Thursday, 29 June 2017

ಪ್ರೀತಿ



ಪ್ರೀತಿ


ಪ್ರೀತಿ ಹೃದಯಾಂತರಾಳದ ಒಸಗೆ
ಪ್ರೀತಿಗೇಕೆ ಅನುಕಂಪದ ಛಾಪ
ಪ್ರೀತಿ ಮನಸುಗಳ ಸಲಿಗೆ
ಪ್ರೀತಿಗೇಕೆ ಮರುಕದ ಲೇಪ
ಪ್ರೀತಿ ಆತ್ಮಗಳ ಬೆಸುಗೆ
ಪ್ರೀತಿಗೇಕೆ ಭವ ಬಂಧನದ ಕೂಪ

-- ಮಹೇಶ ಶ್ರೀ. ದೇಶಪಾಂಡೆ
ತುಷಾರಪ್ರಿಯ

Tuesday, 13 June 2017

ಮೂಕ



ಮೂಕ


ಮಾತು ಬಾರದೆ ಮೂಕನಾದೆ ನಾನು ಇಂದು
ನಿನ್ನ ಪ್ರೀತಿಯ ಆಳಕಂಡು
ನಾನಿಂದು ಅದರೊಳು ಮಿಂದು
ಆನಂದದಿ ತೇಲಾಡಿ ಎಂದೆಂದು
ಉಡುಗದಿರಲಿ ಪ್ರೀತಿ ಇನ್ನೆಂದು
ಬತ್ತದಿರಲಿ ಓಲುಮೆ ಎಂದೆಂದು
ಅನವರತ ಸಲುಹು ನನ್ನ ನಿನ್ನೆದೆಯ ಮಂದಿರದಿ
ಚ್ಯುತಿ ಬಾರದಿರಲಿ ಮಧುರ ಪ್ರೀತಿಗೆ ಇನ್ನೆಂದೂ

-- ಮಹೇಶ ಶ್ರೀ. ದೇಶಪಾಂಡೆ
ತುಷಾರಪ್ರಿಯ

Wednesday, 31 May 2017

ಆಧುನಿಕತೆ-ಆ ದಿನಗಳು


ಆಧುನಿಕತೆ-ಆ ದಿನಗಳು


ಆಧುನಿಕತೆಯಲ್ಲಿ ನಾವೆಲ್ಲ ಮುಳುಗಿ ಹೋಗಿದ್ದೇವೆ, ಕೊಚ್ಚಿ ಹೋಗಿದ್ದೇವೆ ಅಂತ ಅನ್ನಿಸುತ್ತಿಲ್ಲವೆ!  ಪರೀಕ್ಷೆಯ ಫಲಿತಾಂಶಗಳು ಪೇಪರ್‌ನಲ್ಲಿ ಪ್ರಕಟಗೊಳ್ಳುತ್ತಿದ್ದ ಆ ಕಾಲದ ಕುತೂಹಲ ಖುಷಿಯನ್ನು ಇಂದು ನಾವು ಅನುಭವಿಸುತ್ತಿಲ್ಲ.  ಬೆಳಿಗ್ಗೆ ಬರುವ ಪೇಪರಿಗೆ ರಾತ್ರಿಯೆಲ್ಲ ನಿದ್ದೆಗೆಟ್ಟು, ಪೇಪರ ಹಂಚುವ ಹುಡುಗನ ಬರುವಿಗಾಗಿ ಕಾಯ್ದು ಫಲಿತಾಂಶ ನೋಡುವ ತವಕ ಇಂದು ಇಲ್ಲವೇ ಇಲ್ಲ!  ತೋರುಬೆರಳ ತುದಿಯಲ್ಲಿ ಜಗತ್ತನ್ನೆ ನೋಡುವ ಟ್ಯಾಬ್‌ಗಳು, ಟಚ್ ಸ್ಕ್ರೀನ್ ಫೋನ್‌ಗಳು, ಸ್ಮಾರ್ಟ್ ಫೋನುಗಳು ಆ ಖುಷಿಯನ್ನೆಲ್ಲ ಕಸಿದುಕೊಂಡುಬಿಟ್ಟಿವೆ.  ಇಂದಿನ ಪೀಳಿಗೆಗೆ ಕುತೂಹಲ, ತವಕ ಎಂಬ ಶಬ್ದಗಳ ಅರ್ಥವೂ ಗೊತ್ತಿಲ್ಲ!  ಅನುಭವಿಸಿ ತಿಳಿದುಕೊಳ್ಳುವ ಅವಕಾಶವೂ ಇಲ್ಲ!  ಅದೇ ರೀತಿ ಮದುವೆ ಗುರ್ತಾಗಿರುವ ಹುಡುಗ ಹುಡುಗಿಯರು ಪತ್ರದ ನಿರೀಕ್ಷೆಯಲ್ಲಿ ಪೋಸ್ಟ್‌ಮ್ಯಾನ್ ಬರುವ ಹೊತ್ತಿಗೆ ಸರಿಯಾಗಿ ಗೇಟ ಮುಂದೆ ಬಿಸಿಲಲ್ಲಿ ಕಾಯುತ್ತ ನಿಲ್ಲುವ ಕಾಲವೊಂದಿತ್ತು!  ಈಗೇನಿದ್ದರು ವಾಟ್ಸಫ್, ಈ-ಮೇಲ್, ಫೇಸ್‌ಬುಕ್, ಚಾಟಿಂಗ್ ಅಂತ ಧಿಡೀರ ದೋಸೆ ಮುಗುಚಿದ ಹಾಗೆ ಕಣ್ಣು ಮುಚ್ಚಿ ತೆರೆಯುವುದರೊಳಗಾಗಿ ಎಲ್ಲವೂ ಖತಂ!  ಆ ಕಾಲದಲ್ಲಿ ಪತ್ರ ಹುಡುಕಿಕೊಂಡು ಫೋಸ್ಟಾಫೀಸಿಗೆ ಬೆಳಗಾನ್ ಬೆಳಗ್ಗೆ ಎದ್ದು ಪೋಸ್ಟ್‌ಮ್ಯಾನ್ ಮುಖ ನೋಡುತ್ತ ಕುಳಿತು ಬಿಡುತ್ತಿದ್ದ ಮಜಾ ಈಗೆಲ್ಲಿದೆ!  ನಮಗೇನಾದರೂ ಪತ್ರ ಬಂದಿದ್ದರೆ ಅವನ ಒಂದು ತುಂಟ ನಗೆಗೆ ನಮ್ಮ ಮೈ ರೋಮಾಂಚನಗೊಳ್ಳುತ್ತಿತ್ತು - ಖುಷಿಯನ್ನು ಹಂಚಿಕೊಂಡ ಧನ್ಯತಾಭಾವ ಇಬ್ಬರಲ್ಲೂ. ಈಗೇನಿದ್ದರೂ ನಿಮ್ಮ ಖುಷಿಯನ್ನು ನಿಮ್ಮ ಕೈಯಲ್ಲಿರುವ ಚಿಕ್ಕ ಮೂಕ ಪೆಟ್ಟಿಗೆಯೊಂದಿಗೆ ಹಂಚಿಕೊಳ್ಳಬೇಕು.  ಏನೆಲ್ಲ ಬದಲಾವಣೆ ಅಲ್ಲವೆ!

ಹೊಸ ಬಟ್ಟೆಗಳನ್ನು ತೆಗೆದುಕೊಳ್ಳಬೇಕಾದರೆ ಯುಗಾದಿ, ದೀಪಾವಳಿ, ಗಣೇಶನ ಹಬ್ಬ ಅಂತ ಕಾಯಬೇಕಾಗಿತ್ತು.  ಹಿರಿಯರು ಆಯ್ದ ಬಟ್ಟೆಗಳು, ಒಂದೇ ಥಾನಿನಲ್ಲಿ ಅಣ್ಣ ತಮ್ಮ, ಅಕ್ಕ ತಂಗಿಯರಿಗೆ ಹೊಲಿಸುತ್ತಿದ್ದರು.  ಬೆಳೆಯುವ ಮಕ್ಕಳು ಅಂತ ಒಂದೆರಡು ಇಂಚು ಜಾಸ್ತಿಯೇ ಇಡಿಸಿ ಹೊಲಿಸುತ್ತಿದ್ದರು.  ಧೊಗಲೆ ಧೊಗಲೆ ಅಂಗಿ, ಫ್ರಾಕುಗಳನ್ನು ತೊಟ್ಟು ಕುಣಿದಾಡುತ್ತಿದ್ದ ಆ ದಿನಗಳು ಮಾಯವಾಗಿ ಹೋಗಿವೆ.  ಈಗೇನಿದ್ದರು ರೆಡಿಮೇಡ್ ಕಾಲ.  ಜೇಬು ತುಂಬಾ ದುಡ್ಡು ಒಂದೆರಡು ಗಂಟೆಗಳ ಶಾಫಿಂಗ್‌ನಲ್ಲಿ ಎಲ್ಲವೂ ಮುಗಿದು ಹೋಗುತ್ತದೆ.  ಹಬ್ಬ ಹರಿದಿನಗಳಿಗಾಗಿ ಕಾಯುವ ಗೋಜು ಈಗಿಲ್ಲ.  ಮನಸ್ಸಿಗೆ ಬಂದ ತಕ್ಷಣ ಎಲ್ಲವೂ ನೆರವೇರಿಬಿಡುವ ಕಾಲದಲ್ಲಿ ನಾವಿದ್ದೇವೆ.  ಕಾಯ್ದು ಅನುಭವಿಸುವ ಸುಖದಲ್ಲಿರುವ ಮಜಾ ದಿಢೀರನೆ ಅಂದುಕೊಂಡಾಕ್ಷಣ ಅಂದುಕೊಂಡಿದ್ದೆಲ್ಲ ಸಿಗುವ ಈ ಕಾಲದಲ್ಲಿ ಎಲ್ಲವೂ ಸಪ್ಪೆ ಸಪ್ಪೆ!

ಏನಂತೀರಿ......................!?


-- ಮಹೇಶ ಶ್ರೀ. ದೇಶಪಾಂಡೆ
ತುಷಾರಪ್ರಿಯ

Monday, 29 May 2017

ತಿಜೋರಿ



ತಿಜೋರಿ


ಮನದ ತಿಜೋರಿಗೆ ಕಾಣದ ಸರಪಳಿ
ತೀರದ ಬಯಕೆಯ ಬಿಗಿದು ಜಡಿದ ಕೀಲಿ
ಭಾವ ಬಂಗಾರ ಇದರೊಳು ಇಲ್ಲ........
ಬೆಳ್ಳಿತೇರು ಹುಡುಕಿದರಿಲ್ಲಿ ಇಲ್ಲ ........
ನಗನಾಣ್ಯ ವಜ್ರಗಳ ಸುಳಿವಿಲ್ಲಿ ಇಲ್ಲ ........
ಅತ್ತ ಮುತ್ತುಗಳ ರಾಶಿಯೇ  ಎಲ್ಲ ........
ಹುಡುಕಿ ಹೆಕ್ಕಿದ ಒಲವಿನ ಕೀಲಿಕೈ........
ತಡಕಾಡಿ ತೆರೆದಾಗ ಪ್ರೀತಿಯ ಭೋರ್ಗರೆತ........
ಮಿಡಿದ ಹೃದಯಗಳ ಸುಳಿಯ ಸೆಳೆತ........
ಈಜಿ ನಲಿದಾಡಿದ ಮನಗಳ ಮಿಳಿತ........
ದಣಿದು ಸೋತು ದಡದೆದೆಗೆ ಒರಗುವ ತುಡಿತ ........
ಏನೀ ಸೆಳೆತ ........... ಏನೀ ಮಿಳಿತ ........
ಮರೆಯಲಾರದ ತುಡಿತ ........
ನಿಲ್ಲಲಾರದ ಹೃದಯ ಬಡಿತ !!!!





-- ಮಹೇಶ ಶ್ರೀ. ದೇಶಪಾಂಡೆ
ತುಷಾರಪ್ರಿಯ -- ( 56 )

Monday, 8 May 2017

ಗಮನ ಸೆಳೆಯುವ ಪ್ರವೃತ್ತಿ ಒಂದು ಮನೋವೈಕಲ್ಯ



ಗಮನ ಸೆಳೆಯುವ ಪ್ರವೃತ್ತಿ ಒಂದು ಮನೋವೈಕಲ್ಯ

(Attention Seeking Syndrome)


ಗಮನ ಸೆಳೆಯುವ ಪ್ರವೃತ್ತಿಯನ್ನು ಎಲ್ಲ ವಯೋಮಾನದವರಲ್ಲಿ ಕಾಣಬಹುದು.  ಲಿಂಗಬೇಧವಿಲ್ಲದೆ ಎಲ್ಲರಲ್ಲೂ ಕಾಣಿಸಿಕೊಳ್ಳುವ ಮನೋವೈಕಲ್ಯತೆ ಬಗ್ಗೆ ಒಂದಷ್ಟು ಚರ್ಚಿಸೋಣ.

ಒಬ್ಬ ವ್ಯಕ್ತಿ ನಿರ್ಲಕ್ಷಕ್ಕೆ ಒಳಗಾಗುತ್ತಿದ್ದಾನೆ ಎಂದು ಭಾವಿಸತೊಡಗಿದರೆ ಗಮನ ಸೆಳೆಯುವ ಪ್ರವೃತ್ತಿಗೆ ಇಳಿಯುತ್ತಾನೆ.  ಈ ಮನೋವೈಕಲ್ಯ ಚಿಕ್ಕ ಮಕ್ಕಳಲ್ಲಿ ಸರ್ವೇ ಸಾಮಾನ್ಯ.  ತಂದೆ ತಾಯಂದಿರು ಮಗುವಿನ ಬಗ್ಗೆ ತೋರಿಸುವ ನಿರ್ಲಕ್ಷತನ ಮತ್ತು ಉದಾಸೀನ ಭಾವದಿಂದ ನಡೆಸಿಕೊಳ್ಳುವ ಒಂದು ಸಣ್ಣ ಸುಳಿವು ಕೂಡ ಮಗುವಿನ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ.  ಪೋಷಕರ ಗಮನ ಸೆಳೆಯಲು ನಾನಾ ತರಹದ ಕೃತ್ಯಕ್ಕೆ ಇಳಿಯುತ್ತದೆ.  ವಿನಾಕಾರಣ ರಚ್ಚೆ ತೆಗೆಯುವುದು, ಬೇಕುಬೇಕೆಂತಲೆ ಬಿದ್ದು ಗಾಯಮಾಡಿಕೊಳ್ಳುವುದು, ಮೈಮೇಲಿನ ಬಟ್ಟೆ ಹರಿದುಕೊಳ್ಳುವಂತೆ ವರ್ತಿಸುವುದು, ಹೀಗೆ ಆ ಸಮಯಕ್ಕೆ ತೋಚಿದ ಏನಾದರೂ ಕೃತ್ಯ ಮಾಡಿ ಗಮನ ಸೆಳೆಯಲು ಪ್ರಯತ್ನಿಸುತ್ತದೆ.  ತೀರಾ ನಿರ್ಲಕ್ಷಕ್ಕೆ ಒಳಗಾಗಿದ್ದೇನೆ ಅಂತ ಮಗುವಿಗೆ ಅನ್ನಿಸತೊಡಗಿದರೆ ಗಮನ ಸೆಳೆಯುವ ಈ ಪ್ರವೃತ್ತಿ ಪ್ರಾಣ ಘಾತುಕವೂ ಆಗಿಬಿಡಬಹುದು.

ಇನ್ನು ವಯಸ್ಕರಲ್ಲಿ ಈ ತರಹದ ಪ್ರವೃತ್ತಿ ಬೇರೆ ಬೇರೆ ರೀತಿಗಳಲ್ಲಿ ವ್ಯಕ್ತವಾಗುತ್ತವೆ.  ಕೆಲವರು ಹೊಸಬಟ್ಟೆ, ವಾಚು, ಚಪ್ಪಲಿ ಆಭರಣಗಳನ್ನು ಧರಿಸಿ ಇತರರು ಗಮನಿಸಲಿ ಎಂದು ಹಾತೊರೆಯುತ್ತಾರೆ.  ನಾನಾರಿಗೂ ಕಡಿಮೆ ಇಲ್ಲ ಎಂದು ಅಹಂ ತೋರಿಸುವ ವಿಧಾನ!  ಯಾರೂ ಗಮನಿಸದಿದ್ದರೆ, ಗಮನಿಸಿಯೂ ಗಮನಿಸದಂತೆ ಇದ್ದರೆ ಖಿನ್ನತೆಗೆ ಒಳಗಾಗುತ್ತಾರೆ.

ಕೆಲಸ ಮಾಡುವ ತಾಣಗಳಲ್ಲಿ ಸಹೋದ್ಯೋಗಿಗಳು ಕೂಡ ಈ ತರಹದ ಗಮನ ಸೆಳೆಯುವ ಪ್ರವೃತ್ತಿಯಿಂದ ಹೊರತಾಗಿಲ್ಲ.  ಮೇಲಾಧಿಕಾರಿಗಳಿಂದ ಪಕ್ಕದಲ್ಲಿರುವ ಸಹೋದ್ಯೋಗಿ ಶಹಭಾಷಗಿರಿ ಪಡೆದರೆ ಕೆಲವರಿಗೆ ಸಹನೆಯಾಗುವುದಿಲ್ಲ.  ವಿನಾಕಾರಣ ಆ ಸಹೋದ್ಯೋಗಿಯ ಬಗ್ಗೆ ದ್ವೇಷ ಹಾಗೂ ಮತ್ಸರದ ಭಾವನೆ ಬೆಳೆಸಿಕೊಳ್ಳುತ್ತಾರೆ.  ಅವನಿಗಿಂತ ತಾನು ಉತ್ತಮ ಕೆಲಸಗಾರ ಎಂದು ಬಿಂಬಿಸಲು ಹೋಗಿ ನಗೆಪಾಟಲಿಗೆ ಎಷ್ಟೋ ಬಾರಿ ಈಡಾಗುತ್ತಾರೆ.  ತಮ್ಮ ಸಾಮರ್ಥ್ಯದ ಮಿತಿಯ ಅರಿವಿದ್ದರೂ ಕೈಲಾಗದ್ದನ್ನು ಸಾಧಿಸುವ ಛಲ ತೋರಿಸಿ ಗಮನ ಸೆಳೆಯುತ್ತಾರೆ.  ಹಿಡಿದ ಕೆಲಸ ಆಗದಿದ್ದಾಗ ಕೈಕೈ ಹಿಸುಕಿಕೊಳ್ಳುತ್ತಾರೆ.  ಕುಂಟು ನೆಪಗಳನ್ನು ಹುಡುಕಿ ತಪ್ಪಿಸಿಕೊಳ್ಳುವ ಪ್ರಯತ್ನ ಕೂಡ ಮಾಡುತ್ತಾರೆ.  ಮೇಲಾಧಿಕಾರಿಗಳ ಛೀಮಾರಿಗೆ ಇನ್ನೂ ಕುಗ್ಗಿ ಹೋಗುತ್ತಾರೆ.

ಗಮನ ಸೆಳೆಯುವ ಪ್ರವೃತ್ತಿ ಸಮಾಜದ ಎಲ್ಲ ವರ್ಗದ, ರಂಗದ ಜನರಲ್ಲಿ ಕಂಡು ಬರುತ್ತದೆ.  ಒಬ್ಬ ರಾಜಕಾರಣಿ ತನ್ನ ಸುತ್ತ ಯಾವಾಗಲೂ ಭಟ್ಟಂಗಿಗಳ ಗುಂಪು ಕಟ್ಟಿಕೊಂಡು ಬಡಾಯಿ ಕೊಚ್ಚಿಕೊಳ್ಳುವುದರಲ್ಲಿ  ಸುಖಿಸುತ್ತಾನೆ.  ಆದರೆ, ಪಕ್ಕದಲ್ಲಿ ಜನರೇ ಇಲ್ಲದೆ ಹೋದಲ್ಲಿ ಹುಚ್ಚು ಹಿಡಿದವನಂತೆ ವರ್ತಿಸುತ್ತಾನೆ.  ಥಳಕು ಬಳುಕಿನ ಫ್ಯಾಶನ್ ಲೋಕ, ಸಿನಿಮಾ ಜಗತ್ತು ಇದಕ್ಕೆ ಹೊರತಾಗಿಲ್ಲ.  ಒಬ್ಬ ನಟ ಅಥವಾ ನಟಿ ಸಾಧನೆಯ ಉತ್ತುಂಗಕ್ಕೇರಿದಾಗ ಸ್ವರ್ಗ ಮೂರೇ ಗೇಣು ಎಂಬ ಅಹಂ ಬೆಳೆಸಿಕೊಳ್ಳುತ್ತಾರೆ.  ತಮ್ಮ ಸುತ್ತಲೂ ಕಾಲ್ಪನಿಕ ಗೋಡೆ ನಿರ್ಮಿಸಿಕೊಂಡು ಜನಸಾಮಾನ್ಯರಿಗಿಂತ ತಾನು ಭಿನ್ನ, ತಾನೊಂದು ನಿಲುಕದ ನಕ್ಷತ್ರ ಎಂದು ಬಿಂಬಿಸುವ ಭ್ರಮೆಗೆ ಸಿಲುಕುತ್ತಾರೆ.  ಏರಿದ ಎತ್ತರ ನಿಭಾಯಿಸುವಲ್ಲಿ ಎಷ್ಟೋ ವ್ಯಕ್ತಿಗಳು ಸೋತು ಬಿಡುತ್ತಾರೆ.  ಸೋತು ಕೆಳಗಿಳಿದಾಗ ಜಗತ್ತೇ ಮುಳಿಗಿದಂತೆ ಭ್ರಮನಿರಸನಗೊಳ್ಳುತ್ತಾರೆ.  ತಮ್ಮ ಸೋಲಿಗೆ ಅವರಿವರಿಗೆ ಬೆರಳು ತೋರಿಸುತ್ತ ಇನ್ನೂ ಪಾತಾಳಕ್ಕಿಳಿದು ಬಿಡುತ್ತಾರೆ.  ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಯೆಂಬ ಅತಿರೇಕದ ನಿರ್ಧಾರಗಳನ್ನು ತೆಗೆದುಕೊಂಡು ಬಿಡುತ್ತಾರೆ.  ಮಾಯಾ ಪ್ರಪಂಚದ ಮೋಡಿಗೆ ಒಳಗಾಗಿ ನಿಜಜೀವನದ ಸತ್ಯಗಳನ್ನು ಅರಗಿಸಿಕೊಳ್ಳಲು ಹಿಂದೇಟು ಹಾಕುತ್ತಾರೆ.  ಸಾಮರ್ಥ್ಯಕ್ಕೆ ಮೀರಿದ ಕೆಲಸಕ್ಕೆ ಕೈ ಹಾಕದೆ ಇತಿಮಿತಿಯಲ್ಲಿದ್ದರೆ ಬದುಕುವ ದಾರಿ ಸುಗಮವಾಗುತ್ತದೆ.  
ಯೋಗಿ ಪಡೆದದ್ದು ಯೋಗಿಗೆ - ಜೋಗಿ ಪಡೆದದ್ದು ಜೋಗಿಗೆ, ಎಂಬ ಸತ್ಯವನ್ನು ಅರಿತರೆ ಮನಸ್ಸು ಸ್ಥಿಮಿತದಲ್ಲಿರುತ್ತದೆ.  ಕೆಲವು ಕಟುಸತ್ಯಗಳು ಅರಗಿಸಿಕೊಳ್ಳಲು ಕಷ್ಟವಾದರೂ, ಅರಗಿಸಿಕೊಳ್ಳುವ ಪ್ರಯತ್ನ ಮುಂದುವರೆಸಿದರೆ ಮಾನಸಿಕ ಸಧೃಡತೆ ತನ್ನಿಂದ ತಾನೆ ರೂಪಗೊಳ್ಳುತ್ತದೆ.

ಏನಂತೀರಿ..........!?

-- ಮಹೇಶ ಶ್ರೀ. ದೇಶಪಾಂಡೆ

ತುಷಾರಪ್ರಿಯ 

Thursday, 4 May 2017

ಏನಂತೀರಿ..................!



ದೊಡ್ಡ ಆಸ್ಪತ್ರೆಗಳ ಸಣ್ಣತನಗಳು




ವೈದ್ಯೋ ನಾರಾಯಣೋ ಹರಿಃ

              ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ವೈದ್ಯರಿಗೆ ಒಂದು ವಿಶಿಷ್ಠ ಸ್ಥಾನವಿದೆ.  ತಂತ್ರ ಜ್ಞಾನಿಗಳು, ವಕೀಲರು ಹಾಗೂ ಇತರೇ ವೃತ್ತಿ ಪರರಿಗಿಂತ ವೈದ್ಯರನ್ನು ಪೂಜ್ಯ ಸ್ಥಾನದಲ್ಲಿಟ್ಟು ಗೌರವದಿಂದ ಕಾಣುವ ಸಂಪ್ರದಾಯ ಅನುಗಾಲದಿಂದಲೂ ನಡೆಯುತ್ತಿದೆ.  ವೈದ್ಯಕೀಯ ವೃತ್ತಿಯಲ್ಲಿರುವವರು ಜೀವ ಉಳಿಸುವ ನಿಟ್ಟಿನಲ್ಲಿ ಮಾತ್ರ ಯೋಚಿಸಬೇಕು ಮತ್ತು ಹಾಗೆಯೇ ನಡೆದುಕೊಳ್ಳಬೇಕು ಎಂಬುದು ನೈತಿಕ ಸಿದ್ಧಾಂತ.  ಹಾಗಂತ ಅವರು ವೈದ್ಯಕೀಯ ವೃತ್ತಿ ಸೇರುವಾಗ ಆ ರೀತಿಯ ಪ್ರಮಾಣವಚನ ಕೂಡ ತೆಗೆದುಕೊಂಡಿರುತ್ತಾರೆ.  ಆದರೆ ಇತ್ತೀಚಿಗೆ ನನಗಾದ ಅನುಭವ ನನ್ನಲ್ಲಿ ಜಿಜ್ಞಾಸೆ ಹುಟ್ಟಿಸಿದೆ. 

                ಹೊಸ ಹೊಸ ವಿಜ್ಞಾನದ ಅವಿಷ್ಕಾರಗಳು ವೈದ್ಯಕೀಯ ರಂಗದಲ್ಲಿ ನಡೆದಿವೆ, ನಡೆಯುತ್ತಲೇ ಇವೆ.  ಈಗ್ಗೆ ೪೦-೫೦ ವರ್ಷಗಳ ಹಿಂದೆ ಅಸ್ತಮಾ/ಕ್ಷಯದಂತ ರೋಗಗಳಿಗೆ ಸೂಕ್ತ ಔಷಧಿಯು ಇರಲಿಲ್ಲ.  ಕಣ್ಣು ಕಿವಿಗಳಿಗೆ ಸಂಬಂಧಿಸಿದ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ದೊರಕದೆ ಎಷ್ಟೋ ಜನ ಕಣ್ಣು ಕಿವಿಗಳನ್ನು ಕಳೆದುಕೊಂಡ ಉದಾಹರಣೆಗಳು ಇವೆ.  ಈಗ ಅದಕ್ಕೆಲ್ಲ ಕೈಗೆಟುವ ಖರ್ಚಿನಲ್ಲಿ ಚಿಕಿತ್ಸೆ ಕೊಡಿಸಬಹುದಾಗಿದೆ.  ಮುಂದೊಂದು ದಿನ ಕ್ಯಾನ್ಸರ್, ಏಡ್ಸ್‌ನಂತ ಮಾರಕ ವ್ಯಾಧಿಗಳನ್ನು ಗುಣಪಡಿಸುವ ಔಷಧಿ ದೊರಕುವ ನಿಟ್ಟಿನಲ್ಲಿ ಸಂಶೋಧನೆಗಳು ನಡೆಯುತ್ತಲೇ ಇವೆ, ಇರಲಿ.

                 ಆದರೆ ಈಗ ನಮ್ಮ ದೇಶದಲ್ಲಿರುವ ಬಹುತೇಕ ದೊಡ್ಡ ದೊಡ್ಡ ಆಸ್ಪತ್ರ್ರೆಗಳಲ್ಲಿ ನಡೆಯುತ್ತಿರುವುದೇ ಬೇರೆ!  ಹಾಗಂತ ನಾನು ಎಲ್ಲಾ ಆಸ್ಪತ್ರೆಗಳು ಆ ರೀತಿ ನಡೆದುಕೊಳ್ಳುತ್ತಿವೆ ಅಂತ ಹೇಳಲಾರೆ. ಬಹುಪಾಲು ಆಸ್ಪತ್ರೆಗಳು ಪವಿತ್ರವಾದ ವೈದ್ಯಕೀಯ ವೃತ್ತಿಯನ್ನು ವ್ಯಾಪಾರದ ಸರಕನ್ನಾಗಿಸಿಕೊಂಡು ರೋಗಿಗಳನ್ನು ಗಿರಾಕಿಗಳಂತೆ ನಡೆಸಿಕೊಳ್ಳುತ್ತಿವೆ.  ಸಮಾಜಸೇವೆಯ ಮುಖವಾಡ ಹೊತ್ತು ಇಂಥ ದೊಡ್ಡ ಆಸ್ಪತ್ರೆ ತೆರೆಯುವವರಿಂದ ಎಂಥ ಸೇವೆ ನಿರೀಕ್ಷಿಸಲು ಸಾಧ್ಯ! 

                      ಈಗ್ಗೆ ಕೆಲ ತಿಂಗಳ ಹಿಂದೆ ನನ್ನ ಬಂಧವೊಬ್ಬರು ಹೃದಯ ಸಂಬಂಧಿ ಸಮಸ್ಯೆಗೊಳಗಾಗಿ ಆತುರಾತುರವಾಗಿ ತಮ್ಮ ಊರಿನಿಂದ ಹೊರಟು ಬೆಂಗಳೂರಿನ ಪ್ರಸಿದ್ಧ ಆಸ್ಪತ್ರೆಗೆ ದಾಖಲಾಗಿ ತುರ್ತುಚಿಕಿತ್ಸೆಗೆ ಒಳಪಡಬೇಕಾಗಿತ್ತು. ಸುಮಾರು ೪೦೦ ಕಿಲೋಮೀಟರ ಪ್ರಯಾಸಕರ ಪ್ರಯಾಣದ ನಂತರ ಆಸ್ಪತ್ರೆಯ ಸ್ವಾಗತಕಾರರಲ್ಲಿ ತಮ್ಮ ಕಷ್ಟಗಳನ್ನು ಹೇಳಿಕೊಂಡಾಗ ಅವರು ವರ್ತಿಸಿದ ರೀತಿ ನಿಜಕ್ಕೂ ಖಂಡನಾರ್ಹ.  ಈ ಬಗ್ಗೆ ಸಂಬಂಧಪಟ್ಟ ವೈದ್ಯದಲ್ಲಿ ಆ ಊರಿನ ವೈದ್ಯರು ಮೊದಲೇ ಚರ್ಚಿಸಿ ಎಲ್ಲವನ್ನು ವಿವರಿಸಲಾಗಿತ್ತು.  ಆದರೆ ರೋಗಿಯ ಚಿಕಿತ್ಸೆಯಬಗ್ಗೆ ತುರ್ತುಕಾಳಜಿ ವಹಿಸದೇ ಇಲ್ಲಸಲ್ಲದ ಪ್ರಶ್ನೆಗಳಿಗೆ ಉತ್ತರಿಸಿ ಕಾಲಹರಣವಾಗುವಂತೆ ಮಾಡಿ ಅವರ ತಾಳ್ಮೆ ಪರೀಕ್ಷಿಸಿದರು.  ಕೈಗೆಟುವ ದರದಲ್ಲಿ ವಾರ್ಡ್ ರೂಂಗಳು ಲಭ್ಯವಿದ್ದರೂ ಇಲ್ಲವೆಂದು ಹೇಳುವುದು, ರೋಗದ ತೀವ್ರತೆಯನ್ನು ಅಭ್ಯಸಿಸುವ ಇವರು ಹೆಚ್ಚುದರವಿರುವ ವಾರ್ಡ್‌ರೂಂ ಖಾಲಿ ಇದೆ ಎಂದು ಹೇಳಿ ಸ್ವಯಂ ಪ್ರೇರಣೆಯಿಂದ ಒಪ್ಪಿಕೊಳ್ಳುವಂತೆ ಮಾಡುತ್ತಾರೆ. ಒಮ್ಮೆ ನೀವು ಹೆಚ್ಚಿನ ದರದ ವಾರ್ಡ್‌ರೂಂ ಆರಿಸಿಕೊಂಡಮೇಲೆ ಮರುದಿನ ಕಡಿಮೆ ದರದ ರೂಂಗಳು ಇದ್ದರೂ ನೀವು ಅಲ್ಲಿಗೆ ಆಮೇಲೆ ಸ್ಥಳಾಂತರಗೊಂಡರೂ ಮೊದಲು ನಿಗದಿಪಡಿದ ದರವನ್ನು ಕೊಡಲೇಬೇಕೆಂಬ ನಿಯಮವಿದೆಯಂದು ನಿಮ್ಮ ಬಾಯಿಕಟ್ಟಿಹಾಕುತ್ತಾರೆ. ಚಿಕಿತ್ಸೆಗೊಳಪಡಬೇಕಾದ ರೋಗಿಯು ವೈದ್ಯಕೀಯ ಜೀವವಿಮೆ ಹೊಂದಿದ್ದಲ್ಲಿ ಅವರ ವರ್ತನೆಯಲ್ಲಿ ಒಂದು ತರಹದ ಮಿಂಚಿನ ಸಂಚಲನವಾಗುತ್ತದೆ.  ಮುಂದೆ ನಡೆಯುವ ಎಲ್ಲ ಘಟನೆಗಳು ನಿಮ್ಮನ್ನು ಮೂಕವಿಸ್ಮಿತರನ್ನಾಗಿಸುತ್ತವೆ.  ರೋಗದ ಚಿಕಿತ್ಸೆಗೆ ತಗಲುವ ವೆಚ್ಚ ಮತ್ತು ವಿಮಾಹಣದ ಲೆಕ್ಕಾಚಾರಮಾಡಿ ನೀವು ಬಿಡುಗಡೆಯಾಗುವ ದಿನದವರೆಗೂ  ವಿಮಾಹಣ ಸರಿದೂಗಿಸಿ ಬಿಡುತ್ತಾರೆ. ದಿನಕ್ಕೊಂದು ಟೆಸ್ಟ್, ಸ್ಕ್ಯಾನಿಂಗ್ ಅದು ಇದು ಅಂತ ಶಸ್ತ್ರಚಿಕಿತ್ಸೆಗೆ ಒಳಪಡುವ ಮೊದಲು ಮಾಡುವ ಎಲ್ಲ ವಿಧಾನಗಳನ್ನು ವಿಧಿವತ್ತಾಗಿ ಮುಗಿಸುತ್ತಾರೆ. ಅವಶ್ಯಕತೆ ಇರಲಿ ಬಿಡಲಿ ಎಲ್ಲ ತರಹದ ರಿಪೋರ್ಟ್‌ಗಳನ್ನು ತರಿಸಿಕೊಳ್ಳುತ್ತಾರೆ. ಒಂದಕ್ಕೆರಡು ಪಟ್ಟು ಶುಲ್ಕ ತೆರುವ  ಅನಿವಾರ್ಯತೆ ಉದ್ಭವಿಸುತ್ತದೆ.    ಆದರೆ  ಬಹುಪಾಲು ಪರೀಕ್ಷೆಗಳು ಅನಾವಶ್ಯಕವಾಗಿದ್ದರೂ ಪರೀಕ್ಷೆಗೆ ಒಳಪಡುವ ಸಂಧಿಗ್ಧತೆ ತಂದೊಡ್ಡುತ್ತಾರೆ. ಪೂರ್ವಪರೀಕ್ಷೆ ಫಲಿತಾಂಶಗಳನ್ನು ಪರಿಶೀಲನೆ ಮಾಡದೆ ಚಿಕಿತ್ಸೆಯ ನಿರ್ಧಾರ ಕಠಿಣವಾಗುತ್ತದೆಂದು ಹೆದರಿಸುತ್ತಾರೆ.  ಭಾವನಾತ್ಮಕವಾಗಿ ನಿಮ್ಮನ್ನು ಕಟ್ಟಿಹಾಕುತ್ತಾರೆ.

             ಇನ್ನು ಕೆಲ ವಿಮಾಕಂಪನಿಗಳುಕೂಡ ವ್ಯಕ್ತಿಗಳ ಪಾಲಿಸಿ ಮಾಡಿಸುವ ಮುನ್ನ ಎಷ್ಟೋ ವಿಷಯಗಳನ್ನು ಮುಚ್ಚಿಡುತ್ತಾರೆ. ವ್ಯಕ್ತಿ ಕಂತುಗಳನ್ನು ಕಟ್ಟಲು ಶುರುಮಾಡಿದ ಹಾಗೆ ಈ ವಿಮಾ ಏಜೆಂಟ್‌ಗಳು ಕಮಿಷನ್ ಪಡೆಯಲು ಆರಂಭಿಸುತ್ತಾರೆ.  ಅವಶ್ಯಕತೆ ಬಿದ್ದಾಗ ಕುಂಟು ನೆಪಗಳನ್ನು ಒಡ್ಡಿ ವಿಮಾಕಂಪನಿಗಳು ನಿಮ್ಮ ಮನವಿಯನ್ನು ತಿರಸ್ಕರಿಸಿ ಪರಿಸ್ಥಿತಿ ಇನ್ನೂ ಗಂಭೀರವಾಗುವಂತೆ ಮಾಡುತ್ತಾರೆ.  ಆಸ್ಪತ್ರೆಯಿಂದ ಬಿಡುಗಡೆಗೆ ಅವರಿವರ ಕೈಕಾಲು ಹಿಡಿದು ಹಣ ಹೊಂದಿಸಬೇಕಾದ ಪರಿಸ್ಥಿತಿಯನ್ನು ಎಷ್ಟೋ ರೋಗಿಗಳು ಅನುಭವಿಸಿದ್ದಾರೆ.  ಈಗಲೂ ಅನುಭವಿಸುತ್ತಿದ್ದಾರೆ.  ವಿಮಾ ಮಾಡಿಸುವಾಗ ಇರುವ ಆಸಕ್ತಿ ವಿಮಾಹಣ ಬಿಡುಗಡೆ ಸಮಯದಲ್ಲಿ ಇವರಲ್ಲಿ ಇರುವುದೇ ಇಲ್ಲ!

             ಈ ತರಹದ ಹಗಲು ದರೋಡೆಯನ್ನು ಖಂಡಿತವಾಗಿಯೂ ಪ್ರತಿಯೊಬ್ಬರು ವಿರೋಧಿಸಬೇಕು. ಒಬ್ಬ ರೋಗಿಯನ್ನು ಗಿರಾಕಿಯ ತರಹ ವ್ಯಾಪಾರಿ ದೃಷ್ಟಿಯಲ್ಲಿ ನಡೆಸಿಕೊಳ್ಳವುದು ನಿಲ್ಲಬೇಕು.  ಸ್ವಚ್ಚಭಾರತ ಕನಸಿನ ಜೊತೆಗೆ ಸ್ವಸ್ಥಭಾರತ ಕನಸೂ ನನಸಾಗುವತ್ತ ನಾವು ನೀವು ಚಿಂತಿಸಬೇಕಲ್ಲವೇ?

ಏನಂತೀರಿ..................!  

     -- ಮಹೇಶ್ ಶ್ರೀ. ದೇಶಪಾಂಡೆ 
       ತುಷಾರಪ್ರಿಯ




Friday, 28 April 2017

ಸಂತೆ


ಸಂತೆ


ಜೋಳಿಗೆ ಹಿಡಿದ ಮಧುರ ಜೀವನದ ಸಂತೆ
ಕಳೆದು ಹೋಯಿತು ಕಹಿಯ ಜೀವನದ ಕಂತೆ
ಬಿಕರಿಗಿಟ್ಟ ಸಾಮಾನು......ಮಾನಗಳು.....
ಬಿಕರಿಯಾಗದೆ ಉಳಿದ ಮನಗಳು......
ಕಾಲ ವರ್ಷಾಧಾರೆಯಲಿ ತೇಲಿದ ಮನ ಮಾನಗಳು
ಉಳಿದು ಹೋದವೋ.......ಮಾನಗಳು?
ಅಳಿದು ಹೋದವೋ.......ಮನಗಳು?
ಇದಕುತ್ತರ ಗೊತ್ತೇ ......ಮಾನ ಬಿಕರಿಗಿಟ್ಟ ಮಾನವಂತರೇ?
ಮುಂದೇನಾಯಿತು ಗೊತ್ತೇ........ಮನವಂತರೇ?
ಕದಡಿ ಹೋದವು ಪ್ರತಿಷ್ಠೆ ಮಾನಗಳು
ಮುದುಡಿ ಹೋದವು ಕೋಮಲ ಮನಗಳು


-- ಮಹೇಶ ಶ್ರೀ. ದೇಶಪಾಂಡೆ
ತುಷಾರಪ್ರಿಯ