ಟು ಸ್ವಲ್ಪ ಜೋರಾಗಿಯೇ ಸೊಟ್ಟಗಾಲು ತಿರುವುತ್ತ ನಡೆದು ಬರುತ್ತಿದ್ದ.  ನನ್ನ ಬಂದು ಕಣ್ಣು ಆಗಾಗ ಆ ಮುದುಕಿಯ ಪ್ರತಿಕ್ರಿಯೆಗೆ ತವಕಿಸುತ್ತಿತ್ತು.  ಎರಡೆರಡು ಬಾರಿ ಕಣ್ಣುತಿಕ್ಕಿಕೊಂಡು ತಿರುಗಿಸಿ ತಿರುಗಿಸಿ ನಾಣ್ಯ ನೋಡಿದ ಮುದುಕಿ ಏಕಾ‌ಏಕೀ ಎದ್ದುನಿಂತಳು.  ಅಪಾಯ ಸೂಚನೆ ಆಗಲೆ ನನಗೆ ದೊರಕಿತ್ತು.  ನಾನು ಹಾಗು ರೊಡ್ಡಗೈ ಕಾಕ್ಯಾ‌ಓಡಲು ಶುರುವಿಟ್ಟುಕೊಂಡೆವು.  ನಾವ್ಯಾಕೆ ಓಡುತ್ತಿದ್ದೇವೆಂದು ತಿಳಿಯದೆ ಸೀನ್ಯಾ ಆಚೀಚೆ ನೋಡಿದ.  ಏರುಗಚ್ಚಿ ಹಾಕಿನಿಂತ ಮುದುಕಿ ಲೇ...... ಸೊಟ್ಟ...... ಬಾಡುಕೋ....... ಸವಕಲು ಆಣೆ ಕೊಟ್ಟು ಮೋಸ ಮಾಡ್ತಿಯೇನ್ಲೇ? ಅಂತ ಅಂದವಳೆ ಸೀನ್ಯಾನನ್ನು ಅಟ್ಟಿಸಿಕೊಂಡು ಬಂದಳು.  ಇದ್ದುದರಲ್ಲೆ ಸ್ವಲ್ಪ ಜೋರಾಗಿ ಓಡಿದ ಸೀನ್ಯಾ ಮುದುಕಿಯ ಕೈಗೆ ಸಿಗದೆ ನಾವು ಕಾಯುತ್ತಿದ್ದ ನಮ್ಮ ಓಣಿಯ ವೆಂಕಟೇಶ ದೇವರ ಗುಡಿಯ ಕಟ್ಟೆಗೆ ಬಂದ.  ಅವನಿಗೊಂದು ಶಬ್ಬಾಸಗಿರಿಕೊಟ್ಟು, ಬಜ್ಜಿ ಮಿರ್ಚಿ ತಿಂದು ಚಣ್ಣಕ್ಕೆ ಕೈ ಒರೆಸಿಕೊಂಡು ಏನೂ ನಡೆದೆ ಇಲ್ಲವೆನೋ ಎಂಬಂತೆ ಮನೆ ಸೇರಿಕೊಂಡೆವು.  ಆಮೇಲೆ ಸುಮಾರು ಹತ್ತುಹದಿನೈದು ದಿನಗಳಕಾಲ ಶಾಲೆಗೆ ಹೋಗಿಬರಲು ಬೇರೆರಸ್ತೆ ಮೂಲಕ ಓಡಾಡುತ್ತಿದ್ದೆವು.

ನೋಡಿ ...... ಸ್ವಾಮಿ ನಾವಿರೋದೇ ಹೀಗೇ ...... ಮಿಂಚಿನ ಓಟದ ಶಂಕರ್‌ನಾಗ್ ನೆನಪಿಗೆ ಬಂದ.
ಮೂರನೇ ಪೆಗ್ ನಿಧಾನವಾಗಿ ಮುಗಿಸುತ್ತ ಸಮಯ ಸರಿದದ್ದೆ ಗೊತ್ತಾಗಲಿಲ್ಲ.  ಗೆಳೆಯರ ಗುಂಪಿನ ನಾನಾ ಚೇಷ್ಟೆಗಳು ಮನದ ಪುಟದಲ್ಲಿ ತೆರೆಯಲಾರಂಭಿಸಿದ್ದವು.  ಬೇಸಿಗೆಯ ರಜೆ ಬಂತೆಂದರೆ ಸಾಕು......... ಒಣಗಿ ಬಿರುಕುಬಿಟ್ಟ ಕೆರೆಯಂಗಳವೇ ನಮ್ಮ ಕ್ರಿಕೆಟ್ ಆಟದ ಮೈದಾನವಾಗುತ್ತಿತ್ತು. ಮಳೆಗಾಲದಲ್ಲಿ ಕೆರೆ ತುಂಬಿದಾಗ ಈಜು ಹೊಡೆಯಲು ರೊಡ್ಡಗೈಕಾಕ್ಯಾ, ಅಪ್ಪ್ಯಾ, ಶ್ರೀಕ್ಯಾ, ವಾಜಿ, ಸೀನ್ಯಾ, ಶ್ರೀಪ್ಯಾ ಎಲ್ಲರೂ ಹುರುಪಿಗೆದ್ದುಬಿಡುತ್ತಿದ್ದರು.  ನನಗೆ ಈಜು ಬಾರದ ಕಾರಣ ಕೆರೆಯ ದಂಡೆಯ ಮೇಲೆ ಕುಳಿತು ಆನಂದಿಸುತ್ತಿದ್ದೆ.  ಹೀಗೆ ಒಂದುದಿನ ಇವರೆಲ್ಲ ಈಜುತ್ತಿದ್ದಾಗ ಕೆರೆಕಾಯುವ ಮುದುಕ ದಂಡೆಯ ಮೇಲಿಟ್ಟಿದ್ದ ಎಲ್ಲ ಬಟ್ಟೆಗಳನ್ನು ತನ್ನ ವಶಕ್ಕೆ ತೆಗೆದುಕೊಂಡು ಕೋಲು ಹಿಡಿದುಕೊಂಡು ಈಜುತ್ತಿದ್ದ ಎಲ್ಲರನ್ನು ಗದರಿಸಿ ಓಡಿಸತೊಡಗಿದ.  ಊರಿಗಿದ್ದ ಒಂದೇ ಒಂದು ಬಳಸುನೀರಿನ ಕೆರೆಯಲ್ಲಿ ಈಜುವದನ್ನು, ಬಟ್ಟೆ ಒಗೆಯುವದನ್ನು, ದನಗಳ ಮೈ ತೊಳೆಯುವದು ಮುಂತಾದ ಚಟುವಟಿಕೆಗಳನ್ನು ಊರಪಂಚಾಯಿತಿ ನಿಷೇಧಿಸಿ ಕೆರೆಕಾಯುವ ಈ ಮುದುಕನನ್ನು ನೇಮಿಸಿದ್ದರೂ ನನ್ನ ಗೆಳೆಯರ ಬಂಡಧೈರ್ಯ ಮೆಚ್ಚಲೇಬೇಕು.  ಅಟ್ಟಿಸಿಕೊಂಡು ಬರುತ್ತಿದ್ದ ಮುದುಕನ ಹತ್ತಿರ ತಮ್ಮ ಬಟ್ಟೆ ವಾಪಸ್ಸು ಕೇಳುವದಿರಲಿ, ತಪ್ಪಿಸಿಕೊಂಡು ಮನೆ ಸೇರಿದರೆ ಸಾಕೆಂದು ಒಂದೇ‌ಉಸುರಿಗೆ ನನ್ನ ಗೆಳೆಯರೆಲ್ಲರೂ ತಮ್ಮ ತಮ್ಮ ಮನೆಗೆ ಬೆತ್ತಲೆ ಓಟ ಮಾಡಿದ್ದರು.  ಊರ ಜನರಿಗೆ ಪುಗಸಟ್ಟೆ ಮನರಂಜನೆ ದೊರಕಿಸಿಕೊಟ್ಟ ಭಾಗ್ಯ ನನ್ನ ಗೆಳೆಯರಿಗೆ ಸಂದಿತ್ತು.

ಜಲಲ ಜಲಲ ಜಲಧಾರೆ...... ಜಲಲ ಜಲಲ ಜಲಧಾರೆ...... ನಮ್ಮ ತುಂಟಾಟಗಳು ಇಷ್ಟಕ್ಕೆ ಸೀಮಿತವಾಗಿದ್ದರೆ ಚೆನ್ನಾಗಿತ್ತು.  ನಮಗಿದ್ದ ಇನ್ನೂ ಒಂದು ಚಪಲ ಸಿನಿಮಾ ನೋಡುವದು.  ನಮ್ಮೂರ ಟೆಂಟ್‌ನಲ್ಲಿ ಹಿಂದುಗಡೆಯಿಂದ ಕಳ್ಳತನದಲ್ಲಿ ನುಗ್ಗಿ ಕೆಲವೊಮ್ಮೆ ಸಿನಿಮಾ ನೋಡುತ್ತಿದ್ದೆವು.  

ಕಪ್ಪು ಬಿಳುಪು ಚಿತ್ರಗಳ ಪರ್ವಕಾಲದ ಅಂದಿನ ಚಿತ್ರಗಳ ನಾಯಕರೆ ನಮ್ಮ ಜೀವನದ ಸ್ಪೂರ್ತಿಗಳಾಗಿದ್ದರು. ಅವರ ಹಾವಭಾವ ನಟನೆಗಳನ್ನು  ಮೈಗೂಡಿಸಿಕೊಂಡು ಒಮ್ಮೊಮ್ಮೆ ಹುಚ್ಚು ಆವೇಶಕ್ಕೆ ಒಳಗಾಗಿ ಫ಼ಜೀತಿ ಪಟ್ಟಿದ್ದು ಇದೆ.  ಒಮ್ಮೆ ಸಂಪತ್ತಿಗೆ ಸವಾಲ್ ಚಿತ್ರವನ್ನು ನೋಡಿ ನಾಯಕನಟ ಖಳನಾಯಕನ ಕೈಯಲ್ಲಿ ಚಾವಟಿ ಏಟು ತಿನ್ನುವ ಆ ದೃಶ್ಯನಮ್ಮ ಮನಸ್ಸಿನಲ್ಲಿ ಅಚ್ಚೊತ್ತಿತ್ತು.  ಒಂದು ದಿನ ಮಧ್ಯಾಹ್ನ ನಮ್ಮ ದನದ ಕೊಟ್ಟಿಗೆಯಲ್ಲಿ ಸೀನ್ಯಾನನ್ನು ದನಗಳನ್ನು ಕಟ್ಟುವ ಹಗ್ಗದಿಂದ ಕಟ್ಟಿ ಬಾರುಕೋಲಿನಿಂದ ಒಟ್ಟೊಬ್ಬರಾಗಿ ಹೊಡೆಯಲು ಶುರುವಿಟ್ಟುಕೊಂಡೆವು.  ಒಂದೊಂದು ಏಟಿಗೂ ಅವನು ನೋವಿನಿಂದ ಕಿರುಚಿಕೊಂಡಾಗ ಖಳನಾಯಕ ನಂತೆ ನಾವು ಗಹಗಹಿಸಿ ನಕ್ಕು ನಟಿಸುವ ಚಪಲ ತೀರಿಸಿಕೊಂಡಿದ್ದೆವು.  ಏನೂ ತಪ್ಪು ಮಾಡದ ಸೀನ್ಯಾ ನಾಯಕನ ಪಾತ್ರದಲ್ಲಿ ನಿಂತು ನಮ್ಮಿಂದ ಹೊಡೆಸಿಕೊಂಡಿದ್ದ ಯಜ್ಞಪಶು ಮಾವಾಗಲೂ ಮೇಕೆನೆ...! ಹುಲಿವಾಗಲು ಸಾಧ್ಯವೇ?  ನಮ್ಮ ನಟನೆಯ ಹುಚ್ಚಿನಲ್ಲಿ ಘಟನೆಯ ಗಂಭೀರತೆಯನ್ನು ಯೋಚಿಸುವ ಗೊಡವೆಗೆ ಹೋಗದೆ ಮಾಸಲಾರದ ಮಾನಸಿಕ ಆಘಾತವನ್ನು ನಾವೆಲ್ಲರೂ ಅವನಿಗೆ ಕೊಡಮಾಡಿದ್ದೆವು.  ಮನೆಯಲ್ಲಿನ ಹಿರಿಯರಿಗೆಲ್ಲ ಈ ವಿಷಯ ಗೊತ್ತಾಗಿ ಛೀಮಾರಿಹಾಕಿಸಿಕೊಂಡಿದ್ದು ಆಯ್ತು 
ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆ
ಕೂಗಿದರೂ ಧ್ವನಿ ಕೇಳಲಿಲ್ಲವೇ ....... ನರಹರಿಯೇ
ಬಾಸುಂಡೆ ಏಟುತಿಂದ ಕನಕದಾಸರಿಗೆ ಶ್ರೀಕೃಷ್ಣನ ದರುಶನ ಭಾಗ್ಯ ದೊರೆತಿತ್ತಂತೆ.  ಬಾಸುಂಡೆ ಏಟುತಿಂದ ಸೀನ್ಯಾ ಉಪ್ಪಿನ ಶಾಖಕೊಡಿಸಿಕೊಳ್ಳುತ್ತ ನಾಲ್ಕುದಿನ ಮಲಗಿದ್ದೆ ಬಂತು ಭಾಗ್ಯ....!

ಈ ನಮ್ಮ ಸಿನಿಮಾ ನೋಡುವ ಚಪಲ ಎಲ್ಲಿಗೆ ತಂದು ನಿಲ್ಲಿಸಿತಂದರೆ ಮುಂದಾಗುವ ರಾದ್ದಾಂತಗಳ ಊಹೆ ಮಾಡುವ ವಯಸ್ಸು ನಮ್ಮದಾಗಿರಲಿಲ್ಲ.  ನಮ್ಮ ಗುಂಪಿನ ಗೆಳೆಯ ಶ್ರೀಕ್ಯಾನ ಚಿಕ್ಕಪ್ಪನೆ ಟೆಂಟಿನ ಮಾಲಿಕನಾಗಿದ್ದ ಹಾಗೂ ನಾವೆಲ್ಲ ಅವರ ಚಿಕ್ಕಪ್ಪನ ಮನೆಗೆ ಹೋದಾಗಲೆಲ್ಲ ಹೊರಗಿನ ಒಂದು ಕೋಣೆಯನ್ನು ಸಿನೆಮ ಟೆಂಟಿಗೆ ಸಂಬಂಧಪಟ್ಟ ಕೆಲಸಗಳಿಗೆ ಉಪಯೋಗಿಸುತ್ತಿದ್ದರು.  ಅಲ್ಲಿ ಮ್ಯಾನೇಜರ್‌ಗಳ ಗೇಟ್‌ಕೀಪರ್‌ಗಳ, ಕಸದೊಡೆಯುವವರ ಹಾಗೂ ಪ್ರೊಜೆಕ್ಟರ್ ಆಪರೇಟರ್‌ಗಳು ಮಿಟಿಂಗುಗಳು ನಡೆಯುತ್ತಿದ್ದವು.  ಆಕೊಣೆಂii ಒಂದು ಬದಿಯಲ್ಲಿ ಟಿಕೇಟ್ ಬಂಡಲುಗಳನ್ನು ಸಂಗ್ರಹಿಸಿಡುವ ಕಬ್ಬಿಣದ ಟ್ರಂಕು ಕಾಗದಪತ್ರಗಳ ಫ಼ೈಲು ಇತ್ಯಾದಿಗಳನ್ನು ಇಟ್ಟಿರುತ್ತಿದ್ದರು.   ಆಯಾ ದಿನದಾಟಕ್ಕೆ ಬೇಕಾಗುವ ಟಿಕೇಟ್ ಬಂಡಲುಗಳನ್ನು ನನ್ನ ಗೆಳೆಯನ ಚಿಕ್ಕಪ್ಪ ಬುಕ್ಕಿಂಗ್ ಮ್ಯಾನೇಜರ್‌ಗೆ ಕೊಡುತ್ತಿದ್ದುದನ್ನು ನಾನು ಸಾಕಷ್ಟುಸಲ ನೋಡಿದ್ದೆ.  ಟಿಕೇಟ್ ಬಂಡಲ್ ಎಗರಿಸಿದರೆ ಅಂದುಕೊಂಡಾಗಲೆಲ್ಲ ಪುಗಸಟ್ಟೆ ಸಿನಿಮಾ ನೋಡಬಹುದೆಂಬ ಖತರ್ನಾಕ್ ಐಡಿಯಾ ಹೊಳದದ್ದೆ‌ಆಗ.   ಈ ಕೆಲಸಕ್ಕೆ ಶ್ರೀಕ್ಯಾ ಸರಿಯಾದ ವ್ಯಕ್ತಿ ಅಂತ ತೀರ್ಮಾನಿಸಿದ್ದೆ ರೊಡ್ಡಗೈಕಾಕ್ಯಾನಿಗೆ ಶ್ರೀಕ್ಯಾನನ್ನು ಈ ಕೆಲಸಕ್ಕೆ ಹುರುದುಂಬಿಸೊ ಕೆಲಸ ಕೊಟ್ಟು ಅವನತಲೆಗೆ ಹುಳಬಿಟ್ಟೆ.  ಅಚ್ಚುಕಟ್ಟಾಗಿ ಕೆಲಸ ನಿಭಾಯಿಸಿದ ಶ್ರೀಕ್ಯಾ, ಕಾಕ್ಯಾನ ಕೈಯಲ್ಲಿ ನಾಲ್ಕು ಟಿಕೇಟ್ ಬಂಡಲ್‌ಗಳನ್ನು ತಂದುಕೊಟ್ಟಾಗ ನಮ್ಮ ಆನಂದಕ್ಕೆ ಪಾರವೇ ಇರಲಿಲ್ಲ.  ನಾನು, ಕಾಕ್ಯಾ, ಶ್ರೀಕ್ಯಾಹಾಗು ಸೀನ್ಯಾ ಒಂದೊಂದು ಟಿಕೇಟ್ ಬಂಡಲನ್ನು ಇಟ್ಟುಕೊಳ್ಳುವದೆಂದು ನಿರ್ಣಯವಾಯಿತು.  

ತ್ರಿಮೂರ್ತಿರೂಪಾ ದತ್ತಾತ್ರೇಯ ತ್ರಿಗುಣಾತೀತ ದತ್ತಾತ್ರೇಯ ......... ಹಾಗೂ ರಾಮನ‌ಅವತಾರ ರಘುಕುಲ ಸೋಮನ ಅವತಾರ.......  ಮುಂತಾದ ಹಾಡುಗಳನ್ನು ಊರಿಗೆಲ್ಲ ಕೇಳುವಂತೆ ಸಂಜೆಯ ಆಟ ಶುರುವಾಗುವದಕ್ಕೆ ಮುಂಚೆ ಟೆಂಟಿನ ಮೈಕ್‌ನಲ್ಲಿ ಹಾಕುತ್ತಿದ್ದರು.  ನಾನು ಮತ್ತು ರೊಡ್ಡಗೈ ಕಾಕ್ಯಾ ಹಾಡು ಶುರುವಾಗುವದನ್ನೆ ಕೆರೆಯ ದಂಡೆಯ ದೊಡ್ಡಬೇವಿನಮರದ ಸಂಧಿಯಿಂದ ನೋಡುತ್ತ ನಿಂತಿದ್ದೆವು.  ಆಜಾಗದಿಂದ ಬಸ್‌ಸ್ಟಾಂಡ್ ಹಾಗು ಟೆಂಟನ್ನು ಸ್ಪಷ್ಟವಾಗಿನೋಡಬಹುದಾಗಿತ್ತು.  ಬಸ್‌ಸ್ಟಾಂಡ್‌ನಿಂದ ಬಸ್ಸಿಳಿದು ಹೊರಬರುತ್ತಿದ್ದ ಹಳ್ಳಿಜನರ ಹತ್ತಿರ ಸೀನ್ಯಾ ಏನೋ ಮಾತನಾಡುತ್ತಿರುವಂತೆ  ನಮಗೆ ಕಾಣುತ್ತಿತ್ತು. ಹಾಡು ಶುರುವಾದ ಮೇಲೆ ಬುಕಿಂಗ್‌ಕೌಂಟರ್ ತೆರೆಯುತ್ತಿದುದು ವಾಡಿಕೆ. ಹೇಗೂ ಇನ್ನೂ ಹಾಡು ಶುರುವಾಗಿಲ್ಲ.  ಹಾಡು ಶುರುವಾಗುವ ಹೊತ್ತಿಗೆ ಟೆಂಟ್ ಹತ್ತಿರ ನಾವೆಲ್ಲರೂ ಸೇರುವದೆಂದು ಮೊದಲೆ ಮಾತನಾಡಿಕೊಂಡಿದ್ದೆವು. ಟಿಕೆಟ್ ಕೊಳ್ಳುವ ಜನರು ಒಬ್ಬೊಬ್ಬರಾಗಿ ಒಳಹೋದನಂತರ ನಾವು ಅವರ ಜೊತೆ ಸೇರಿ ಒಳಹೋಗುವ ವ್ಯವಸ್ಥಿತ ಯೋಜನೆ ನಮ್ಮದಾಗಿತ್ತು.  ಆದರೆ ನನಗೆ ಮತ್ತು ಕಾಕ್ಯಾನ ಅರಿವಿಗೆ ಬರದ ವಿದ್ಯಮಾನಗಳು ಬಸ್‌ಸ್ಟಾಂಡ್‌ನ ಮುಂದೆ ಜರಗುತ್ತಿದ್ದವು.  

ಹಾಡು ಆರಂಭಕ್ಕೆ ಇನ್ನೂ ಸುಮಾರು ಹೊತ್ತು ಇತ್ತು.  ಅಷ್ಟರಲ್ಲಿ ಟೆಂಟ್‌ನ ಬುಕ್ಕಿಂಗ್ ಮ್ಯಾನೇಜರ ಸೀನ್ಯಾನನ್ನು ಬಸ್‌ಸ್ಟಾಂಡ್‌ನ ಹೊರಭಾಗದಲ್ಲಿ ತಡೆದುನಿಲ್ಲಿಸಿ ಏನೋ ಮಾತನಾಡುತ್ತಿದ್ದಂತೆ ಕಾಣುತ್ತಿತ್ತು.  ಒಂದೆರಡು ನಿಮಿಷಗಳಲ್ಲಿ ಸೀನ್ಯಾನನ್ನು ದರ ದರ ಎಳೆದುಕೊಂಡು ಮ್ಯಾನೇಜರ್ ಟೆಂಟ್‌ನತ್ತ ನಡೆಯತೊಡಗಿದ.  ಎಲ್ಲೋ ಎಡವಟ್ಟಾಗಿರಬೇಕೆಂದು ನಾನು ಕಾಕ್ಯಾ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡೆವು.  ಇಬ್ಬರಿಗೂ ಅಪಾಯದ ಗಂಟೆ ಒಮ್ಮೆಲೆ ಬಾರಿಸಿದಂತಾಗಿ ಮನೆಸೇರಿಕೊಳ್ಳುವದು ಉಳಿದಿರುವ ಒಂದೇ ಮಾರ್ಗವೆಂದು ತಿಳಿದು ಮನೆಯತ್ತ ಹೆಜ್ಜೆಹಾಕಿದೆವು.   

ಒಂದುತಾಸಿನ ನಂತರ ನಮ್ಮ ಮನೆಯ ಆಳು ಬಂದು ನಿಮ್ಮ ಗೆಳ್ಯಾನ್ನ ಸಿನಿಮಾದ ರೀಲು ಬಿಡೊ ರೂಂನ್ಯಾಗೆ ಕೂಡಿಹಾಕ್ಯಾರಂತ ಅಂತ ಹೇಳಿದ.  ನಾನು ಯಾರು? ಯಾಕ? ಏನಾತು? ಅಂತ ಬಡಬಡಿಸಿದೆ.  ಅದಕ್ಕವನು ಟಿಕೆಟ್‌ಬುಕ್ ಕದ್ದಾನಂತ, ಅದರೀ ..... ಎದುರುಮನಿ ಸೊಟ್ಟಸೀನಪ್ಪ,  ಹಳ್ಳಿಜನರಿಗೆ ಅರ್ಧರೇಟಿನಂಗ ಮರ್‍ಯಾನಂತ ಅಂತ ಹೇಳಿದ.

ಹಾಡು ಶುರುವಾಗುವದಕ್ಕೆ ಮುಂಚೆಯ ಟೆಂಟಿನತ್ತ ಜನ ಬರಲಾರಂಭಿಸಿದ್ದು ಟಿಕೆಟ್ ತೋರಿಸಿ ಒಳಗೆ ಹೋಗಲು ಕೇಳುತ್ತಿದ್ದರು.    ಕೌಂಟರ್ ಶುರುಮಾಡದ ಮ್ಯಾನೇಜರ್‌ಗೆ ಆಶ್ಚರ್ಯ ಉಂಟುಮಾಡಿತ್ತು.  ಹಳ್ಳಿಜನರನ್ನು ಕೇಳಲಾಗಿ, ಸೊಟ್ಟೆಗಾಲಿನ ಹುಡುಗನೊಬ್ಬ ನಮಗೆ ಈ ಟಿಕೇಟ್‌ನ್ನು ರಿಯಾಯಿತಿ ದರದಲ್ಲಿ ಕೊಟ್ಟಿದ್ದಾಗಿಯೂ ಹಾಗೂ ಟೆಂಟ್‌ನವರು ಹಬ್ಬದ ಪ್ರಯುಕ್ತ ವಿಶೇಷ ರಿಬೇಟ್ ಇಟ್ಟಿದ್ದಾರೆಂದು ಜನರನ್ನು ನಂಬಿಸಿ ಮಾರಾಟಮಾಡಿದ್ದ. ಕದ್ದ ಪುಗಸಟ್ಟೆ ಟಿಕೆಟ್‌ಗೆ ರಿಬೇಟ್ ಬೇರೆ ಕೇಡು.....!  ವ್ಯವಸ್ಥಿತವಾಗಿ ಹೆಣೆದ ಪ್ಲಾನೊಂದು ಸೀನ್ಯಾನ ದಡ್ಡತನದಿಂದಾಗಿ ಮಣ್ಣುಪಾಲಾಗಿತ್ತು.  

ಮುಂದುವಾಗುವ ವಿಚಾರಣೆ ಸುಳಿವು ಹಾಗೂ ಆದರಿಂದ ಪಾರಾಗುವ ನಿಟ್ಟಿನಲ್ಲಿ ಕ್ಷಿಪ್ರವಾಗಿ ಯೋಚಿಸಿ ಕಾಕ್ಯಾನ ಮನೆಗೆ ಓಡಿದೆ ನಡೆದಿರುವ ರಾದ್ದಾಂತವನ್ನು ಒಂದೇ ಉಸಿರಿಗೆ ಅವನಿಗೆ ಒದರಿದೆ.  ಟಿಕೇಟ್ ಬಂಡಲ್ ನಮ್ಮ ಹತ್ತಿರ ಇರುವದು ಸುರಕ್ಷಿತವಲ್ಲ ಮತ್ತು ಈ ಹಗರಣದಲ್ಲಿ ನಾವು ಶಾಮಿಲಾಗಿದ್ದೇವೆಂದು ಸೀನ್ಯಾ ಬಾಯಿಬಿಡುವದಕ್ಕೂ ಮೊದಲು ಶ್ರೀಕ್ಯಾನ ಕೈಗೆ ನಮ್ಮಲ್ಲಿದ್ದ ಟಿಕೆಟ್ ಬಂಡಲ್‌ಗಳನ್ನು ಏನೋ ಸಬೂಬು ಹೇಳಿ ವರ್ಗಾಯಿಸಿ ಸುಮ್ಮನಾಗಿಬಿಟ್ಟೆವು.  ಶ್ರೀಕ್ಯಾನಿಗೆ ಬಸ್‌ಸ್ಟಾಂಡ್ ಹಾಗೂ ಟೆಂಟ್‌ನಲ್ಲಿ ನಡೆದ ಸಂಗತಿಗಳು ಇನ್ನೂಗೊತ್ತಾಗಿರಲಿಲ್ಲ. ರಾತ್ರಿ ಒಂಬತ್ತರ ಸುಮಾರು ಸೀನ್ಯಾ, ಟೆಂಟ್‌ಮ್ಯಾನೇಜರ್, ಮಾಲಿಕರು, ಶ್ರೀಕ್ಯಾ, ಸೀನ್ಯಾ ಹಾಗೂ ಅವನ ಅಪ್ಪ ಎಲ್ಲರು ವಿಚಾರಣೆಗೆ ಹಾಜರಾಗಿ ನಮ್ಮಪ್ಪನ ಬರುವಿಗಾಗಿ ಮನೆಯ ಪಡಸಾಲೆಯಲ್ಲಿ ಸೇರಿದ್ದರು.  ಊರಿಗೆಲ್ಲ ಧರ್ಮನಿರ್ಣಯ ಹೇಳುವನಮ್ಮಪ್ಪನ ಮುಂದೆ ನಾವು ಅಪರಾಧಿಸ್ಥಾನದಲ್ಲಿ ನಿಂತು ವಿಚಾರಣೆ ಎದುರಿಸುವ ದೃಶ್ಯ ನೆನಪಿಕೊಂಡು ಒಂದುಕ್ಷಣ ಗಾಭರಿಯಾಯಿತು.  ನಾನು ಹಾಗೂ ಕಾಕ್ಯಾ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡೆವು.  ಸಂದೇಶ ಸ್ಪಷ್ಟವಾಗಿತ್ತು.  ಸೀನ್ಯಾ ಕೊಡುವ ಹೇಳಿಕೆಯಮೇಲೆ ನಮ್ಮಿಬ್ಬರ ಹಣೆಬರಹ ನಿಂತಿದೆಯೆಂದು.

ವಿಚಾರಣೆ ಆರಂಭವಾದಾಗ ನಮಗೆಲ್ಲ ದಿಗಿಲು ಎಲ್ಲಿ ಹೆಸರುಗಳು ಬಹಿರಂಗಗೊಂಡು ಮರ್ಯಾದೆ ಮೂರುಕಾಸಾಗುವ ಹೊತ್ತು ದೂರವಿಲ್ಲವೆಂದು ಬೆವತು ಹಸಿಯಾದ ಮುಖವನ್ನು ಕೈಯಿಂದ ಬರೆಸಿಕೊಳ್ಳುತ್ತ ಚಣ್ಣಕ್ಕ ತಿಕ್ಕಿಕೊಳ್ಳುತ್ತಿದ್ದೆವು.  ನಾವು ಮಾಡಿದ್ದ ಘನಂದಾರಿ ಕೆಲಸಕ್ಕೆ ಮರ್ಯಾದೆ ಬೇರೇ ಕೇಡು!  

ವಿಚಾರಣೆ ವೇಳೆ ಎಲ್ಲ ತಪ್ಪುಗಳನ್ನು ಸೊಟ್ಟಸೀನ್ಯಾ ತನ್ನಮೇಲೆ ಹಾಕಿಕೊಂಡು ಎಲ್ಲರ ಹತ್ತಿರ ತಾರಾಮಾರಾ ಬಯ್ಯಿಸಿಕೊಂಡ.  ನಮ್ಮ  ಹೆಸರುಗಳು ಹೊರಬರದ್ದರಿಂದ ಮನಸ್ಸು ನಿರಾಳವಾಗಿತ್ತು.  ಆದರೆ ಸೀನ್ಯಾ ನಮ್ಮಗಳ ಹೆದರಿಕೆಗೆ ನಮ್ಮ ಹೆಸರುಗಳನ್ನು ಬಾಯಿಬಿಡಲಿಲ್ಲವೋ?  ಅಥವಾ ಇನ್ನೇನಾದರೂ ಕಾರಣವಿದೆಯೋ?  ಎಂಬುದು ಅರ್ಥವಾಗಲಿಲ್ಲ.  ಮಾರನೆದಿನ ಶಾಲೆಗೆ ಹೊರಡುವ ಸಮಯದಲ್ಲಿ ನಾನು ಸೀನ್ಯಾನನ್ನು ಕೇಳಿದೆ, ನಮಗ ಹೆದರಿ ಎಲ್ಲಾ ತಪ್ಪು ನಿನ್ನಮ್ಯಾಲೆ ಹಕ್ಕೊಂಡಿ ಹೌದಲ್ಲೋ? ಅಂದೆ.  ಅದಕ್ಕ್‌ವನು ಸುಮ್ಮನೆ ನಕ್ಕು, ದೋಸ್ತಾ, ಅದಕಲ್ಲೋ......... ನಿಮ್ಮೆಲ್ಲಾರ ಹೆಸರು ಹೇಳಿದ್ರ ನಮ್ಮ ಗೆಳ್ತನ ಮೂರಾಬಟ್ಟಿ ಯಾಕ್ತಿತ್ತು.  ಅದ್ಯಾವ ದೊಡ್ಡ ವಿಷ್ಯಾ ಬಿಡೋ ಅಂದು ಬಿಟ್ಟಿದ್ದ.  ಅದಕ್ಕೆ ನಾನು, ಅಲ್ಲಲೇ, ಸೀನ್ಯಾ ನೀ ತಣ್ಣಗ ಇದ್ದಿದ್ರ ಯಾರಿಗೂ ಗೊತ್ತಿಲ್ಲದಂಗ ವರ್ಷಾನುಗಟ್ಟಲೆ ಪುಗಸಟ್ಟೆ ಸಿನೆಮಾ ನೋಡುತ್ತಿದ್ವಲ್ಲೋ.....! ಎಲ್ಲಾ ಹಾಳಮಾಡಿಬಿಟ್ಟೆಲ್ಲೊ. ಅಂದೆ.  ಅದಕ್ಕವನು ಚುಟ್ಟಾ ಸೇದಲಿಕ್ಕೆ ಸ್ವಲ್ಪ ರೊಕ್ಕಾ ಮಾಡಿಕೊಂಡ್ರಾತು ಅಂತ ಹಂಗ ಮಾಡ್ದೆ ಅಂದಿದ್ದ.  

ಚುಟ್ಟಾ ಸೇದುವ ಸೀನ್ಯಾನ ಹುಕಿಗೆ ನಮ್ಮ ಸಿನಿಮಾ ನೋಡುವ ಚಪಲಕ್ಕೆ ಕಲ್ಲುಬಿದ್ದ...... ಪೆಚ್ಚಾಗಿದ್ದ......  ಎಲ್ಲ ಈಗ ಸುಮಧುರ ನೆನಪುಗಳು.  ಗೆಳೆತನ ಮುರಿದು ಬೀಳ್ತದೆ ಅಂತ ಸುಳ್ಳು ಅಪಾದನೆಗಳನ್ನು ತನ್ನ ಮೇಲೆ ಹಾಕಿಕೊಂಡು ಗೆಳೆತನ ಉಳಿಸಿಕೊಂಡ ಅವನನ್ನು ನಾವು ಆಗ ಅರ್ಥ ಮಾಡಿಕೊಳ್ಳಲೇ‌ಇಲ್ಲ.  ಚಿಕ್ಕಂದಿನಲ್ಲಿ ಪೋಲಿಯೋ ಪೀಡಿತನಾಗಿ ಒಂದುಕಾಲು ಸ್ವಾಧೀನ ಕಳೆದುಕೊಂಡಿದ್ದ ಈ ಗೆಳೆಯ ಈಗ್ಗೆ ೪-೫ ವರ್ಷಗಳ ಕೆಳಗೆ ವಾಸಿಯಾಗದ ಯಾವದೋ ಕಾಯಿಲೆಯಿಂದ ತೀರಕೊಂಡ ವಿಚಾರ ತಿಳಿಯಿತು.  ಸುದ್ದಿ ತಿಳಿದಾಗ ಯಾವರೀತಿ ಪ್ರತಿಕ್ರಯಿಸಿಬೇಕೆಂದು ತಿಳಿಯದೆ ಮೌನಕ್ಕೆ ಶರಣಾಗಿದ್ದೆ.  ಕಾಲಚಕ್ರದ ಸುಳಿ ಒಬ್ಬೊಬ್ಬರ ಬದುಕಿನಲ್ಲಿ ಒಂದೊಂದು ತರಹ ಸುತ್ತುತ್ತಿತ್ತು.  ಒಬ್ಬ ಪ್ರೈಮರಿ ಸ್ಕೂಲ ಹೆಡ್‌ಮಾಸ್ಟರ್, ಇನ್ನೊಬ್ಬ ಇಂಜನಿಯರ್, ಮತ್ತೊಬ್ಬ ಮೆಡಿಕಲ್ ರೆಪ್ರಜೆಂಟೇಟಿವ್ ಆಗಿ ಬೇರೆಬೇರೆ ಊರುಗಳಿಗೆ ಹೊರಟುಹೋದರು.  ಇನ್ನು ಕೆಲವರು ಹೊಲಗದ್ದೆ, ಕಿರಾಣ ಅಂಗಡಿ, ದಲಾಲಿ ಅಂಗಡಿ, ಚಾ ಅಂಗಡಿ ಅಂತ ಊರಲ್ಲೇ ಉಳಿದರು.  ಮತ್ತೊಬ್ಬ ಗೆಳೆಯ ಬೆಳಗಾಗುವದರೊಳಗೆ ಕಾವಿತೊಟ್ಟು ರುದ್ರಾಕ್ಷಿಸರ ಕೈಯಲ್ಲಿ ಹಿಡಿದು ಓಂ ನಮಃ ಶಿವಾಯ ಮಂತ್ರ ಪಠಿಸುತ್ತ ಮಠಾಧಿಪತಿಯಾಗಿದ್ದ. ಬದುಕಿನಲ್ಲಿ ಶಿಸ್ತು ಅಳವಡಿಕೊಳ್ಳದ ಹಾಗೂ ಬದುಕನ್ನು ಸೀರಿಯಸ್ ಆಗಿ ತಗೆದುಕೊಳ್ಳದ ಒಬ್ಬನೆ ಒಬ್ಬ ಎಂದರೆ ಅವನು ಸೀನ್ಯಾ.  ಅರ್ಧಂಬರ್ಧ ಕಲಿತು ಊರಲ್ಲೆ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಅವನನ್ನು ತಿದ್ದಲು ನಾವು ಆಗಾಗ ಪ್ರಯತ್ನಿಸಿದ್ದೆವು.  ಬಲಿತಮರ ಬಗ್ಗಿತೇ?  ಧ್ಯೇಯಗಳನ್ನು ಇಟ್ಟುಕೊಳ್ಳದ ಗೊತ್ತುಗುರಿ‌ಇಲ್ಲದ ಅಡ್ನಾಡಿ ಜೀವನ ಅವನದಾಗಿತ್ತು.   ಆದರೆ ಮನಸ್ಸಿನ ಮೂಲೆಯಲ್ಲಿ ಎಲ್ಲೋ ಒಂದುಕಡೆ ಮರುಕವಿತ್ತು.  ಅಯ್ಯೋ ಸುಖದ ಬದುಕು ಕೊನೆಗೂ ನೋಡಲೇ ಇಲ್ಲ ಅಂತ ಕನಿಕರಿಸುತ್ತ ಆತನ ಆತ್ಮಕ್ಕೆ  ಶಾಂತಿ ಕೋರುವದೊಂದೆ ಈಗ ಉಳಿದಿರುವ ಮಾರ್ಗ.  ಕೆಲವರ ಕಣ್ಣುಗಳು ಜೀವನದ ಎಲ್ಲತರಹದ ಬಣ್ಣಗಳನ್ನು ನೋಡೋದೇ ಇಲ್ಲ.  ಕೆಲವರು ನೋಡುವ ಶಕ್ತಿ ಇದ್ದರೂ ಕಣ್ಣುಮುಚ್ಚಿಕೊಂಡಿರುತ್ತಾರೆ. ಇದೆಂಥ ಜೀವನದ ವೈಚಿತ್ರ್ಯ!  
ಊಟಮಾಡಿ ಕೈತೊಳಿದಾಗ ಎಫ಼್.ಎಂ. ನಲ್ಲಿ ಕೊನೆಯ ಗೀತೆ ಪ್ರಸಾರವಾಗುತ್ತಿತ್ತು.  
ಇದು ಯಾರು ಬರೆದ ಕಥೆಯೋ ನನಗಾಗಿ ಬಂದ ವ್ಯಥೆಯೋ
ಕೊನೆಹೇಗೋ ಅರಿಯಲಾರೆ, ಮರೆಯಾಗಿ ಹೋಗಲಾರೆ 
ಮಸುಕು ಮಸುಕಾದ ನೆನಪುಗಳು ಮಂಪರಿನಲ್ಲಿ ತೇಲುತ್ತಾ ಗಾಢನಿದ್ರೆಗೆ ಜಾರಿದ್ದು ಗೊತ್ತಾಗಲೇ‌ಇಲ್ಲ.


-- ಮಹೇಶ. ಶ್ರೀ. ದೇಶಪಾಂಡೆ
    (ತುಷಾರಪ್ರಿಯ)
(ದಿನಾಂಕ ೨೧.೦೪.೨೦೧೩ ರಂದು ಕರ್ಮವೀರವಾರಪತ್ರಿಕೆಯಲ್ಲಿ ಪ್ರಕಟಗೊಂಡಿರುತ್ತದೆ.) 

Monday, 30 January 2017

ಚರಮಗೀತೆಯ ಪಲ್ಲವಿ

ಚರಮಗೀತೆಯ ಪಲ್ಲವಿ


ನಿಂತ ನೆಲ ಕುಸಿಯುತಿದೆ
ಕೆಂಡದುಂಡೆ ಉಗುಳುತಿದೆ
ಹಿಮದ ರಾಶಿ ಕರಗುತಿದೆ
ಜಲಪ್ರಳಯ ಧುಮುಕುತಿದೆ
ಈ ಜಗವ ........... ಇಂಚಿಂಚಾಗಿ ನುಂಗುತಿದೆ

ಹಸಿರು ಕರಗಿ ಉಸಿರು ಬತ್ತುತಿದೆ
ನಿನ್ನಂಗಳ ಕಾಪಾಡದ ಲೋಭಿ!
ಮಂಗಳನಂಗಳದ ಮೋಹ ನಿನಗ್ಯಾಕೋ?
ನಿಂತ ನೆಲ ಒದ್ದು ಅಂಬರವೇರುವ ಚಪಲವ್ಯಾಕೋ?
ನಿನ್ನೂರಿಗೆ ಕೊಳ್ಳಿ ಇಟ್ಟು ಪಕ್ಕದೂರ ಹುಡುಕಾಟ ಬೇಕಾ?
ನಾಚಿಕೆಯಾಗಬೇಕು............

ನೆಲೆ ಕೊಟ್ಟ ನೆಲವ ನೆನೆಸು
ಉಸಿರು ಕೊಟ್ಟ ಹಸಿರು ಉಳಿಸು
ಬೊಗಸೆ ಜಲವ ಕಣ್ಣೊತ್ತಿ ಆಪೋಷಿಸು

ಅಂಗೈಯಲಿ ಬೆಣ್ಣೆ...........
ತುಪ್ಪಕ್ಕೆ ಹುಡುಕಾಟ............
ಮೂರ್ಖನಲ್ಲವೇ ನೀನು?
ನಿನ್ನ ಮನೆ ಗೆಲ್ಲದ ನೀನು
ದೇವರಿಲ್ಲದ ತೇರು ಎಳೆಯ ಹೊರಟಂತಿದೆ!
'ಹಾರುವ ತಟ್ಟೆ'ಗೆ ಮಂಗಳಾರತಿ ಎತ್ತುವ
ಕಾಲ ಬಂದರೂ ಬಂದೀತು!
ದುಡುಕಬೇಡ............
ನಿಂತ ನೆಲ ಒದೆಯಬೇಡ
ಚರಮಗೀತೆಯ ಚರಣಕ್ಕೆ ಪಲ್ಲವಿಯಾಗಬೇಡ
(ವಿಜ್ಞಾನಿಗಳ ಕ್ಷಮೆಯಾಚಿಸುತ್ತಾ)

-- ಮಹೇಶ್ ಶ್ರೀ ದೇಶಪಾಂಡೆ
(ತುಷಾರಪ್ರಿಯ)

Tuesday, 24 January 2017

ಮಾತಿನ ಗತಿ - ಸಹನೆಯ ಮಿತಿ

ಮಾತಿನ ಗತಿ - ಸಹನೆಯ ಮಿತಿ

" ನುಡಿದರೆ ಮುತ್ತಿನ ಹಾರದಂತಿರಬೇಕು.
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು.
ನುಡಿದರೆ ಸ್ಪಟಿಕದ ಶಲಾಕೆಯಂತಿರಬೇಕು.
ನುಡಿದರೆ ಲಿಂಗಮೆಚ್ಚಿ ಅಹುದೆನಬೇಕು.
ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮದೇವನೆಂತೊಲಿವನಯ್ಯ? "

ನಮ್ಮ ನಡೆನುಡಿಗಳು ಹೇಗಿರಬೇಕೆಂದು ನಮ್ಮ ನಾಡಿನ ವಚನಕಾರರು ಬಹಳ ಹಿಂದೆಯೆ ಮಾರ್ಗದರ್ಶನ ಹಾಕಿ ಕೊಟ್ಟಿದ್ದಾರೆ. 


ಆದರೆ ಕೆಲವರು ಅತಿಯಾದ ಮಾತಿನ ಚಟ ಅಂಟಿಸಿಕೊಂಡುಬಿಟ್ಟಿರುತ್ತಾರೆ. ಸಮಯ ಸಂದರ್ಭಗಳ ಪರಿವೆ ಇಲ್ಲದೆ ಬಡಬಡಾಯಿಸುವುದೇ ಇವರಿಗೆ ಗೀಳಾಗಿಬಿಟ್ಟುರಿತ್ತದೆ. ಎದುರಿಗಿದ್ದವರು ಕೇಳಿಸಿಕೊಳ್ಳುತ್ತಾರೋ! ಇಲ್ಲವೋ! ಅದವರಿಗೆ ಬೇಕಾಗಿಲ್ಲ.  ಹೇಳಿದ್ದನ್ನೇ ಹತ್ತಾರುಬಾರಿ ಹೇಳಿ ಎದುರಿಗಿದ್ದವರ ಸಹನೆ ಕೆಣಕುತ್ತಾರೆ. ಮಿತಿ ಇಲ್ಲದ ಮಾತುಗಳನ್ನು ಹೀಗೆ ಆಡುವುದರಿಂದ ಅವರು ಅದೇನನ್ನೋ ಸಾಧಿಸಿ ಗೆದ್ದವರಂತೆ ಬೀಗುತ್ತಾರೆ. ಎದುರಿಗಿದ್ದವರ ಮೌನವನ್ನು ಅವರು ಕೊಟ್ಟ ಸಮ್ಮತಿಯೆಂದು ಅರ್ಥೈಸಿಕೊಂಡು ತಮ್ಮ ಮಾತಿನ ಓಘವನ್ನು ನಿಲ್ಲಿಸುವುದೇ ಇಲ್ಲ.  ಮಾತುಗಳನ್ನೆ ಬಂಡವಾಳ ಮಾಡಿಕೊಂಡ ಇಂಥವರು ಬಡಾಯಿ ಕೊಚ್ಚಿಕೊಳ್ಳುತ್ತಲೇ ಇರುತ್ತಾರೆ.  ಈ ರೀತಿ ಅತಿಯಾಗಿ ಮಾತನಾಡುವವರು ವರ್ಚಸ್ಸು ಅಧಿಕಾರ ಮುಂತಾದವುಗಳ ಬಗ್ಗೆ ರೈಲುಬಂಡಿ ಬಿಡುತ್ತಲೇ ಇರುತ್ತಾರೆ.  ಆದರೆ ಹೀಗೆ ಅತಿ ಮಾತುಗಳಿಂದ  ತಮ್ಮ ಘನತೆಯನ್ನು ತಾವೇ ಹಾಳುಮಾಡಿಕೊಂಡು ಎದುರಿಗಿದ್ದವರ ಮುಂದೆ ಚಿಕ್ಕವರಾಗಿ ಬಿಡುವುದು ಇವರ ಗಮನಕ್ಕೆ ಬಂದರೂ ಅದನ್ನು ಮರೆಮಾಚಿ ಉಡಾಫೆ ಮಾಡುವುದು ಇಂತರವರಿಗೆ ಕರಗತವಾಗಿಬಿಟ್ಟಿರುತ್ತದೆ. ಈ ರೀತಿ ಬೊಗಳೆ ಬಿಡುವವರಿಗೆ ಘನತೆ ಬೇರೆ ಕೇಡು! ತೂತು ಒಲೆ ಕೆಡಿಸಿತು - ಮಾತು ಮನೆ ಕೆಡಿಸಿತು ಎಂಬುದು ಈ ತರಹದವರಿಗೆ ಹೇಳಿ ಮಾಡಿಸಿದ ಅಣಿಮುತ್ತು ಎಂದರೆ ತಪ್ಪಾಗಲಾರದು.  ಮೌನದಿಂದ ಕೇಳಿಸುಕೊಳ್ಳುವವರ ಸಹನೆಯ ಕಟ್ಟೆಯೊಡೆದು ತಿರುಗಿಬಿದ್ದರೆ ದೊಡ್ಡ ರಂಪರಾದ್ಧಾಂತಗಳೆ ಘಟಿಸಿಬಿಡುತ್ತದೆ.  ಏನೆಲ್ಲ ರಂಪಗಳಾದರೂ ಕೆಲ ಸಮಯದ ಮಟ್ಟಿಗೆ ಸುಮ್ಮನಿದ್ದು ಮತ್ತೆ ಅದೇ ಹಳೇ ಚಾಳಿಯನ್ನು ಮುಂದುವರೆಸುತ್ತಾರೆ.  ಹೀಗೆ ಅತಿಯಾಗಿ ಮಾತನಾಡುವುದು ಒಂದು ಮಾನಸಿಕ ಕಾಯಿಲೆ ಇದ್ದರೂ ಇರಬಹುದೇನೋ!? 

ಮಾತು ಬೆಳ್ಳಿ - ಮೌನ ಬಂಗಾರ ಎಂಬ ನುಡಿಗಟ್ಟು ಮೌನಕ್ಕಿರುವ ಶಕ್ತಿಯನ್ನು ಸಾರುತ್ತದೆ. ಮಾತಿನಿಂದ ಸಾಧಿಸಲಾಗದ ಅದೆಷ್ಟೋ ಕೆಲಸಗಳನ್ನು ಮೌನ  ಸರಾಗವಾಗಿ ನಿಭಾಯಿಸಿಬಿಡುತ್ತದೆ .  ಇಂತಹ ಸತ್ಯಗಳನ್ನು ವಾಚಾಳಿಗಳಿಗೆ ಅರ್ಥ ಮಾಡಿಸುವುದಾದರೂ ಹೇಗೆ? ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ  ಎಂದು ಶ್ರೀ ಪುರಂದರದಾಸರು ನಮ್ಮಲ್ಲಡಗಿರುವ ಮನೋವಿಕಾರಗಳಿಗೆ ಬರೆ ಎಳೆದಿದ್ದಾರೆ. ವಾಚಾಳಿಗಳು ಪ್ರಾಮಾಣಿಕರಲ್ಲ ಎಂಬುದು ನನ್ನ ಅಭಿಪ್ರಾಯ.  ಸುಳ್ಳುಗಳ ಸರಪಳಿ ಪೋಣೀಸುತ್ತಾ ಸ್ವಾರ್ಥ ಸಾಧಿಸುವುದೇ ಇವರ ಮುಖ್ಯ ಗುರಿ.  ಪ್ರಾಮಾಣಿಕಾರಾರೂ ತಾವು ಸತ್ಯವಂತರೆಂದು ಹಣೆ ಪಟ್ಟಿ ಕಟ್ಟಿಕೊಂಡು ಓಡಾಡುವುದಿಲ್ಲ. ಅವರ ಜೀವನದ ಸಾಧನೆಗಳು ಯಶಸ್ಸಿಗೆ ಹಿಡಿದ ಕನ್ನಡಿಯಂತೆ ಪ್ರತಿಫಲಿಸುತ್ತಲೇ ಇರುತ್ತದೆ. ಈ ಸತ್ಯವನ್ನು ಅರಿತವರು ಖಂಡಿತವಾಗಿ ಸಾರ್ಥಕ ಜೀವನ ನಡೆಸುತ್ತಾರೆ.  ಅಲ್ಲದೆ ಇತರರಿಗೂ ಆದರ್ಶಪ್ರಾಯರಾಗುತ್ತಾರೆ.

ಕೆಸರು ತುಂಬಿರೋ ಮನಸಲ್ಲಿ ಕುಸುಮ ಹೇಗೆ ಅರಳೀತು!? ಅಲ್ಲಿ ಏನಾದರೂ ಚಿಗುರಿದರೆ ಅದು ಪಾಪಾಸುಕಳ್ಳಿಯೇ ಆದೀತು!?   

ಏನಂತೀರಿ!?
-- ಮಹೇಶ ಶ್ರೀ. ದೇಶಪಾಂಡೆ
ತುಷಾರಪ್ರಿಯ

Sunday, 22 January 2017

ಬೆಳದಿಂಗಳ ನಗೆ

ಬೆಳದಿಂಗಳ ನಗೆ



ದೂರ ದೂರಕೆ ಹರಡಿದೆ
ಹಸಿರು ಹೊದಿಕೆಯ ಸೆರಗು
ಮೆಲ್ಲಮೆಲ್ಲನೆ ಕರೆಯಲು
ಹಿಮದ ಹನಿಗಳು ಉದುರಿವೆ
ಹಿಮದ ಮಣಿಗಳ ಮುಸುಕಲಿ
ಸರಸವಾಡುತ ನಲಿದಿದೆ
ಹುಣ್ಣಿಮೆ ಚಂದ್ರನ ಬೆಳಕು
ಸರಸವಾಡಲು ಕರೆಯಲು
ಹಿಮದ ಮಣಿಗಳು ಕರಗಿವೆ
ಹಿಮದ ಹೊದಿಕೆಯ ಸರಿಸುತ
ಹಸಿರು ಸೆರಗಲಿ ಇಣುಕಿದೆ
ಬೆಳದಿಂಗಳ ನಗೆ ಹರಡಿದೆ
ಕನಸು ಕಾಣುವ ನೋಟದಿ
ಮನಸು ಬೆಸೆಯುವ ಆಸೆಯಲಿ ........... 


--ಮಹೇಶ ಶ್ರೀ. ದೇಶಪಾಂಡೆ
       ತುಷಾರಪ್ರಿಯ

Friday, 20 January 2017

’ಟೆಲಿಫೋನ್ ಕರೆ’



 ಟೆಲಿಫೋನ್ ಕರೆ


ಟ್ರಿನ್ ಟ್ರಿನ್………… ಟ್ರಿನ್ ಟ್ರಿನ್………… ಟ್ರಿನ್ ಟ್ರಿನ್…………. ಟ್ರಿನ್ …….ಟೆಲಿಫೋನ್ ಗಂಟೆಯ ಸದ್ದು ಗಾಢನಿದ್ರೆಯಲ್ಲಿದ್ದ ನನ್ನನ್ನು ಎಚ್ಚರ ಮಾಡಿತು. ನಿದ್ದೆಕಣ್ಣಲ್ಲಿ ರೀಸಿವರ್ ಎತ್ತಿಕೊಂಡು ಹಲೋ……….. ಹಲೋ……….. ಯಾರ್ರೀ……. ಅದು……..ಇಷ್ಟೊತ್ತಲ್ಲಿ?ಅಂತ ಗೊಣಗಿದೆ. ಆ ಕಡೆಯಿಂದ ರೀಗೋಪಾಲಯ್ಯ ನಿಮಗೊಂಚೂರೂ ಜವಾಬ್ದಾರಿ ಅನ್ನೋದು ಇಲ್ಲಲ್ರಿ………..ನಾ ಸ್ಟೇಷನ್ಗೆ ಬರೋತನಕ ಜೂನಿಯರ್ಗಳ ಮೇಲೆ ಎಲ್ಲಾ ಕೆಲಸ ಬಿಟ್ಟು ಹೊರಟು ಬಿಡಬ್ಯಾಡ್ರಿ ಅಂತ ಹೇಳಿದ್ದಿಲ್ಲೇನ್ರಿ? ರಾತ್ರಿ ಹೊತ್ನಲ್ಲಿ ಇನ್ಸ್ಪೆಕ್ಟರ್ ಹತ್ತಿರ ಮಂಗಳಾರತಿಯಾಗುತ್ತಿತ್ತು. ಈಗಿಂದೀಗಲೇ ಸ್ಟೇಶನ್ಗೆ ಹೊರಟು ಬರ್ರಿ……….. ನಾವು ತಾಬಡ ತೊಬಡ ಯಲವಿಗೆ ರೇಲ್ವೆಸ್ಟೇಷನ್ನಿಗೆ ಹೊರಡಬೇಕು. ಯಾಕೆ? ಏನು? ಅಂತ ಕೇಳುವಷ್ಟರಲ್ಲೇ ಲೈನ್ ಕಟ್ಟಾಗಿತ್ತು. ಕಣ್ಣುಜ್ಜಿಕೊಂಡು ಲೈಟ್ ಹಾಕಿ ಟೈಮ್ ನೋಡಿದೆ, ರಾತ್ರಿ12:25 ಲಗುಬಗೆಯಿಂದ ಮುಖತೊಳೆದು ಯುನಿಫಾರಂ ಹಾಕಿಕೊಂಡು ಮನೆಗೆ ಬೀಗ ಜಡಿದು ಹೊರಟೆ. ಸ್ಟೇಷನ್ಗೆ ಕೊಂಚ ಹತ್ತಿರದಲ್ಲಿ ಇದ್ದ ಪೋಲೀಸ್ ಕ್ವಾರ್ಟರ್ಸ್ ದಾಟಿಕೊಂಡು ಎಡಕ್ಕೆ ತಿರುಗಿದರೆ, ಸ್ಟೇಷನ್ 5 ನಿಮಿಷದ ದಾರಿ. ರೈಟರ್ ಕೆಲಸದಲ್ಲಿದ್ದ ನಾನು ಇಷ್ಟೋತ್ತಲ್ಲಿ ಏನು ಅರ್ಜಂಟ್ ಇದ್ದೀತು. ಅಂತ ಮನಸ್ಸಿನಲ್ಲೇ ಲೆಕ್ಕಚಾರ ಹಾಕುತ್ತ ಸ್ಟೇಷನ್ ಬಾಗಿಲು ತಲುಪಿದೆ. ಇನ್ಸ್ಪೆಕ್ಟರ್ರಿಂದ ಹಿಡಿದು ಎಲ್ಲಾ ಸಹೋದ್ಯೋಗಿಗಳು ಬಹಳ ಗಡಿಬಿಡಿಯಲ್ಲಿದ್ದರು. ಇನ್ಸ್ಪೆಕ್ಟರ್ ಪೋನಿನಲ್ಲಿ ಮಾತಾನಾಡುತ್ತಿದ್ದರು. ಬಹುಶ: ಸೀನಿಯರ್ ಆಫೀಸರ್ ಇರಬೇಕು, ಯಾವುದೋ ಅಪಘಾತದ ವಿವರಣೆ ಕೊಡುತ್ತಿದ್ದರು. ನಾನು ಅವರ ಎದುರು ನಿಂತವನೆ ಎದೆಯುಬ್ಬಿಸಿ ಸೆಲ್ಯೂಟ್ ಹೊಡೆದೆ. ನೋಡಿದರೂ ನೋಡದಂತಿದ್ದ ಅವರು ಸಿನಿಯರ್ ಆಫೀಸರ್ ಕಡೆಯಿಂದ ಆಜ್ಞೆಗಳನ್ನು ಸ್ವೀಕರಿಸುವುದು ಅವರ ಅಂಗಿಕ ಭಾಷೆಯಿಂದ ಅರ್ಥವಾಗುತ್ತಿತ್ತು. ಸಹೋದ್ಯೋಗಿ ಕಮಲಾಕರನತ್ತ ಏನು ವಿಷಯ ಎಂಬಂತೆ ತಿರುಗಿದೆ, ಅದಕ್ಕವನು. ಈಗ ಸ್ವಲ್ಪ ಹೊತ್ತಿಗೆ ಮುಂಚೆ ಹುಬ್ಬಳ್ಳಿ ಕಡೆಯಿಂದ ಬೆಂಗಳೂರಿಗೆ ಹೊರಟ ಮೇಲ್ಗಾಡಿ ಯಲವಿಗೆ ಲೆವಲ್ ಕ್ರಾಸಿಂಗ್ ಹತ್ರ ಎಕ್ಸಿಡೆಂಟ್ ಆಗೇದಂತ………..ಐದಾರು ಬೋಗಿಗಳು ಗುರುತು ಸಿಗಲಾರದಷ್ಟು ನಜ್ಜುಗುಜ್ಜಾಗಿವೆಯಂತೆ. ಏನೀಲ್ಲಾ ಅಂದ್ರೂ 100 ರಿಂದ 150 ಜನರು ಪ್ರಾಣಕಳೆದುಕೊಂಡಿರಬಹುದು ಸ್ಟೇಶನ್ ಮಾಸ್ತರನ ತಪ್ಪು ಲೆಕ್ಕಾಚಾರದಿಂದಾಗಿ ಸ್ಟೇಶನ್ನಲ್ಲಿ ನಿಂತ ಗೂಡ್ಸ್ಗಾಡಿಗೆ ಪ್ಯಾಸೆಂಜರ್ ಮೇಲ್ ಗಾಡಿ ಡಿಕ್ಕಿ ಹೊಡದದಂತ. ಮುಂದುವರೆದು ನಾವೀಗ ತುರ್ತು ರಕ್ಷಣಾ ಕಾರ್ಯಗಳ ನಿರ್ವಹಣೆಗೆ ತೆರಳುವಂತೆ ಮೇಲಿನಿಂದ ಆದೇಶ ಬಂದಿದೆ. ಹುಬ್ಬಳ್ಳಿ ಮತ್ತು ಹಾವೇರಿ ಕಡೆಯಿಂದ ಹೆಚ್ಚಿನ ಪೋಲೀಸ್ ಸಿಬ್ಬಂದಿ, ಡಾಕ್ಟರುಗಳು, ಆಂಬ್ಯುಲೇನ್ಸ್ಗಳು ತುರ್ತುಚಿಕಿತ್ಸೆಗೆ ಬೇಕಾಗುವ ಸಾಮಾನುಗಳನ್ನು ತೆಗೆದುಕೊಂಡು ಹೊರಟಾಗಿದೆಯಂತೆ. ಅಗ್ನಿಶಾಮಕದಳಕ್ಕೂ ಮಾಹಿತಿ ಹೋಗೇದ. ಒಂದೇ ಉಸಿರಿಗೆ ಗೊತ್ತಿದ್ದಎಲ್ಲಾ ಮಾಹಿತಿ ಒದರಿದೆ.
ಸ್ಟೇಶನ್ ಜೀಪಿನಲ್ಲಿ ಹೊರಟ ನಾವೆಲ್ಲ ಅಪಘಾತವಾದ ಸ್ಥಳ ತಲುಪಿದಾಗ ರಾತ್ರಿ 1:15 ಆಗಿರಬಹುದು. ನಮಗಿಂತ ಮೊದಲೇ ಊರಿನ ಕೆಲ ಜನರು ಕೈಯಲ್ಲಿ ಟಾರ್ಚ್ ಹಿಡಿದು ಆ ಗಾಢಾಂಧಕಾರದಲ್ಲಿ ಬದುಕಿರುವವರನ್ನು ಹುಡುಕುತ್ತಿರುವಂತೆ ಕಾಣುತ್ತಿತ್ತು. ನಮ್ಮ ಜೀಪ್ ನೋಡಿದ ಕೆಲವರು ತಕ್ಷಣ ನಮ್ಮ ಹತ್ತಿರ ಬಂದು ಘಟನೆ ನಡೆದ ರೀತಿಯನ್ನು ತಮಗೆ ತಿಳಿದ ರೀತಿಯಲ್ಲಿ ವರದಿಮಾಡಲು ಆರಂಭಿಸಿದರು. ವಿವರಣೆಗಳನ್ನು ಕೇಳುತ್ತ ಘಟನಾ ಸ್ಥಳದ ಪರಿಶೀಲನೆಯನ್ನು ಆ ಕತ್ತಲಲ್ಲಿ ತಕ್ಕ ಮಟ್ಟಿಗೆ ಮಾಡಿದ್ದಾಯ್ತು, ಐದಾರು ಬೋಗಿಗಳು ಗುರುತಿಸಲಾರದಷ್ಟು ಜಖಂಗೊಂಡಿದ್ದವು. ಹಿಂದಿನ ಬೋಗಿಗಳು ಹಳಿತಪ್ಪಿ ಬೆಂಕಿಪೊಟ್ಟಣದಂತೆ ಎಲ್ಲೆಂದರಲ್ಲಿ ಚಿಲ್ಲಾಪಿಲ್ಲಿಯಾಗಿದ್ದವು. ನರಳುವ, ಚೀರುವ, ಗೋಳಿಡುವ, ಆಕ್ರಂದಿಸುವ, ಬೊಬ್ಬಿಡುವ ಧ್ವನಿಗಳು ಏಕಕಾಲಕ್ಕೆ ಕೇಳಿಸುತ್ತ ವಾತಾವರಣದ ಭೀಕರತೆಯನ್ನು ಸಾರುತ್ತಿದ್ದವು. ನಾವು ಮಾಡಬೇಕಾದ ಕೆಲಸಗಳ ಬಗ್ಗೆ ಮಾಹಿತಿ ನೀಡುತ್ತ ಇನ್ಸ್ಪೆಕ್ಟರ್ ಆಜ್ಞೆ ಮಾಡುತ್ತಿದ್ದರು. ಮುಖ್ಯವಾದ ಕೆಲಸವೆಂದರೆ ಹುಬ್ಬಳ್ಳಿ ಹಾಗೂ ಹಾವೇರಿಕಡೆಯಿಂದ ಬರುವ ರಕ್ಷಣಾ ಸಿಬ್ಬಂದಿಯಜೊತೆ ಸಹಕರಿಸಿ ತೀವ್ರ ಗಾಯಗೊಂಡವರನ್ನು ಹುಬ್ಬಳ್ಳಿ ಕಡೆಗೆ ಹೋಗುವ ವ್ಯಾನಗಳಿಗೂ ಹಾಗೂ ಅಲ್ಪಸ್ವಲ್ಪಗಾಯಗೊಂಡವರನ್ನು ಹಾವೇರಿಯ ಕಡೆಗೆ ಹೋಗುವ ವ್ಯಾನುಗಳಿಗೂ ರವಾನೆ ಮಾಡುವ ಕೆಲಸಕ್ಕೆ ನಾವು ನೆರವು ನೀಡಬೇಕಾಗಿತ್ತು. ಗಾಯಾಳುಗಳು ಮಾತನಾಡುವ ಸ್ಥಿತಿಯಲ್ಲಿದ್ದರೆ, ಸಾಧ್ಯವಾದರೆ ಅವರೊಂದಿಗೆ ಮಾತನಾಡಿ ಅವರ ಬಗ್ಗೆ, ಅವರ ಸಂಬಂಧಿಕರ ಬಗ್ಗೆ ಮಾಹಿತಿ ಕಲೆ ಹಾಕುವ ಜವಾಬ್ದಾರಿಯನ್ನು ವಹಿಸಿದ್ದರು. ಸುಮಾರು 2:30 ರ ಹೊತ್ತಿಗೆ ಹುಬ್ಬಳ್ಳಿ ಹಾಗೂ ಹಾವೇರಿ ಕಡೆಯಿಂದ ವೈದಕೀಯ ಸಲಕರಣೆಗಳನ್ನು ಹೊತ್ತ ವಾಹನಗಳು ಸಿಬ್ಬಂದಿ ಸಮೇತ ಆಗಮಿಸಿದವು. ಪ್ರಥಮ ಚಿಕಿತ್ಸೆ ಕೊಡುವ ತಾತ್ಕಾಲಿಕ ಟೆಂಟನ್ನು ಕ್ಷಣಾರ್ಧದಲ್ಲಿ ನಿಮರ್ಿಸಿದರು. ಸಮರೋಪಾದಿಯಲ್ಲಿ ರಕ್ಷಣಾ ಕೆಲಸಗಳು ತುಂಬಾ ವ್ಯವಸ್ಥಿತವಾಗಿ ಜರುಗಲಾರಂಭಿಸಿದವು.
ತೀವ್ರಗಾಯಗೊಂಡು ಬದುಕುಳಿದವರನ್ನು ಹಾಗೂ ಅಲ್ಪಸ್ವಲ್ಪಗಾಯಗೊಂಡವರನ್ನು ಚಿಕಿತ್ಸೆಗಾಗಿ ಸರಕಾರಿಆಸ್ಪತ್ರೆಗೆ ರವಾನಿಸುವ ಕೆಲಸ ಅಂತು ಇಂತು ಬೆಳಗಿನ ಜಾವ ನಾಲ್ಕರ ಸುಮಾರಿಗೆ ಮುಗಿಯಿತು. ಇನ್ನು ಪ್ರಾಣಕಳೆದುಕೊಂಡಿರುವ ಪ್ರಯಾಣಿಕರನ್ನು ನಜ್ಜುಗುಜ್ಜಾದ ಬೋಗಿಗಳಿಂದ ಅಗ್ನಿಶಾಮಕದಳದ ಸಿಬ್ಬಂದಿಗಳ ನೆರವಿನಿಂದ ಹೊರತರುವ ಕೆಲಸ, ಅಂತಹ ಬೋಗಿಗಳಿಂದ ಕೂಡ ಅಲ್ಪಸ್ವಲ್ಪ ಜೀವ ಹಿಡಿದುಕೊಂಡು ನರಳುತ್ತಿರುವ ಪ್ರಾಯಾಣಿಕರನ್ನು ಗಮನಿಸುವಂತೆ ನಮಗೆ ಸೂಚನೆ ನೀಡಲಾಗಿತ್ತು.
ಅಮವಾಸ್ಯೆಯ ಆ ಕತ್ತಲಲ್ಲಿ ಒಬ್ಬರ ಮುಖ ಒಬ್ಬರಿಗೆ ಕಾಣುವುದೇ ದುಸ್ತರವಾಗಿತ್ತು. ಟಾಚರ್್ಗಳ ಬೆಳಕು ಆ ಕತ್ತಲನ್ನು ಪೂತರ್ಿಯಾಗಿ ಹೋಗಲಾಡಿಸುವಷ್ಟು ಇರಲಿಲ್ಲ. ಇನ್ನು ಎರಡು ಗಂಟೆಕಾಲ ಬೆಳಕು ಹರಿಯುತ್ತದೆ. ಆಗ ಅನಾಹುತದ ಚಿತ್ರಣ ಇನ್ನೂ ಸ್ಪಷ್ಟವಾಗುತ್ತದೆ. ಆದರೆ ನಾವು ಸಮಯವನ್ನು ಹಾಳುಮಾಡುವಂತಿರಲಿಲ್ಲ. ಸಾಧ್ಯವಾದಷ್ಟು ಗಾಯಗೊಂಡ ಪ್ರಯಾಣಿಕರನ್ನು ಗುರುತಿಸಿ ವ್ಯಾನುಗಳಿಗೆ ರವಾನಿಸಿ ಅವರಿಗೆ ಹೆಚ್ಚಿನ ಚಿಕಿತ್ಸೆ ದೊರೆಯುವಂತೆ ಮಾಡಬೇಕಾಗಿತ್ತು. ಹೀಗೆ ನಜ್ಜುಗುಜ್ಜಾದ ಬೋಗಿಗಳಲ್ಲಿ ಜೀವವಿರುವ ಪ್ರಯಾಣಿಕರನ್ನು ತಡಕಾಡುತ್ತಿರುವವಾಗ ಎಲ್ಲೆಂದರಲ್ಲಿ ಬರೀ ಹೆಣಗಳು. ಆ ಕತ್ತಲಲ್ಲಿ ನಾನು ಮತ್ತು ನನ್ನ ಸಹೋದ್ಯೋಗಿ ಇಬ್ಬರೂ ಜೀವ ಇರುವ ಪ್ರಯಾಣಿಕರ ಬೇಟೆ ಶುರುಮಾಡಿಕೊಂಡೆವು. ಅವನು ಮುಂದೆ ಮುಂದೆ ಟಾರ್ಚ್ ಬೆಳಕನ್ನು ಬೀರುತ್ತ ಸಾಗುತ್ತಿದ್ದ. ನಾನು ಕೂಡ ಕಂಡ ಕಂಡ ಪ್ರಯಾಣಿಕರನ್ನು ಅಲಿಗಾಡಿಸಿ ಜೀವವಿದೆಯೋ ಇಲ್ಲವೋ ಎಂದು ಪರೀಕ್ಷಿಸುತ್ತಿದ್ದೆ. ಜೀವವಿಲ್ಲದ್ದುಗೊತ್ತಾಯಿತು ಎಂದರೆ ತಕ್ಷಣ ಮತ್ತೇ ಹುಡುಕಾಟ ಆತುರವೋ ಆತುರ ಒಂದು ಕ್ಷಣವೂ ತಡ ಮಾಡುವಂತಿರಲಿಲ್ಲ. ಹೀಗೆ ನಮ್ಮ ಹುಡುಕಾಟ ಹೆಣಗಳ ರಾಶಿಯ ಮಧ್ಯೆ ಜೀವಹಿಡಿದುಕೊಂಡಿರುವ ಗಾಯಾಳುಗಳತ್ತ ಕೇಂದ್ರೀಕೃತವಾಗಿತ್ತು. ಕೂತಕೂತಲ್ಲೆ ಪ್ರಾಣ ಬಿಟ್ಟವರೆಷ್ಟೊ? ಏನಾಯಿತೆಂದು ತಿಳಿಯುವ ಮೊದಲೇ ಜೀವ ಕಳೆದುಕೊಂಡವರೆಷ್ಟೋ? ಲೆಕ್ಕವಿಲ್ಲ. ಎಷ್ಟೆಲ್ಲ ನೋವು ಅನುಭವಿಸರಬೇಡ! ಅಂತೆಲ್ಲ ಯೋಚಿಸುತ್ತಿರುವಂತೆ ಬೋಗಿಯ ತುಂಬ ಟಾರ್ಚ್ ಬೆಳಕನ್ನು ಒಂದೊಂದು ಮುಖದತ್ತ ಬಿಡುತ್ತ ನನ್ನ ಸಹೋದ್ಯೋಗಿ ಸಾಗುತ್ತಿದ್ದ. ಎಷ್ಟೊ ಪ್ರಾಯಣಿಕರ ಮುಖಗಳು ಗುರುತು ಸಿಗಲಾರದಷ್ಟು ಪೆಟ್ಟು ತಿಂದು ಅಸುನೀಗಿಸಿದ್ದರು.
ಮಹಿಳೆಯರ ಬೋಗಿಯತ್ತ ನಮ್ಮ ಹುಡುಕಾಟ ಆರಂಭವಾಯಿತು. ಒಂದೇ ಒಂದು ಜೀವವಿರುವ ಲಕ್ಷಣಗಳು ಕಂಡುಬರಲಿಲ್ಲ. ಒಂದೊಂದು ಹೆಣದ ಮೆಲೆ ಟಾರ್ಚ್ ಬೆಳಕು ಬೀಳುತ್ತಿದ್ದಂತೆ ಕೊರಳಿನಲ್ಲಿರುವ, ಕಿವಿಯಲ್ಲಿರುವ ಆಭರಣಗಳ ಮಿಂಚು ನನ್ನ ಬುದ್ದಿಯನ್ನು ಮಂಕಾಗಿಸಿತು. ಒಂದು ಕ್ಷಣ ಮನಸ್ಸು ವಿಚಲಿತವಾಯಿತು. ದುಷ್ಟಯೋಚನೆಯೊಂದು ಸುಳಿದಾಡಿ ಕಾರ್ಯರೂಪಕ್ಕೆ ತರುವ ಹುನ್ನಾರ ಮಾಡಿ ನನ್ನ ಸಹೋದ್ಯೋಗಿಯಿಂದ ಬೇಕುಅಂತಲೇ ಬೇರ್ಪಡೆಗೊಂಡೆ. ಒಂದೆರಡು ಹೆಣಗಳನ್ನು ತಡಕಾಡಿ ಕೊರಳಲ್ಲಿದ್ದ ಸರ ಮತ್ತು ಬಳೆಗಳನ್ನು ತೆಗೆದುಕೊಳ್ಳುವಷ್ಟರಲ್ಲಿ ನನ್ನ ಸಹೋದ್ಯೋಗಿ ನನ್ನನ್ನು ಹುಡುಕುತ್ತ ವಾಪಸ್ಸು ಬಂದ. ಏನೋ ಸಬೂಬು ಹೇಳಿ ಮತ್ತೆ ಅವನ ಜೊತೆ ಹುಡುಕಾಟಕ್ಕೆ ನಿಂತೆ. ನನ್ನ ಯೋಜನೆ ಅರ್ಧಂಬರ್ಧ ಆಗಿದ್ದಕ್ಕೆ ಅವನನ್ನು ಮನಸಿನಲ್ಲೆ ಶಪಿಸುತ್ತ ಅವನ ಜೊತೆ ಹೊರಟೆ. ತಡೆದುಕೊಳ್ಳಲಾರದಷ್ಟು ಕೋಪ ಉಕ್ಕಿ ಬರುತ್ತಿತ್ತು ಆದರೆ ನಾವಿರುವ ಆ ಪರಿಸ್ಥಿತಿಯಲ್ಲಿ ಅದಕ್ಕೆಲ್ಲ ಅವಕಾಶವಿರಲಿಲ್ಲ. ನಾನು ಕಳ್ಳತನದಲ್ಲಿ ಲಪಟಾಯಿಸಿದ ಆ ಸರ ಹಾಗೂ ಬಳೆಗಳು ನನ್ನ ಯುನಿಫಾರ್ಮ್ ಜೇಬಿನಲ್ಲಿ ಭದ್ರವಾಗಿದ್ದವು.
ಅಷ್ಟೊತ್ತಿಗಾಗಲೆ ರಕ್ಷಣಾಕಾರ್ಯದ ದಿಕ್ಕು ಬದಲಾಗಿ ಬೆಳಕು ಹರಿಯುವ ಸೂಚನೆ ನೀಡಿತ್ತು. ನಮಗೆ ವಹಿಸಿದ ಡ್ಯೂಟಿ ಮುಗಿದಿದೆಯೆಂದು ನಮ್ಮ ಮೇಲಾಧಿಕಾರಿಗಳಿಗೆ ಸೂಚಿಸಿ, ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ತೆರಳಿ ಹೊರಟರು. ಹತ್ತು ಗಂಟೆಯಷ್ಟೊತ್ತಿಗೆ ಪುನಃ ಸ್ಟೇಶನ್ನಿಗೆ ಬಂದು ಡ್ಯೂಟಿಗೆ ಹಾಜರಾಗಬೇಕೆಂದು ಆಜ್ಞೆಯಾಯಿತು. ಮನೆಗೆ ಬಂದವನೇ ಲಗುಬಗೆಯಿಂದ ಒಂದು ಬಟ್ಟೆಯಲ್ಲಿ ಸುತ್ತಿ ಹಳೆಯ ಟ್ರಂಕಿನ ಅಡಿಯಲ್ಲಿ ಭದ್ರವಾಗಿ ಆ ಸರ ಮತ್ತು ಬಳೆಗಳನ್ನು ಬಚ್ಚಿಟ್ಟೆ.
ಸ್ಟೇಶನ್ನಿಗೆ ಹೋಗಿದ್ದೆ ತಡ ಇನ್ಸ್ಪೆಕ್ಟರ್ ನನ್ನ ಎನ್ಕ್ವಾಯರಿ ಆರಂಭಿಸಿದರು. ಏನ್ರಿ, ಗೋಪಾಲಯ್ಯ ಮನೇಲಿ ನೀವೊಬ್ರೆ ಇದ್ದೀರಾ? ಮನೆಯವರನ್ನ ತವರಿಗೆ ಕಳಿಸಿದ್ದು ಹೇಳ್ಲೇ ಇಲ್ಲ? ಅಂತ ಕೇಳಿದರು ಬೆಳಗಾಗುವರೆಗೂ ನಡೆದ ರಕ್ಷಣಾಕಾರ್ಯದ ಬಗ್ಗೆ ಕೇಳೋದು ಬಿಟ್ಟು ಏನೇನೋ ಕೇಳೋಕೆ ಹೊರಟರಲ್ಲ: ಅಂತ ಯೋಚಿಸುತ್ತ ಹೌದ್ರಿ, ಸಾಹೇಬ್ರ, ಎಂಟತ್ತು ದಿನಾ ಆತು, ಇನ್ನೇನು ನಾಳೆ ನಾಡಿದ್ದು ಬರ್ತಾಳೆ, ಅಲ್ರಿ………..ಸಾಹೇಬ್ರ, ಈಗ ಇದನ್ನೆಲ್ಲಾ ಯಾಕ ಕೇಳ್ಲಿಕತ್ತೀರೀ? ಅಂತ ಅಂದೆ, ಅದಕ್ಕವರು, ನಿಮ್ಮ ಮಾವನ ಫೋನ್ ಬಂದಿತ್ತು, ನಿನಗೂ ಮಾತಾಡ್ಲಿಕ್ಕೆ ಟ್ರೈ ಮಾಡಿದ್ರಂತೆ. ಆದ್ರೆ ಆವರಿಗೆ ನಿನ್ನ ಮನೆ ಫೋನಿಂದ ಯಾವುದೇ ಉತ್ತರ ಸಿಗಲಿಲ್ಲಂತ ಅದಕ್ಕ ನಾನು ಬೆಳ ಬೆಳಗ್ಗೆ ಯಾಕಂತ್ರಿ ಫೋನ್ ಮಾಡಿದ್ದು, ಏನಾರ ಹೇಳಿದ್ರೇನ್ರೀ? ಅಂದೆ. ಅಲ್ಲಪಾ ನಿನ್ನ ಹೆಂಡ್ತಿ ನಿನ್ನೆರಾತ್ರೀನ ತವರು ಮನೆಯಿಂದ ಹೊರಟಾರಂತ, ಇಷ್ಟೊತ್ತಿಗೆಲ್ಲ ಬರಬೇಕಾಗಿತ್ತಲ್ಲ, ನೀ ನೋಡಿದ್ರ ನಾಳೆನಾಡಿದ್ದು ಅಂತ ರಾಗಾ ಎಳೀಲಿಕತ್ತೀ……..? ನನಗೇನೂ ಅರ್ಥವಾಗದೆ ಅವರ ಮುಖವನ್ನೊಮ್ಮೆ ನೋಡಿದೆ. ಅದಕ್ಕವರು ಅಲ್ಲಪಾ ಗೋಪಾಲಯ್ಯ, ನೀ ಖರೇನ ಬೇಜವಾಬ್ದಾರಿ ಮನಸ್ಯಾ ಅದೀನೊಡು, ಎರಡು ದಿನ ತಡದು ಹೊಂಟೋರು ನಿನಗೆ ಊಟಕ್ಕ ತ್ರಾಸ ಆಗ್ತದ ಅಂತ ನಿನ್ನೆ ರಾತ್ರೀನ ಹೊರಟಾರಂತಲ್ಲೋ? ಅಂದರು.
ಇನ್ನೇನೋ ಕೇಳಲು ಹೊರಟೋನು ಸ್ಟೇಶನ್ ಕಂಪೌಂಡ ಹತ್ತಿರ ನನ್ನ ಅತ್ತಿಮಾವನ್ನ ನೋಡಿ ದಿಗಿಲಾಯಿತು. ನಾನು ಸಾಹೇಬ್ರ ಮುಖನೋಡಿದೆ. ಅಷ್ಟೊತ್ತಿಗಾಗಲೆ ಸ್ಟೇಶನ್ ಒಳಗೆ ಬಂದ ಅವರು ನನ್ನನ್ನು ನೋಡುತ್ತಲೇ ಅಳಿಯಂದ್ರೇ, ಘಾತ ಆತ್ರಿ ಅನಾಹುತ ಆತ್ರಿ…….. ಅಂತ ಒಂದ ಸುಮನ ಬಡಕೊಳೀಕತ್ತಿದ್ದ್ರು. ಮೊದಲೆ ತಲೆಕೆಟ್ಟ ನಾನು ಅವರ ಮೇಲೆ ರೇಗಿದೆ, ‘ರೀ ಮಾವಂದ,್ರ ಏನ್ವಿಷ್ಯಾ ಅಂತ ಬರೋಬರಿ ಹೇಳ್ರಿ, ಹೀಂಗ ಘಾತ ಆತು……..ಅನಾಹುತ ಆತುಅಂದ್ರ, ನಾ ಏನ್ ತಿಳ್ಕೊಳ್ಳಿ? ಮಾತನಾಡಲು ಒದ್ದಾಡುತ್ತಿದ್ದ ಅವರು ಕುಚರ್ಿಯಲ್ಲಿ ಕುಸಿದು ಕುಳಿತರು. ಈ ಮಧ್ಯ ಬಾಯಿ ಹಾಕಿದ ಸಾಹೇಬ್ರು, ರೀ ಗೋಪಾಲಯ್ಯ, ಸುಮ್ಮಸುಮ್ಮನ ಅವರ ಮ್ಯಾಲ ಯಾಕ ರೇಗ್ತೀರಿ? ಇರೋ ವಿಷ್ಯಾ ಹೇಳ್ತೇನಿ ಕೇಳಿ, ನಿಮ್ಮ ಅತ್ತೆಮಾವಗ ಇಲ್ಲಿಗೆ ಬಲರ್ಿಕ್ಕೆ ಹೇಳಿದ್ದು ನಾನು, ನಿನ್ನ ಹೇಂಡ್ತಿ ನಿನ್ನೆ ರಾತ್ರಿ ತವರು ಮನೀಂದ……..ಹೊರಟಾರಂತ ಹೇಳಿದ್ನಲ್ಲ, ಅವರು ನಿನ್ನೆ ಅಪಘಾತಕ್ಕಿಡಾದ ಟ್ರೇನಿನ್ಯಾಗ ಹೊಂಟಿದ್ರಂತ. ನಿಮ್ಮ ಮಾವ ಬೆಳಗಿನ ವಾರ್ತೆ ಕೇಳಿ ನಿನಗೆ ಫೋನ್ ಮಾಡಿದ್ರು. ಸಿಡಿಲು ಹೊಡೆದಂತಾಗಿ ನಾನು ಕುಸಿದು ಕುಳಿತೆ ಮುಂದೇನು ಮಾಡೋದು ಅಂತ ಸಾಹೇಬ್ರ ಮುಖ ನೋಡಿದೆ. ನೋಡು ಗೋಪಾಲಯ್ಯ, ಧೈರ್ಯ ತೋಗೊ ನೀನ ಹೀಂಗ ಗಾಭರಿಯಾದ್ರ ವಯಸ್ಸಾದ ನಿಮ್ಮ ಅತ್ತಿಮಾವರ ಏನು ಮಾಡ್ಯಾರು? ಈಗ ನಾ ಹೇಳೋದು ಕೇಳು, ಇವರನ್ನು ಕರಕೊಂಡು ಹುಬ್ಬಳ್ಳಿಗೆ ಆಫೀಸ್ ಜೀಪ್ ತೊಗೊಂಡು ಹೋಗು. ಜತಿಗೆ ಒಬ್ಬನ್ನ ಕಳಿಸ್ತಿನಿ. ದಾವಾಖಾನಿವಳಗ ಹುಡುಕೊ ಕೆಲಸ ಮಾಡ್ರಿ ಅಂದರು.
ಹುಬ್ಬಳ್ಳಿ ಸರ್ಕಾರಿ ದವಾಖಾನಿ ತಲುಪಿ ಇರೋ ಬರೋ ವಾರ್ಡ ಎಲ್ಲ ಹುಡುಕಿದರೂ ಏನೂ ಪತ್ತೆ ಆಗಲಿಲ್ಲ. ನನ್ನ ಜೊತೆಗೆ ಬಂದ ಸಹೋದ್ಯೋಗಿ, ಏನೂ ತಪ್ಪ ತಿಳ್ಯಂಗಿಲ್ಲ ಅಂದ್ರ ಒಂದ ಮಾತ ಹೇಳ್ತೇನ್ರಿ ಅಂದ. ಏನು? ಎಂಬಂತೆ ಅವನತ್ತ ನೋಡಿದೆ. ಕಡೆ ಪ್ರಯತ್ನ ಅಂತ ಶವಾಗಾರ ಒಂದಸರ್ತಿ ನೋಡಿಬರೋಣ ಅಂದ. ನನ್ನ ಜಂಘಾಬಲವೇ ಉಡುಗಿ ಹೋಯಿತು. ನನ್ನ ಅತ್ತೆಮಾವನಿಗೆ ಅವನೇ ಸಮಧಾನ ಪಡಿಸಿ, ಒಪ್ಪಿಸಿ, ಶವಾಗಾರದ ಒಳಗೆ ಹೋಗಿ ಹುಡುಕಲು ಪ್ರಾರಂಭಿಸಿದೆವು. ಎಲ್ಲಿಂದ ನೋಡೋದು………..ಎಲ್ಲಿಂದ ಬಿಡೋದು………..ಹೆಣಗಳ ರಾಶಿಯೆ ರಾಶಿ………..! ಪೋಸ್ಟಮಾರ್ಟಂ ಮುಗಿಸಿದ ಹೆಣಗಳು, ಪೋಸ್ಟಮಾರ್ಟಂ ಕ್ಯೂನಲ್ಲಿರುವ ಹೆಣಗಳು………..ಎಲ್ಲಾ ಅಸ್ತವ್ಯಸ್ತ! ಭೀಕರ ನಿರವತೆ ಒಂದುಕ್ಷಣ ತಲೆತಿರುಗಿದಂತಾಯ್ತು. ಒಂದು ಕಡೆಯಿಂದ ನಾನು ಹಾಗೂ ನನ್ನ ಸಹೋದ್ಯೋಗಿ ಹುಡುಕಲು ಆರಂಭಿಸಿದೆವು. ಇನ್ನೊಂದು ಕಡೆಯಿಂದ ನನ್ನ ಅತ್ತಿಮಾವ ಹುಡುಕಲು ಆರಂಭಿಸಿದರು, ಒಂದೈದು ನಿಮಿಷಗಳಲ್ಲೆ ನನ್ನತ್ತಿ ಜೋರಾಗಿ ಕಿರಿಚಿಕೊಂಡರು. ಹೋಗ್ಬಿಟ್ಟಲ್ಲೇ………..ನಮ್ಮನ್ನೆಲ್ಲ ಬಿಟ್ಟು……….. ಇನ್ನ ನಾವಿದ್ರ ಎಷ್ಟು………..?ಹೋದ್ರ ಎಷ್ಟು? ಅಳಿಯಂದ್ರೇ………..? ಅಂದವರೇ ಪ್ರಜ್ಞೆತಪ್ಪಿದ್ದರು. ನಾನು ಅವರಿದ್ದ ಕಡೆ ಓಡಿಬರುವಷ್ಟರಲ್ಲಿ ಇಷ್ಟೆಲ್ಲ ನಡೆದುಹೋಯಿತು. ಕೈಲಿದ್ದ ನೀರಿನ ಬಾಟಲಿನಿಂದ ನನ್ನ ಸಹೋದ್ಯೋಗಿ ಅತ್ತಿಯವರ ಮುಖಕ್ಕೆ ಸ್ವಲ್ಪ ನೀರನ್ನು ಎರಚಿದರು. ನಮ್ಮ ಪಾಲಿಗೆ ಇನ್ನು ಇವಳು ನೆನಪು ಮಾತ್ರ………..ಅಳಿಯಂದ್ರೇ..! ಮಾವ ವಿಷಾದ ನೋಟ ಬೀರಿದರು. ಉಟ್ಟಸೀರೆಯ ಗುರುತು ಹಿಡಿದು ಅತ್ತೆಯವರು ಕಿರುಚಿದರೆಂದು ಆಗ ಅರ್ಥವಾಯಿತು. ಗುರುತು ಸಿಗಲಾರದಷ್ಟು ಮುಖ ಗಾಯಗೊಂಡು ರಕ್ತಸಿಕ್ತವಾಗಿ ವಿಕಾರಗೊಂಡಿತ್ತು. ಹಬ್ಬಕ್ಕೆ ಕೂಡಿಸಿದ ಸೀರೆ ಉಟಗೊಂಡ ಹೊರಟಿದ್ಲು, ಅಳಿಯಂದ್ರೆ……….. ಏಕಾಏಕಿ ಹೊರಟನಿಂತು ನಿಮಗೆ ಸರ್ಪ್ರೈಸ್ ಕೊಡ್ತಿನಿ ಅಂತೆಲ್ಲ ಹೇಳಿದ್ಲು………..ಆದ್ರ, ಈ ವಿಧಿ ಈಗ ನಮಗ ಈ ರೀತಿ ಸರ್ಪ್ರೈಸ್ ಕೊಟ್ಟದ ನೋಡ್ರಿ. ದುಃಖ ತಡೆಯಲಾರದೆ ಬಿಕ್ಕಳಿಸಹತ್ತಿದ್ದರು. ನಿಧಾನವಾಗಿ ಕಣ್ಣುಬಿಟ್ಟ ಅತ್ತೆಯವರು ಗರಬಡಿದವರಂತೆ ಕುಳಿತುಬಿಟ್ಟರು. ಮಾತಿಲ್ಲ ಕತೆಯಿಲ್ಲ ನಾನು ಅತ್ತೆಯವರೆ, ಆಗಿದ್ದು ಆತು, ಸಮಾಧಾನ ಮಾಡ್ಕೋರಿ, ಏನಾರ ಮಾತಾಡ್ರಿ, ಹಾಗೆ ದುಃಖ ಒಳಗ ಇಟಗೊಂಡು ಕೊರಗಬಾಡ್ರಿ, ಎಲ್ಲಾ ಹೊರಗ ಹಾಕ್ರಿ, ಮನಸ್ಸಿನ ಭಾರ ಕಡ್ಮಿ ಮಾಡ್ಕೋರಿ. ಅಂತ ಏನೇನೋ ಬಡಬಡಿಸಿದೆ.
ಯಾವನೋ ನೀಚ, ನನ್ನ ಮಗಳ ಕೊಳ್ಳಾಗಿನ ಸರ, ಕೈಯ್ಯಾಗಿನ ಬಳಿ ಸೈತ ಬಿಟ್ಟಿಲ್ಲ. ………..ಹಾಳಾಗಿ ಹೋಗ……….. ಅಂತ ಲಟಿಕೆ ಮುರಿದು ಶಪಿಸುತ್ತಿದ್ದಂತೆ ನನಗೆ ಸಾವಿರ ಚೇಳುಗಳು ಒಂದೇ ಸಲ ಕುಟುಕಿದ ಹಾಗಾಯ್ತು. ಒಂದು ಕ್ಷಣದ ಚಿತ್ತಚಂಚಲತೆ ನನ್ನನ್ನು ದುರಂತ ಕೂಪದಲ್ಲಿ ಬೀಳಿಸಿ, ಆ ನೀಚ ಕೆಲಸಕ್ಕೆ ಕೈ ಹಾಕಿದ್ದು ಆತ್ಮ ಸಾಕ್ಷಿಯನ್ನು ಕೆಣಕಿದಂತಿತ್ತು. ನನ್ನ ಈ ವರ್ತನೆಯನ್ನು ಯಾರೂ ಕ್ಷಮಿಸಲಾರರು. ಅವತ್ತು ಕಾಡಿದ ಆ ನೋವು ನಾನು ಕೊನೆವರೆಗೂ ಒಂಟಿಯಾಗಿರುವ ಶಿಕ್ಷೆ ನೀಡಿತ್ತು. ನನ್ನ ಹೆಂಡತಿಯಿಂದ ಕಿತ್ತುಕೊಂಡ ಆ ಕಾಣಿಕೆಗಳು ಇನ್ನೂ ನನ್ನ ಹತ್ರ ಭಧ್ರವಾಗಿದೆ. ಯಾರ ಹತ್ರಾನೂ ಹೇಳಿಕೊಳ್ಳಲಾಗದ, ಸಂಭ್ರಮಿಸಕೊಳ್ಳದ ಆ ಕಾಣಿಕೆಗಳು ಈಗಲೂ ನನ್ನನ್ನು ಕುಟುಕುತ್ತಿವೆ. ಆ ಕ್ಷಣದ ದುರಾಸೆ ನನ್ನ ನೈತಿಕತೆಯನ್ನು ಪ್ರಶ್ನೆಮಾಡಿ ಪ್ರಪಾತಕ್ಕೆ ತಳ್ಳಿಬಿಟ್ಟಿತ್ತು. ಹೊಟ್ಟೆಪಾಡಿಗಾಗಿ ನೌಕರಿ ಮಾಡುತ್ತ ಹಾಗೂ ಹೀಗೂ 28 ವರ್ಷ ನಿಷ್ಠೆಯಿಂದ ಸೇವೆ ಸಲ್ಲಿಸಲು ಪ್ರಯತ್ನ ಪಟ್ಟೆ.
ಟ್ರಿನ್ ಟ್ರಿನ್……….. ಟ್ರಿನ್ ಟ್ರಿನ್……….. ಟ್ರಿನ್……….. ಸರ್, ಗುಡ್ ಮಾರ್ನಿಂಗ್………..ನಿಮ್ಮದು ಇವತ್ತು ಡ್ಯೂಟಿ ಕಡೆ ದಿನ ……….. ಹಂಗ……….. ನಿಮಗೊಂದು ಫೇರವೆಲ್ ಪಾರ್ಟಿ ಸಣ್ಣದಾಗಿ ನಮ್ಮ ಕಡೆಯಿಂದ ಇಟ್ಗೊಂಡೆವ್ರಿ. ನಿಮ್ಮ ಸೇವಾವಧಿವಳಗ ಯಾವ ಯಾವ ಊರೊಳಗೆ ಏನೇನು ಸರ್ವೀಸು ಮಾಡಿದ್ರಿ, ಸಮಾಜಕ್ಕೆ ಅದರಿಂದ ಏನೇನು ಉಪಯೋಗ ಆಗೇದ ನಿಮ್ಮಿಂದ ಡಿಪಾರ್ಟಮೆಂಟ್ಗೆ ಎಷ್ಟೆಷ್ಟು ಸಹಾಯ ಆಗೇದ, ಅಂತೆಲ್ಲ ನಾವೆಲ್ಲ ಸಹೋದ್ಯೋಗಿಗಳು ಸೇರಿ ಮಾತನಾಡೋರಿದ್ದೇವೆ. ಲಗೂನ ಬಂದ್ರ ಬಿಡ್ರಿ……….. ಸಾಹೇಬ್ರ ಅಂತ ಸ್ಟೇಶನ್ನಿನಿಂದ ಫೋನ್ ಬಂದಿತ್ತು.
ಹೊಗಳಿಕೆ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ನನಗೆ ಶೂಲದಲ್ಲಿ ಇರಿದಂತಾಗಿ ಕಣ್ಣುಕತ್ತಲಾಯಿತು. ಅಂದು ರಿಂಗಣಿಸಿದ ಟೆಲಿಫೋನ್ಗಂಟೆ ಒಂಟಿತನದ ಶಾಪಕೊಟ್ಟಿದ್ದರೆ, ಇಂದು ರಿಂಗಣಿಸಿದ ಟೆಲಿಫೋನ್ಗಂಟೆ ಪಾಪದ ಹೊರೆ ಹೊರೆಸಿದ ಹಾಗಿತ್ತು. ಟ್ರಂಕಿನ ಮೂಲೆಯಲ್ಲಿದ್ದ ಸರ ಹಾಗೂ ಬಳೆಗಳು ನನ್ನನ್ನು ನೋಡಿ ಅಣಗಿಸಿ ನಕ್ಕಂತಾಯ್ತು.
ಆದರೆ ಒಂಟಿತನದ ಶಾಪ ಮತ್ತು ಪಾಪಪ್ರಜ್ಞೆಯು ಕೂಪದ ವಿಮೋಚನೆ ಎಂದಿಗೋ………..! ಸಿಗಲಾರದ ಉತ್ತರಕ್ಕೆ ತಲೆಕೊಡವಿಕೊಂಡು ಭಾರವಾದ ಹೃದಯದಿಂದ ನಿಧಾನವಾಗಿ ಆಫೀಸಿನತ್ತ ಹೆಜ್ಜೆ ಹಾಕಿದೆ.

--ಮಹೇಶ್ ಶ್ರೀ ದೇಶಪಾಂಡೆ
(ತುಷಾರಪ್ರಿಯ)

Tuesday, 17 January 2017

ಅಮರ ಪ್ರೇಮ

ಅಮರ ಪ್ರೇಮ




ನೀನಿರದ ಈ ಸಂಜೆ ......... ಒಂದು ಸಂಜೆಯೇ !?!!
ನೀನಿರದ ಈ ಬಾಳು ......... ಒಂದು ಬಾಳೇ !?!!
ಇಳಿಸಂಜೆಯ ಕೆಂಪು ಕರಗುತಿದೆ ಮೆಲ್ಲನೆ
ಕತ್ತಲೆಗೂ ಮುನ್ನ ಕೈನೀಡಿ ಜೊತೆಗೂಡು
ಸವಿನೆನಪ ಬುತ್ತಿಯ ಬಿಚ್ಚುತ
ಜೊತೆಗೂಡಿ ಸಾಗೋಣ
ಸವಿಯದ ಹಾದಿಯಲಿ
ಸವಿತುತ್ತು ಸವಿಯುತ
ಸವಿಮಾತ ಮುತ್ತುಗಳ
ಮಾಲೆ ಧರಿಸೋಣ
ನೀನಿರದೆ ನಾನಿಲ್ಲ
 ನಾನಿರದೆ ನೀನಿಲ್ಲ
ಅಮರ ಪ್ರೇಮಿಗಳು ನಾವೆಂದು
ಸಾರೋಣ ಬಾ ಜಗಕೆಲ್ಲ


--ಮಹೇಶ್ ಶ್ರೀ ದೇಶಪಾಂಡೆ
(ತುಷಾರಪ್ರಿಯ)

Friday, 13 January 2017

ಛಲದ ಬಲ

ಛಲದ ಬಲ



ನಿನಗ್ಯಾಕೆ ಈ ಕಣ್ಣೀರು ........!
ಅದ್ಯಾವ ತಾಪ ಕಾಡಿದೆ ನಿನ್ನ!?
ಬತ್ತಿದ ಕಣ್ಣಾಲೆ ....... ಕರಗದ ಕಣ್ಣೀರು .......
ಬೇಗುದಿಗೆ ಬೆಂಡಾಗಿ ಬಳಲಿದೆ
ನೆಮ್ಮದಿಯ ಸುಡುತಿದೆ
ಬೇಡ ........! ನೀ ಅಳುಕಬೇಡ
ಕಣ್ಣೀರನು ಕರಗಲು ಬಿಡು
ಹೋದರೆ ಹೋದೀತು ಈ ಜಗದ ಸುಖ !
ನಿಂತರೆ ನಿಂತೀತು ಈ ಯುಗದ ಯೋಗ!
ನಾ ಸಾಕ್ಷಿಯಾಗಲಾರೆ ನಿನ್ನೀ ದುಮ್ಮಾನಕೆ!
ಏನು ಹೇಳಲಿ ನಾನು!
ಬೇಡ ......! ನೀ ಕುಸಿಯಬೇಡ 
ಎದೆ ತಟ್ಟಿ ಹೇಳು
"ಈ ಜಗದ ಜಟ್ಟಿ ನಾನೆಂದು 
ಸಾಟಿಯಿಲ್ಲ ನನಗ್ಯಾರೂ!"
ನೀ ಮೆಟ್ಟಿನಿಲ್ಲು ಈ ಜಗದ ಪರಿತಾಪ
ಆದರೂ ದುಗುಡವೊಂದು ಪರಿಪರಿಯಾಗಿ ಕಾಡಿದೆ
ನೀ ದುಡುಕಲಾರೆ ...... ನನಗದರ ಅರಿವಿದೆ ........
ಸಾಧನೆಯ ಹಾದಿಯಲಿ ಮುನ್ನುಗ್ಗಿ
ಸಾರ್ಥಕ ಬದುಕು ಬದುಕುವ
ಛಲದಂಕ ಮಲ್ಲ ನೀನೆಂದು ......

**__**__**

-- ಮಹೇಶ ಶ್ರೀ. ದೇಶಪಾಂಡೆ
        ತುಷಾರಪ್ರಿಯ 

Tuesday, 10 January 2017

ಮುತ್ತಿನ ಬೆಲೆ

ಮುತ್ತಿನ ಬೆಲೆ



ಹೆಪ್ಪು ಗಟ್ಟಿದ ಎದೆಯಿಂದ ಉದುರಿದವು ಮುತ್ತುಗಳು 
ಉನ್ಮಾದಕ್ಕೋ! ವಿಷಾದಕ್ಕೋ!
ಉತ್ತರವಿಲ್ಲ........
ಮುಲುಗುವ ನಾಟಕಕ್ಕೆ ಆತ ಮುಗುಳುನಕ್ಕ
ನಲುಗಿದಲೋಕಕೆ ತೋರಣ ಕಟ್ಟಿ........!
ಮುತ್ತುಗಳ ರಾಶಿಯಲಿ ತೇಲಿಬಿಟ್ಟ
ಆ ಮುತ್ತುಗಳ ಬೆಲೆ ಅವನಿಗೆ ಗೊತ್ತಿದೆಯೋ!
ಇಲ್ಲವೊ! ನನಗೆ ಗೊತ್ತಿಲ್ಲ!
ಆ ಮುತ್ತುಗಳ ಬೆಲೆ ಏನಂತ  ನನಗೆ ಗೊತ್ತು.
ಹೊತ್ತೇರಿದಾಗ ಹಿಟ್ಟಾಗುವುದೂ ಅದೇ ಮುತ್ತು.
ಕಣ್ಣೆದುರಿನ ಕರ್ಮ ಕಣ್ಣೀರಿಟ್ಟಾಗ ಕುದಿಯುವುದೂ ಇದೇ ಮುತ್ತು
ಜಾರತನಕೆ ಜಾರಿದ ಜೀವವಿದು........
ಕಣ್ಣು ಕತ್ತಲೆಗಟ್ಟಿ ಕತ್ತಲೆ ಮೂಲೆ........
ಬೇಡದ ವರ ನೀಡಿ...... ಕಾರಣಪುರುಷ ಕರಗಿದ........
ಪಡೆದ ವರ ಕೊರಳ ಸರವಾಯಿತೋ! ಉರುಳಾಯಿತೋ!
ಗೊತ್ತಿಲ್ಲ........
ಮುದ್ದೆಯಾಗಿರುವೆ........ ಮುತ್ತುಗಳ ರಾಶಿ ಹೊತ್ತು.
ಒದ್ದೆಯಾಗಿರುವೆ ........ಕರ್ಮವು ಮುಗುಳುನಕ್ಕ ಈ ಹೊತ್ತು
ಪನ್ನೀರ ಮಡಿಲೋ! ಕಣ್ಣೀರ ಕಡಲೋ!
ಮುಳುಗಿ ಹೋದೆ........
ತೇಲುವ ಭರವಸೆ ಬದಿಗಿಟ್ಟು......ನಾ........ ಮುಳುಗಿಹೋದೆ
ಮುತ್ತುಗಳ ರಾಶಿಯಲಿ ...... ನಾ ...... ಕಳೆದುಹೋದೆ

***

-- ಮಹೇಶ್ ಶ್ರೀ ದೇಶಪಾಂಡೆ 
ತುಷಾರಪ್ರಿಯ

Friday, 6 January 2017

ಗುರುತಿಸಿಕೊಳ್ಳುವ ಹಪ ಹಪಿ

ಗುರುತಿಸಿಕೊಳ್ಳುವ ಹಪ ಹಪಿ


                         
                      ಇತ್ತೀಚಿನ ಕೆಲವು ಘಟನೆಗಳನ್ನು ಮೆಲಕು ಹಾಕಿದಾಗ ಈ ಗುರುತಿಸಿಕೊಳ್ಳುವ ಹಪಹಪಿ ಪ್ರಸಿದ್ಧಿಯಾಗದವರು ಈ ತೊಳಲಾಟದಲ್ಲಿ ಸಿಲುಕಿ ನರಳುತ್ತಿರುವುದು ಕಂಡುಬರುತ್ತದೆ. ಅಗ್ಗದ ಪ್ರಚಾರ ಪ್ರೀಯತೆಯ ಗೀಳಿಗೂ ಗುರುತಿಸಿಕೊಳ್ಳುವ ಹಪಹಪಿಗೂ ಸಾಕಷ್ಟು ಅಂತರವಿದೆ. ಹಾಗಾದರೆ 'ಅಗ್ಗದ ಪ್ರಚಾರ ಪ್ರೀಯತೆಯ ಗೀಳು' ಹಾಗೆಂದರೇನು? ಈಗಾಗಲೆ ತಮ್ಮ ವೃತ್ತಿ ಅಥವ ಪ್ರವೃತ್ತಿ ಬದುಕಿನಲ್ಲಿ ಛಾಪು ಮೂಡಿಸಿ ಜನ ಮಾನಸದಲ್ಲಿ ನೆಲೆ ನಿಂತವರೂ ಈ ಅಗ್ಗದ ಪ್ರಚಾರ ಪ್ರೀಯತೆಯ ಗೀಳಿನಿಂದ ಹೊರತಾಗಿಲ್ಲ. ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ತಮ್ಮ ಅಭಿಪ್ರಾಯಗಳನ್ನು ಜನರ ಮೇಲೆ ಹೇರುವ ಪ್ರಯತ್ನ ಮಾಡುತ್ತ ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡುವುದೇ ಇವರ ಕೆಲಸ. ತಾವೆಲ್ಲಿ ಜನರ ನೆನೆಪಿನಿಂದ ಅಳಿಸಿ ಹೋಗುತ್ತೇವೋ ಎಂಬ ಭಯ ಇವರನ್ನು ಯಾವಾಗಲೂ ಕಾಡುತ್ತಿರುತ್ತದೆ. ಭಗವದ್ಗೀತೆ ಸುಡುವ ವಿಚಾರ-ವಿರಬಹುದು, ದೇವರ ಮೂರ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡುವ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳುವುದಿರಬಹುದು ಅಥವ ತಾವು ವಾಸಿಸುತ್ತಿರುವ ಭಾರತ ದೇಶದಲ್ಲಿ ಅಭದ್ರತೆ ಇದೆ ಎಂಬ ಭ್ರಮೆಯ ಭೂತವನ್ನು ಪಸರಿಸುವುದು ಮುಂತಾದ ಹೇಳಿಕೆಗಳಿಂದ ಅವರು ಮತೀಯ ಸೌಹಾರ್ದಕ್ಕೆ ಧಕ್ಕೆ ತರುತ್ತಾರೆ. ಪ್ರಾಂತೀಯ ಭೇದ ಭಾವ ಹುಟ್ಟು ಹಾಕುತ್ತಾರೆ. ಅನಾದಿ ಕಾಲದಿಂದಲೂ ಆಚರಿಸಿಕೊಂಡು ಬಂದಿರುವ ಧಾರ್ಮಿಕ ಸಂಪ್ರದಾಯಗಳಿಗೆ ಮೂಢನಂಬಿಕೆಯ  ಲೇಪ ಸವರುವ ಕೆಲಸ ಮಾಡುತ್ತಾರೆ. ಇವೆಲ್ಲಾ ಚಟಿವಟಿಕೆಗಳನ್ನು ಅಗ್ಗದ ಪ್ರಚಾರ ಪ್ರೀಯತೆಯ ಗೀಳು ಅನ್ನದೇ ಇನ್ನೇನು ಹೇಳಲು ಸಾಧ್ಯ? ಇಂಥ ಮಹತ್ಕಾರ್ಯಗಳನ್ನು ನಮ್ಮ ಮುದ್ರಣ ಮಾಧ್ಯಮದವರೂ, ಸಾಲದಕ್ಕೆ ವಿದ್ಯುನ್ಮಾನ ಮಾಧ್ಯಮದವರು ಟಿ.ಆರ್.ಪಿ ಎಂಬ ಪೆಡಂಭೂತಕ್ಕೆ ಅಂಟಿಕೊಂಡು ವೈಭವೀಕರಿಸುತ್ತಾರೆ. ಇಂಥ ಕಾರ್ಯಕ್ರಮಗಳನ್ನು ನಮ್ಮ ಜನರಿಗೆ ತೋರಿಸಿ ಕೃತಾರ್ಥರಾದೆವೆಂದು ಭ್ರಮಿಸುತ್ತಾರೆ. ಇದಕ್ಕಿಂತ ದೊಡ್ಡ ದುರಂತ ಇನ್ನೊಂದಿಲ್ಲ. ಒಳ್ಳೆಯ ಕೆಲಸಗಳು, ಉತ್ತಮ ವಿಷಯಗಳು ಇವರ ಕಣ್ಣಿಗೆ ಬೀಳುವುದೇ ಇಲ್ಲವೇ? ಅಥವಾ ಬಿದ್ದರೂ ಅದನ್ನು ತಿರಸ್ಕರಿಸುವ ಇಂಥ ಮನೋಭಾವಕ್ಕೆ ಏನೆನ್ನಬೇಕು? ಎಲ್ಲೋ ಒಂದು ಕಡೆ ನಾವು ನಮ್ಮ ಸಂಸ್ಕೃತಿಯ ಅಧಃಪತನಕ್ಕೆ ನಾಂದಿ ಹಾಡುತ್ತಿದ್ದೇವೆ ಅಂತ ಅನ್ನಿಸುವುದಿಲ್ಲವೇ?!


                   ಆದರೆ ಗುರುತಿಸಿಕೊಳ್ಳುವ ಹಪಹಪಿ ಅರ್ಹತೆ, ಇದ್ದೂ ಪ್ರಸಿದ್ದಿಗೆಬಾರದವರ ವ್ಯಥೆ ಒಬ್ಬ ಒಳ್ಳೆ ಸಾಹಿತಿ, ಗಾಯಕ, ಸಂಗೀತಗಾರ, ಆಟಗಾರ,ತರಬೇತುದಾರ, ನರ್ತಕ, ತನ್ನ ಕ್ಷೇತ್ರದಲ್ಲಿ ಅಸಾಧಾರಣ ಪ್ರತಿಭೆ ಫ್ರೌಡಿಮೆ ಮೆರೆದೂ ಎಷ್ಟೋಸಲ ಗುರುತಿಸಿಕೊಳ್ಳಲಾರದೆ ಮರೆಯಾಗಿ ಹೋಗುತ್ತಾರೆ. ಇತ್ತೀಚಿಗೆ ನಾನು ಒಂದೆರಡು ಕಾರ್ಯಕ್ರಮಗಳಿಗೆ ಅಹ್ವಾನದ ಮೇರೆಗೆ ಹೋಗಿದ್ದೆ ಸಭೆಯಲ್ಲಿ ಸನ್ಮಾನಿಸಿಕೊಂಡ ಹಿರಿಯ ಜೀವ ತನ್ನ ಗತಕಾಲದ ವೈಭವದ ದಿನಗಳನ್ನು ಮೇಲಿಂದ ಮೇಲೆ ಮೆಲಕು ಹಾಕಿದಾಗ ನನ್ನ ಮನಸ್ಸು ಹಿಡಿಯಾಗಿತ್ತು. ತನಗೆ ಸಿಗದ ಎಷ್ಟೋ ಪ್ರಶಸ್ತಿಗಳನ್ನು ಪಟ್ಟಿ ಮಾಡಿ ಹೇಳುತ್ತ ಸಭೆಯಲ್ಲಿ ಕುಳಿತವರಲ್ಲಿ ಯಾರಾದರೂ ಆ ಪ್ರಶಸ್ತಿ ಕೊಡಿಸುವ ಸಂಸ್ಥೆಗೆ ಸೇರಿದವರಾಗಿದ್ದರೆ ಅಥವಾ ಪರಿಚಿತರಾಗಿದ್ದರೆ, ತಮ್ಮ ಸೇವೆಯನ್ನು ಗಣನೆಗೆ ತೆಗೆದುಕೊಂಡು ಪ್ರಶಸ್ತಿಕೊಡಿಸುವಂತೆ ಅಲವತ್ತುಗೊಂಡರು. ಅವರ ಬೇಡಿಕೆ ನ್ಯಾಯಯುತವಾಗಿದ್ದರೂ ನಿವೇದಿಸಿಕೊಂಡ ಸ್ಥಳ ಸಂದರ್ಭ ಆ ವೇದಿಕೆಯ ಪರಿಧಿಗೆ ನಿಲುಕದಾಗಿತ್ತು. ಸನ್ಮಾನ ಕಾರ್ಯಕ್ರಮ ಮುಗಿದು ಭಾರವಾದ ಹೆಜ್ಜೆಗಳನ್ನಿಡುತ್ತ ಅವರು ಸಭೆಯಿಂದ ನಿರ್ಗಮಿಸಿದಂತೆ ಭಾಸವಾಯಿತು. ಇನ್ನೊಂದು ಕಡೆ ನಡೆದ ಕಾರ್ಯಕ್ರಮದಲ್ಲಿ ವೇದಿಕೆಗೆ ಕರೆಯೊದಿಲ್ಲ ಎಂಬ ಕೊರಗು ಕೆಲವರದಾದರೆ, ವೇದಿಕೆಗೆ ಕರೆದೂ ಪ್ರಶಸ್ತಿ ಪದಕಗಳನ್ನಕೊಡದೆ ಅವಮಾನಿಸಿದರೆಂದು ಕೆಲವರ ಕಣ್ಣಂಚಿನಲ್ಲಿ ನೀರಾಡಿದ್ದು ಸ್ವಜನ ಪಕ್ಷಪಾತಕ್ಕೆ ಹಿಡಿದ ಕನ್ನಡಿಯಾಗಿತ್ತು. ಇಂಥ ವಿಷಯಗಳು ನಮ್ಮ ಮಾಧ್ಯಮದವರ ಕಣ್ಣಿಗೆ ಬೀಳದಿರುವುದು ಆಶ್ಚರ್ಯ! ಅಗ್ಗದ ಪ್ರಚಾರ ಪ್ರೀಯತೆಗೀಳು ಹೊಂದಿದವರು ಬೇರೆಯವರ ಕಾಲರ್ ಪಟ್ಟಿಯನ್ನು ಜಗ್ಗಿಯಾದರೂ ಸರಿ  ಚಲಾವಣೆಯಲ್ಲಿಬೇಕು ಎಂದು ಬಯಸುತ್ತಾರೆ. ಆದರೆ ಗುರುತಿಸಿಕೊಳ್ಳುವ ಹಪಹಪಿ ಇರುವವರು ಸ್ವಾಭಿಮಾನಿಗಳು, ಸಂಕೋಚ ಸ್ವಾಭಾವದವರು ಹಾಗಂತ ಅವರು ಸಂಕುಚಿತ ಮನಸ್ಸಿನವರಂತೂ ಖಂಡಿತ ಅಲ್ಲವೇ ಅಲ್ಲ .ಅವರ ನಿಟ್ಟುಸಿರ ಬಿಸಿ ಪಕ್ಷಪಾತಿ ವ್ಯವಸ್ಥೆಯನ್ನು ಸ್ವಲ್ಪಮಟ್ಟಿಗಾದರೂ ನೆಟ್ಟಗಾಗಿಸಲಿ. ನನ್ನ ಆಶಯವೂ ಕೂಡ ಅದೆ‌ಆಗಿದೆ.

ಏನಂತೀರಿ?
                                                                                                                              -- ಮಹೇಶ ಶ್ರೀ. ದೇಶಪಾಂಡೆ
                                                                                                                                                 ತುಷಾರಪ್ರಿಯ

Wednesday, 4 January 2017

ಹಗ್ಗದ ಮೇಲಿನ ನಡಿಗೆಯೊ ............. ಎರಡು ದೊಣಿಯ ಪಯಣವೋ...........

ಹಗ್ಗದ ಮೇಲಿನ ನಡಿಗೆಯೊ ............. ಎರಡು ದೊಣಿಯ ಪಯಣವೋ...........



                        ಜೀವನಕ್ಕೊಂದು ಗುರಿ ಇರಬೇಕು.  ಆಗಲೇ ಅದು ಸಾರ್ಥಕತೆ ಪಡೆದುಕೊಳ್ಳುತ್ತದೆ.  ಗುರಿ ಇರದ ಜೀವನ ಸೂತ್ರವಿಲ್ಲದ ಗಾಳಿಪಟದಂತೆ.  ಗಾಳಿಬಂದತ್ತ ಹಾರಿ ಕೊನೆಗೊಮ್ಮೆ ನೆಲ ಕಚ್ಚುತ್ತದೆ.  ಗುರಿಗಳನ್ನು ಗೊತ್ತುಪಡಿಸುವಲ್ಲಿ ಕೂಡ ಜಾಗ್ರತೆ ವಹಿಸಬೇಕಾಗುತ್ತದೆ.  ನಿಲುಕದ ನಕ್ಷತ್ರಕ್ಕೆ ಏಣಿ ಹಾಕಿದಂತಾಗಬಾರದಲ್ವೇ !? ಹಲವರು ಸರಿಯಾದ ಗುರಿಗಳನ್ನು ನಿಗದಿಪಡಿಸಿಕೊಳ್ಳದೆ ಪರದಾಡುತ್ತಾರೆ.  ಗುರಿ ತಲುಪಲಾರದೆ ಸೋಲುತ್ತಾರೆ.

    ಇನ್ನು ಹಲವರು ಎರಡು ದೋಣಿಯ ಮೇಲೆ ಕಾಲಿಟ್ಟು ಪಯಣಿಸುವ ಮನಸ್ಥಿತಿಯಲ್ಲಿರುತ್ತಾರೆ.  ಒಂದು ದೋಣಿಯ ಪಯಣ ಇವರ ಅಹಂಗೆ ಅಡ್ಡಬರುತ್ತದೆ.  ಎರಡು ದೋಣಿಯಲ್ಲಿ ಕಾಲಿಟ್ಟು ನೀರಿನ ಮಧ್ಯದಲ್ಲಿ ಸ್ಥಿರತೆ ಕಾಪಾಡುವಲ್ಲಿ ಹೆಣಗಾಡುತ್ತಾರೆ.  ತೆರೆಗಳ ಕುಣಿತ ಒಂದೆಡೆಯಾದರೆ, ಗಾಳಿಯ ಹೊಡೆತ ಇನ್ನೊಂದೆಡೆ.  ಆಯತಪ್ಪಿ ನೀರಿಗೆ ಬಿದ್ದರೂ ಸರಿಯೇ,  ಅವರು ಆ ಗುಂಗಿನಿಂದ ಹೊರ ಬರುವುದೇ ಇಲ್ಲ.  ಸ್ಥಿಮಿತ ಕಳೆದುಕೊಂಡು ನೀರಿಗೆ ಬಿದ್ದಾದಮೇಲೆ ಈಜಲು ಬಂದರೆ ಸರಿ !  ಸ್ವಲ್ಪ ಜೀವದ ಆಸೆ ಉಳಿದೀತು!  ಈಜು ಬಾರದಿದ್ದರೆ ದೇವರೆ ಗತಿ !  ಅಲ್ಲಿಗೆ ಅವನ ತಿಥಿ! ನಾನು ಮಾಡಿದ್ದೆ ಸರಿ, ನನಗೆಲ್ಲವೂ ತಿಳಿದಿದೆ.  ನನ್ನನ್ನು ಬಿಟ್ಟರೆ ಇಲ್ಲ, ನಾನು ಹೇಳಿದಂತೆಯೆ ಎಲ್ಲ ನಡೆಯುತ್ತಿದೆ, ನಡೆಯಬೇಕು ಎಂಬ ಅಹಂಕಾರ ಬೆಳವಣಿಗೆಯನ್ನು ಚಿಗುಟಿ ಹಾಕುತ್ತದೆ.  ನಾವು ಬೇರೆಯವರು ಹೇಳಿದ್ದನ್ನು ಎಷ್ಟು ವ್ಯವಧಾನದಿಂದ ಕೇಳುತ್ತೇವೆ.  ಹೇಳಿದ ಮಾತುಗಳಲ್ಲಿ ಎಷ್ಟು ಸಕಾರಾತ್ಮಕ ಅಂಶಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತೇವೆ ಎನ್ನುವುದರ ಮೇಲೆ ನಮ್ಮ ಬೆಳವಣಿಗೆ ಅವಲಂಬಿತವಾಗಿದೆ.  ನಾವು ಒಳ್ಳೆಯ ಕೇಳುಗರಾದಷ್ಟೂ ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯ.  ಹಾಗಂತ ಹೇಳಿದ್ದಕ್ಕೆಲ್ಲ ಕೋಲೆ ಬಸವನಹಾಗೆ ತಲೆ ಅಲ್ಲಾಡಿಸುವುದು ಸರ್ವಥಾ ಸರಿಯಲ್ಲ.  ಯಾವುದನ್ನು ಕೇಳಬೇಕು, ಯಾವುದನ್ನು ಅನುಸರಿಸಬೇಕು ಎಂಬ ತುಲನಾತ್ಮಕ ಧೋರಣೆ ಕೂಡ ಬೇಕಾಗುತ್ತದೆ. 



                        ದೊಂಬರಾಟದವರು ಸ್ವಲ್ಪವೂ ಅಂಜದೇ, ಅಳುಕದೇ, ಆಯತಪ್ಪದೇ ಹಗ್ಗದ ಮೇಲೆ ನಡೆಯುವುದನ್ನು ನಾನು ಚಿಕ್ಕವನಿದ್ದಾಗ ಸಂತೆ ಜಾತ್ರೆಗಳಲ್ಲಿ ನೋಡಿದ್ದೇನೆ.  ನಮ್ಮ ಜೀವನವನ್ನು ಹಗ್ಗದ ಮೇಲಿನ ನಡಿಗೆಗೆ ಅಳವಡಿಸಿಕೊಂಡರೆ ಸರಿಯೇನೋ ಅಂತ ಅನ್ನಿಸುತ್ತದೆ.  ಏಕೆಂದರೆ ಇಲ್ಲಿ ನಮಗಿರುವ ಗುರಿ ಒಂದೇ ಒಂದು ತುದಿಯಿಂದ ಇನ್ನೊಂದು ತುದಿಗೆ ಬೀಳದಂತೆ ನಡೆದು ಯಶಸ್ವಿಯಾಗಿ ಗುರಿ ತಲುಪುವುದು.  ಬಿದ್ದರೂ ಸುಧಾರಿಸಿಕೊಂಡು ಮತ್ತೆ ಗುರಿತಲುಪಲು ಮತ್ತೆ ಮತ್ತೆ ಪ್ರಯತ್ನಿಸಬಹುದು.  ಆದರೆ ಎರಡು ದೋಣಿಯ ಪಯಣ ಅಷ್ಟು ಸುಲಭಸಾಧ್ಯವಲ್ಲ.  ಏರಡು ದೋಣಿಗಳನ್ನು ಅದರಲ್ಲಿನ ಸಾಮಗ್ರಿಗಳ ಜೊತೆಗೆ ಪಯಣಿಗನೂ ದಡ ಸೇರುವ ಕಠಿಣ ಸವಾಲು ಇಲ್ಲಿದೇ, ಯಶಸ್ವಿಯಾದವರು ಬೆರಳಣಿಕೆಯಷ್ಟು ಇರಬಹುದು.  ಆದರೆ ಸೋತವರ ಪಟ್ಟಿಯನ್ನು ಇದುವರೆಗೂ ಯಾರೂ ತಯಾರಿಸಿಲ್ಲ.  ಎರಡು ದೋಣಿಯ ಪಯಣ ತಪ್ಪು ಅಂತ ನಾನು ಇಲ್ಲಿ ಹೇಳುತ್ತಿಲ್ಲ.  ಎರಡು ದೋಣಿಗಳನ್ನು ನಡೆಸುವ ಕೌಶಲ, ಚಾಕಚಕ್ಯತೆಗಳ ಜೊತೆಗೆ ಅದೃಷ್ಟವೂ ಜೊತೆಗಿರಬೇಕು.  ಬರಿ ಅದೃಷ್ಟವನ್ನು ನಂಬಿದವರ ಎರಡು ದೋಣಿಯ ಪಯಣ ದುರಂತದಲ್ಲಿ ಕೊನೆಗೊಳ್ಳಲೂ ಬಹುದು.  ಎಷ್ಟೋಸಲ ನಮ್ಮ ಕೌಶಲ ಚಾಕಚಕ್ಯತೆಗಳು ಪರಿಸ್ಥಿತಿಯ ಹತೋಟಿಯನ್ನು ಮೀರಿ ಏನೂ ಉಪಯೋಗಕ್ಕೆ ಬರದಂತಾಗಿ ಬಿಡುತ್ತವೆ.  ಇವೆಲ್ಲವನ್ನೂ ಮೀರಿದ ಮಾನಸಿಕ ಸ್ಥಿತಪ್ರಜ್ಞತೆ ಕಾಯ್ದುಕೊಂಡರೆ ಒಂದಷ್ಟು ರಿಪೇರಿ ಕೆಲಸವನ್ನಾದರೂ ಮಾಡಿ ಜೀವನ ಸರಿಪಡಿಸಿಕೊಳ್ಳಬಹುದು.  ಈಗ ನೀವೇ ನಿರ್ಧರಿಸಿ.  ನೀವು ಮಾಡಿಕೊಳ್ಳುವ ಆಯ್ಕೆಗಳಿಗೆ ನೀವೇ ಜವಾಬ್ದಾರರು.  ಹಗ್ಗದ ಮೇಲಿನ ನಡಿಗೆ ಸಾಕೋ ?  ಎರಡು ದೋಣಿಯ ಪಯಣ ಬೇಕೋ ?

ಏನಂತಿರಿ! ? 

-- ಮಹೇಶ್ ಶ್ರೀ ದೇಶಪಾಂಡೆ
        ತುಷಾರಪ್ರಿಯ



Monday, 2 January 2017

ಪ್ರೀತಿಯ ಹುಡುಕಾಟ


ಪ್ರೀತಿಯ ಹುಡುಕಾಟ


ಪ್ರೀತಿಯ ಹುಡುಕಲು ಹೊರಟೆ
ಸಿಕ್ಕಿದರೆ ಸಿಕ್ಕೀತು ಎಂದು.........
ಪರಿಶುದ್ಧ ಮನಕೆ ದಕ್ಕೀತು ಎಂದು.........
ಸಿಗಲಾರದ ಪ್ರೀತಿಗೆ ಎಲ್ಲೆಲ್ಲೊ ಹುಡುಕಾಟ.......
ಹುಣ್ಣಿಮೆ ಚಂದ್ರನ ನಗುಮುಖದಲ್ಲಿದೆಯಾ!
ಹಗಲು ಸೂರ್ಯನ ಕಡುತಾಪದಲ್ಲಿದೆಯಾ!
ಕಾಮನಬಿಲ್ಲಿನ ಸಪ್ತವರ್ಣಗಳಲ್ಲಿದೆಯಾ!
ಸುಳಿಸುಳಿಯಾಗಿ ಬೀಸಿದ ತಂಗಾಳಿಯಲ್ಲಿದೆಯಾ!
ಬಿರಬಿರನೆ ಬೀಸಿದ ಬಿರುಗಾಳಿಯಲ್ಲಿದೆಯಾ!
ಗುಡುಗುಸಿಡಿಲುಗಳ ಮಿಂಚಲಿದೆಯಾ!
ಜುಳುಜುಳು ಹರಿವ ಝರಿಯಲ್ಲಿದೆಯಾ!
ಭೋರ್ಗರೆದು ಸುರಿವ ಜಲಪಾತದಲ್ಲಿದೆಯಾ!
ಅಲೆ‌ಅಲೆಯಾಗಿ ಅಪ್ಪಳಿಸಿದ ಕಡಲ ತೆರೆಯಲ್ಲಿದೆಯಾ!
ಕೋಗಿಲೆ ಕೊರಳ ರಾಗದಲ್ಲಿದೆಯಾ!
ನವಿಲು ಕುಣಿತದ ಸೊಬಗಲಿದೆಯಾ!
ಮರಿದುಂಬಿಯ ಝೇಂಕಾರದಲ್ಲಿದೆಯಾ!
ಕೊನೆಗೊಮ್ಮೆ ಅದನು ನಾಕಂಡೆ
ಪ್ರೇಮಿಗಳ ಪಿಸುದನಿಯ ಮೋಡಿಯಲಿ .........
ಕಣ್ಣಂಚಿನ ಆ ಕುಡಿನೋಟದ ಕಂಗಳಲಿ....... 
ಹೃದಯಬಡಿತಗಳ ತಾನದಲಿ........
ಹೃದಯ ಹೃದಯಗಳ ಅವ್ಯಕ್ತ ಭಾವದಲಿ........
ಇನ್ನೇಕೆ ಹುಡುಕಲಿ ಅದ - ಇದನು ನಾನು ....... ?
ಕೈಯ ಕೈಲಾಸದಲಿರಲು ಭುವಿ ಮತ್ತು ಭಾನು.......



--ಮಹೇಶ ಶ್ರೀ. ದೇಶಪಾಂಡೆ
ತುಷಾರಪ್ರಿಯ